January 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಲೋಕಸಭೆಯಲ್ಲಿ ಮಾಜಿ ಸೈನಿಕರ ಪರ ಧ್ವನಿಯೆತ್ತಿದ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ

ಯೋಧರ ಚಿಕಿತ್ಸಾ ತೊಂದರೆ ಗಂಭೀರ – ಖಾಸಗಿ ಆಸ್ಪತ್ರೆಗಳು ಹಿಂದೆ ಸರಿಯುತ್ತಿರುವುದೇ ಆತಂಕ

ಕೊಡಗಿನಲ್ಲಿ ECHS ಆಸ್ಪತ್ರೆಗಳ ಕೊರತೆ – ನಿವೃತ್ತ ಯೋಧರು 100–150 ಕಿ.ಮೀ ಪ್ರಯಾಣಿಸುವ ಸ್ಥಿತಿ

ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರು ಮಾಜಿ ಸೈನಿಕರ ಚಿಕಿತ್ಸಾ ಬಿಲ್‌ ಪಾವತಿ ವಿಳಂಬದ ಗಂಭೀರ ಸಮಸ್ಯೆಯನ್ನು ಲೋಕಸಭೆಯ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿ, ರಕ್ಷಣಾ ಸಚಿವಾಲಯ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಾಜಿ ಸೈನಿಕರ ಕೊಡುಗೆ ಆರೋಗ್ಯ ಯೋಜನೆ (ECHS) ಯಡಿ ವೈದ್ಯಕೀಯ ವೆಚ್ಚ ಮರುಪಾವತಿಯಲ್ಲಿ ನಡೆಯುತ್ತಿರುವ ದೀರ್ಘ ವಿಳಂಬವು ನಿವೃತ್ತ ಯೋಧರು ಮತ್ತು ಅವರ ಕುಟುಂಬಗಳಿಗೆ ಭಾರೀ ತೊಂದರೆ ಉಂಟುಮಾಡುತ್ತಿದೆ ಎಂದು ಅವರು ತಿಳಿಸಿದರು. ಇದರ ಪರಿಣಾಮವಾಗಿ ಅನೇಕ ಖಾಸಗಿ ಆಸ್ಪತ್ರೆಗಳು ಯೋಜನೆಯಿಂದ ಹಿಂದೆ ಸರಿಯುತ್ತಿರುವುದು ಆತಂಕಕಾರಿ ಎಂದು ಅವರು ಗಮನಸೆಳೆದರು. ಯೋಧರಾಗಿಯೇ ಸೇವೆ ಸಲ್ಲಿಸಿರುವ ಸಂಸದ ಚೌಟ ಅವರು, “ಯೋಧರು ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟವರು. ಅವರಿಗೆ ಚಿಕಿತ್ಸೆ ದೊರೆತಲ್ಲದೆ ಬಿಲ್‌ ಪಾವತಿಯಲ್ಲಿ ವಿಳಂಬವಾಗುವುದು ಗಂಭೀರ ನಿರ್ವಹಣಾ ಲೋಪ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಕೊಡಗು ಜಿಲ್ಲೆಯ ಪರಿಸ್ಥಿತಿಯನ್ನು ಉದಾಹರಿಸಿದ ಅವರು, “ಕೊಡಗಿನಲ್ಲಿ ECHS-ಗೆ ನೊಂದಾಯಿತ ಖಾಸಗಿ ಆಸ್ಪತ್ರೆಗಳು ಬಹಳ ಕಡಿಮೆ ಇದ್ದು, ನಿವೃತ್ತ ಯೋಧರು 100–150 ಕಿ.ಮೀ ದೂರ ಪ್ರಯಾಣಿಸುವ ದುಸ್ತರ ಪರಿಸ್ಥಿತಿ ಎದುರಿಸುತ್ತಿದ್ದಾರೆ” ಎಂದು ತಿಳಿಸಿದರು. ವಿಳಂಬ ಪಾವತಿಗಳಿಂದಾಗಿ ದೇಶಾದ್ಯಂತ ಅನೇಕ ಆಸ್ಪತ್ರೆಗಳು ECHS ಯೋಜನೆಯಿಂದ ಹಿಂದೆ ಸರಿಯುತ್ತಿರುವುದೂ ಗಂಭೀರ ವಿಷಯವೆಂದರು.

ಪ್ರತಿ ವರ್ಷ ಒಂದು ಕೋಟಿಗಿಂತ ಹೆಚ್ಚು ಫಲಾನುಭವಿಗಳಿಗೆ ಚಿಕಿತ್ಸೆ ಒದಗಿಸುವ ECHS ವ್ಯವಸ್ಥೆಯ ಮೇಲೆ ಈ ವಿಳಂಬಗಳು ದುಷ್ಪರಿಣಾಮ ಬೀರುತ್ತಿವೆ ಎಂದು ಅವರು ಎಚ್ಚರಿಸಿದರು.

ಅಂತಿಮವಾಗಿ, ರಕ್ಷಣಾ ಸಚಿವಾಲಯ ತಕ್ಷಣ ಹಸ್ತಕ್ಷೇಪ ಮಾಡಿ ಯೋಜನೆಯಲ್ಲಿನ ನ್ಯೂನತೆ ಸರಿಪಡಿಸಿ, ನಿವೃತ್ತ ಯೋಧರಿಗೆ ಚಿಕಿತ್ಸಾ ವೆಚ್ಚ ಸಕಾಲದಲ್ಲಿ ಮರುಪಾವತಿಯಾಗಲು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

You may also like

News

ಮಂಗಳೂರಿನಲ್ಲಿ 9ನೇ ಅಂತರ್‌ರಾಷ್ಟ್ರೀಯ ಗಾಳಿಪಟ ಉತ್ಸವ – ಜನವರಿ 17–18 ರಂದು ಬ್ಲೂ ಬೇ ಬೀಚ್‌ನಲ್ಲಿ ವೈಭವ

ಕರಾವಳಿ ಉತ್ಸವದ ಅಂಗವಾಗಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ‘ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡವು ಮಂಗಳೂರಿನ ತಣ್ಣೀರುಬಾವಿಯ ನವೀಕರಣಗೊಂಡ ಬ್ಲೂ ಬೇ ಬೀಚ್‌ನಲ್ಲಿ 9ನೇ ಅಂತರ್‌ರಾಷ್ಟ್ರೀಯ
News

ಧರ್ಮ ಕೇಳಿ ಅವಾಚ್ಯ ನಿಂದನೆ ಹಾಗೂ ಹಲ್ಲೆ – ಕೊಲೆಯತ್ನ ಪ್ರಕರಣದಲ್ಲಿ ಕಾವೂರು ಠಾಣಾ ಪೊಲೀಸರಿಂದ ಮೂವರ ಬಂಧನ

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಧರ್ಮ ವಿಚಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

You cannot copy content of this page