ಉಪ್ಪಿನಂಗಡಿಯ ಪ್ರತಿಷ್ಠಿತ ಕಜೆ ಕುಟುಂಬದ ‘ಕೇದಾರ’ ನಿವಾಸದಲ್ಲಿ ಸಾಯಿ ಭಜನಾ ಕಾರ್ಯಕ್ರಮ
ವಿಶ್ವಾಸದಿಂದ ಪ್ರಾರ್ಥಿಸಿದರೆ ದೇವರು ಒಲಿಯುತ್ತಾರೆ – ಆದರ್ಶ ಗೋಖಲೆ

55ನೇ ವರ್ಷದ ಸಂಭ್ರಮ ಸಂಪನ್ನ

ಉಪ್ಪಿನಂಗಡಿಯ ಪ್ರತಿಷ್ಠಿತ ಕಜೆ ಕುಟುಂಬದ ‘ಕೇದಾರ’ ನಿವಾಸದಲ್ಲಿ ಪುತ್ತೂರು ಶ್ರೀ ಸತ್ಯಸಾಯಿ ಸಮಿತಿಯ ಆಶ್ರಯದಲ್ಲಿ ವಾರ್ಷಿಕ ಸಾಯಿ ಭಜನಾ ಕಾರ್ಯಕ್ರಮವು ನಿನ್ನೆ ಡಿಸೆಂಬರ್ 06ರಂದು ಶನಿವಾರ ಬಹಳ ಭಕ್ತಿಪೂರ್ವಕವಾಗಿ 55ನೇ ವರ್ಷದ ಸಂಭ್ರಮವನ್ನು ಸಂಪನ್ನಗೊಳಿಸಿತು.




ಕಾರ್ಯಕ್ರಮದ ವೇಳಾಪಟ್ಟಿಯಂತೆ ಸಂಜೆ 6.00 ಗಂಟೆಗೆ ಸರಿಯಾಗಿ ಭಜನೆ ಪ್ರಾರಂಭವಾಯಿತು ಹಾಗೂ 7.45ಕ್ಕೆ ಆದರ್ಶ ಗೋಖಲೆ ಇವರಿಂದ ಆಧ್ಯಾತ್ಮಿಕ ಉಪನ್ಯಾಸ ನಡೆಯಿತು. ಮನುಷ್ಯನು ವಿಶ್ವಾಸದಿಂದ ದೇವರಲ್ಲಿ ಪ್ರಾರ್ಥಿಸಿದರೆ ಅವನಿಗೆ ಖಡಾಖಂಡಿತವಾಗಿ ದೇವರು ಒಲಿಯುತ್ತಾನೆ ಎಂದು ನಿದರ್ಶನಗಳನ್ನು ನೀಡಿ ಸಾಯಿ ಭಜನಾ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ಆದರ್ಶ ಗೋಖಲೆ ಇವರು ತಮ್ಮ ಉಪನ್ಯಾಸದಲ್ಲಿ “ಭಕ್ತಿಯಿಂದ ಬೇಡಿದರೆ ದೇವರು ಹಾಜರಾಗುತ್ತಾರೆ ಎಂಬುದು ಶ್ರದ್ಧೆ, ನಂಬಿಕೆ ಮತ್ತು ನಿಸ್ವಾರ್ಥ ಭಾವನೆಯ ಮಹತ್ವವನ್ನು ತೋರಿಸುವ ಸಂದೇಶವಾಗಿದೆ. ಹೃದಯದಿಂದ, ಶುದ್ಧ ಉದ್ದೇಶದಿಂದ ಮಾಡಿದ ಪ್ರಾರ್ಥನೆ ದೇವರದೆಡೆಗೆ ನೇರವಾಗಿ ತಲುಪುತ್ತದೆ ಎಂದು ಭಕ್ತರು ನಂಬುತ್ತಾರೆ. ಭಕ್ತಿಯ ತೀವ್ರತೆಯು ಆತ್ಮವನ್ನು ಶಾಂತಿಗೊಳಿಸಿ, ದೇವರ ಸಾನ್ನಿಧ್ಯವನ್ನು ಅನುಭವಿಸುವಂತೆ ಮಾಡುತ್ತದೆ. ದೇವರನ್ನು ಕಾಣುವುದು ಕೇವಲ ಕಣ್ಣುಗಳಿಂದ ನೋಡುವುದಲ್ಲ, ಅವರ ಪ್ರೇರಣೆ, ಕರುಣೆ ಮತ್ತು ಮಾರ್ಗದರ್ಶನವನ್ನು ಮನಸ್ಸಿನಲ್ಲಿ ಅನುಭವಿಸುವುದೂ ಆಗಿದೆ. ನಿಜವಾದ ಭಕ್ತಿ ಇದ್ದರೆ ದೇವರು ದೂರದಲ್ಲಿಲ್ಲ — ಅವರು ನಮ್ಮೊಳಗೇ, ನಮ್ಮ ಪ್ರತಿಯೊಂದು ನಂಬಿಕೆಯ ಕ್ಷಣದಲ್ಲೂ ಇದ್ದಾರೆ” ಎಂದರು

ಬಳಿಕ 8.15ಕ್ಕೆ ಮಂಗಳಾರತಿ ಹಾಗೂ ಪ್ರಸಾದ ವಿತರಣೆಯೂ ನಡೆಯಿತು.
ಈ ಭಕ್ತಿಪೂರ್ಣ ಕಾರ್ಯಕ್ರಮಕ್ಕೆ ಎಲ್ಲಾ ಭಕ್ತರನ್ನು ಪ್ರತಿಷ್ಠಿತ ಕಜೆ ಕುಟುಂಬದ ‘ಕೇದಾರ’ ಮನೆಯವರಾದ ಡಾ. ಗೋವಿಂದ ಪ್ರಸಾದ ಕಜೆ ಹಾಗೂ ಮಹೇಶ್ ಕಜೆ ಆತ್ಮೀಯವಾಗಿ ಆಹ್ವಾನಿಸಿದ್ದರು. ಈ ಭವ್ಯ ಕಾರ್ಯಕ್ರಮಕ್ಕೆ ನೂರಾರು ಭಕ್ತಾಧಿಗಳು ಭಾಗವಹಿಸಿ ಸಾಕ್ಷಿಯಾದರು. ನೆರೆದ ಎಲ್ಲಾ ಭಕ್ತಾದಿಗಳಿಗೂ ಫಲಹಾರದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.




