ಅನಂತಾಡಿ–ಬಂಟ್ರಿಜ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ
“ಉತ್ತಮ ರಸ್ತೆಗಳು ಜನಜೀವನವನ್ನು ಬದಲಿಸಲು ಸಾಮರ್ಥ್ಯವಿದೆ” – ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ

ತುಳುನಾಡಿನಾದ್ಯಂತ ಪ್ರಸಿದ್ಧಿ ಪಡೆದಿರುವ ಅನಂತಾಡಿ ಮೆಚ್ಚಿ ಜಾತ್ರೆಗೆ ತೆರಳುವ ಮುಖ್ಯ ಮಾರ್ಗದ ಅಭಿವೃದ್ಧಿ ಕಾಮಗಾರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರು ಡಿಸೆಂಬರ್ 06ರಂದು ಶನಿವಾರ ಗುದ್ದಲಿ ಪೂಜೆ ನೆರವೇರಿಸಿ ಅಧಿಕೃತ ಚಾಲನೆ ನೀಡಿದರು.


ಅನಂತಾಡಿ ಕಾರಂಬಲ್ಲೆಯಿಂದ–ಬಂಟ್ರಿಜ ಜೋಡಿಸುವ ಶ್ರೀ ಉಳ್ಳಾಲ್ತಿ ಮಾಡ ರಸ್ತೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ಧಿಗೆ 2 ಕೋಟಿ ರೂಪಾಯಿಗಳ ಅನುದಾನ ಬಿಡುಗಡೆಗೊಂಡಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ. ಈ ರಸ್ತೆಯ ಸುಧಾರಣೆಯಿಂದ ಜಾತ್ರಾ ದಿನಗಳಲ್ಲಿ ಹಾಗೂ ಸಾಮಾನ್ಯ ದಿನಗಳಲ್ಲೂ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸುರಕ್ಷಿತ ಮತ್ತು ಸುಗಮ ಪ್ರಯಾಣ ಸಾಧ್ಯ ವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿ ಅವರು, “ಒಳ್ಳೆಯ ರಸ್ತೆ ಜನರ ಬದುಕನ್ನೇ ಬದಲಿಸುತ್ತದೆ. ಉತ್ತಮ ರಸ್ತೆ ಮೂಲ ಸೌಕರ್ಯದಿಂದ ವ್ಯಾಪಾರ ವೃದ್ಧಿಯಾಗುತ್ತದೆ. ಶಿಕ್ಷಣ–ಆರೋಗ್ಯ ಕೇಂದ್ರಗಳಿಗೆ ತಲುಪುವುದು ಸುಲಭವಾಗುತ್ತದೆ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಇನ್ನಷ್ಟು ವೇಗ ಪಡೆಯುತ್ತದೆ. ಈ ಪ್ರದೇಶದ ಜನತೆಗೆ ದೀರ್ಘಕಾಲದ ಬೇಡಿಕೆಯಾದ ಈ ರಸ್ತೆ ನಿರ್ಮಾಣದಿಂದ ನಿಜವಾದ ಅಭಿವೃದ್ದಿ ಸಾಧ್ಯವಾಗಲಿದೆ” ಎಂದು ಹೇಳಿದರು.

ಸ್ಥಳೀಯರು ರಸ್ತೆ ಕಾಮಗಾರಿಯ ಆರಂಭವನ್ನು ಸ್ವಾಗತಿಸಿ, ಮುಂದಿನ ದಿನಗಳಲ್ಲಿ ಪ್ರವಾಸೋದ್ಯಮ, ಭಕ್ತರ ಸಂಚಾರ ಮತ್ತು ಗ್ರಾಮೀಣ ಸಂಪರ್ಕತೆಯು ಇನ್ನಷ್ಟು ಉತ್ತಮಗೊಳ್ಳಲಿದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.




