ಕಬಕದಲ್ಲಿ ಲಾರಿಯಿಂದ ರೂಪಾಯಿ 21.44 ಲಕ್ಷ ಮೌಲ್ಯದ ಕಾಫಿ ಚೀಲ ಕಳ್ಳತನ
ಪುತ್ತೂರು ಪೊಲೀಸರ ತ್ವರಿತ ಕ್ರಮ — ಐದು ಮಂದಿ ಆರೋಪಿಗಳು ವಶಕ್ಕೆ

ಪುತ್ತೂರು ತಾಲೂಕಿನ ಕಬಕ ನೆಹರೂ ನಗರ ಪ್ರದೇಶದಲ್ಲಿ ನಿಂತಿದ್ದ ಲಾರಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಕಾಫಿ ಚೀಲಗಳನ್ನು ಕದ್ದ ಪ್ರಕರಣವನ್ನು ಪುತ್ತೂರು ನಗರ ಪೊಲೀಸ್ ಠಾಣೆ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಪುತ್ತೂರು ಕಬಕ ನಿವಾಸಿ 29 ವರ್ಷ ಪ್ರಾಯದ ತೃತೇಶ್ ಸಲ್ಲಿಸಿದ್ದ ದೂರಿನ ಪ್ರಕಾರ, KA 19 AB 2258 ಲಾರಿಯಲ್ಲಿ ಡಿಸೆಂಬರ್ 3ರಂದು ಬುಧವಾರ ಪಿರಿಯಾ ಪಟ್ಟಣದ ಕಾಫಿ ಕ್ಯೂರಿಂಗ್ ಕಂಪೆನಿಯಿಂದ ತಲಾ 60 ಕೆ.ಜಿ. ತೂಕದ 320 ಚೀಲ ಕಾಫಿ ಬೀಜಗಳನ್ನು ಮಂಗಳೂರಿಗೆ ಸಾಗಿಸಲಾಗುತ್ತಿತ್ತು.





ರಾತ್ರಿ ಪುತ್ತೂರಿಗೆ ತಲುಪಿದ ಬಳಿಕ ಕಬಕ ನೆಹರೂ ನಗರದಲ್ಲಿ ಲಾರಿಯನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮನೆಗೆ ತೆರಳಿದ್ದ ಚಾಲಕ, ಡಿಸೆಂಬರ್ 4ರಂದು ಗುರುವಾರ ಲಾರಿಯನ್ನು ತೆಗೆದುಕೊಂಡು ಮಂಗಳೂರಿನ ಬಂದರಿಗೆ ತಲುಪಿದಾಗ ಹಿಂಬದಿ ಸೀಲ್ ಲಾಕ್ ತುಂಡಾಗಿರುವುದು ಗಮನಕ್ಕೆ ಬರುತ್ತದೆ. ಕಂಪೆನಿ ಸಿಬ್ಬಂದಿ ಲೋಡ್ ಪರಿಶೀಲಿಸಿದಾಗ ಸುಮಾರು ರೂಪಾಯಿ 21,44,000/- ಮೌಲ್ಯದ 80 ಕಾಫಿ ಚೀಲಗಳು ಕಳವಾಗಿರುವುದು ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 120/2025, ಕಲಂ 303(2) BNS-2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಯಿತು. ತನಿಖೆಯ ವೇಳೆ, ಆರೋಪಿ ಆಶ್ಲೇಷ ಭಟ್ ತನ್ನ ಸಹಚರರಾದ ನಾರಾಯಣ ಶೆಟ್ಟಿಗಾರ್, ಮಿಥುನ್ ಕುಮಾರ್, ವಿಜಯ ಶೆಟ್ಟಿ ಮತ್ತು ಮಹಮ್ಮದ್ ಅಶ್ರಫ್ ಇವರೊಂದಿಗೆ ಸೇರಿ ಕೃತ್ಯ ಎಸಗಿರುವುದು ಪತ್ತೆಯಾಗಿದೆ.

ಪೊಲೀಸರು ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದು, ಕೃತ್ಯಕ್ಕೆ ಬಳಸಿದ ಎರಡು ಆಟೋಗಳು, ಒಂದು ಗೂಡ್ಸ್ ಟೆಂಪೋ, ಜೊತೆಗೆ ಕಳವಾದ 80 ಕಾಫಿ ಚೀಲಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಪುತ್ತೂರು ಪೊಲೀಸರು ಘಟನೆಗೆ ನೀಡಿದ ತ್ವರಿತ ಸ್ಪಂದನೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.






