ಪುತ್ತೂರಿಗೆ ಶಾಸಕ ಅಶೋಕ್ ರೈ ಕನಸು ನನಸಾದಂತೆ — ರೂಪಾಯಿ 5 ಕೋಟಿ ವೆಚ್ಚದ ಹೊಸ ತಾಲೂಕು ಪಂಚಾಯತ್ ಕಟ್ಟಡಕ್ಕೆ ನಾಳೆ ಡಿಸೆಂಬರ್ 13ರಂದು ಶಿಲಾನ್ಯಾಸ
ಪುತ್ತೂರಿನ ಅಭಿವೃದ್ಧಿ ಕನಸುಗಳು ಒಂದೊಂದಾಗಿ ಸಫಲವಾಗುತ್ತಿವೆ. ಹಳೆಯ ಮತ್ತು ಅಪರಿಹಾರ್ಯವಾಗಿರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುತ್ತೂರು ತಾಲೂಕು ಪಂಚಾಯತ್ ಕಚೇರಿಗೆ ಹೊಸ ಕಟ್ಟಡದ ಅಗತ್ಯವನ್ನು ಆಗಲೇ ಗುರುತಿಸಿದ್ದ ಶಾಸಕರಾದ ಅಶೋಕ್ ರೈ ಅವರು, ತಾಲೂಕು ಪಂಚಾಯತ್ ಗೆ ನೂತನ ಕಟ್ಟಡ ನಿರ್ಮಾಣದ ಭರವಸೆ ನೀಡಿದ್ದರು. ಈಗ ಅವರ ಮಾತು ನೆರವೇರಿದೆ.

ಸುಮಾರು ರೂಪಾಯಿ 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ನೂತನ ತಾಲೂಕು ಪಂಚಾಯತ್ ಕಟ್ಟಡಕ್ಕೆ ನಾಳೆ ಡಿಸೆಂಬರ್ 13ರಂದು ಶನಿವಾರ ಶಿಲಾನ್ಯಾಸ ನಡೆಯಲಿದೆ. ದರ್ಬೆ–ಪರ್ಲಡ್ಕ ರಸ್ತೆಯಲ್ಲಿರುವ ಕೃಷಿ ಇಲಾಖೆಯ ಕಚೇರಿ ಬಳಿ ಈ ನೂತನ ಆಧುನಿಕ ಕಟ್ಟಡ ನಿರ್ಮಾಣಗೊಳ್ಳಲಿದೆ. ಈ ಹಿಂದೆ ಪುತ್ತೂರಿಗೆ ಕಟ್ಟಡ ಅನುಕೂಲಕ್ಕಾಗಿ ಬಿಡುಗಡೆಗೊಂಡ ಅನುದಾನ, ಇಚ್ಚಾಶಕ್ತಿಯ ಕೊರತೆಯಿಂದ ಕಡಬಕ್ಕೆ ಸ್ಥಳಾಂತರಗೊಂಡಿತ್ತು. ಹಳೆಯ ತಾಲೂಕು ಪಂಚಾಯತ್ ಕಚೇರಿ ಕಟ್ಟಡವು ಕಮರ್ಷಿಯಲ್ ಕಾಂಪ್ಲೆಕ್ಸ್ನಂತೆ ಕಾಣುತ್ತಿದ್ದರೆ, ಹೊಸ ಮಿನಿ ವಿಧಾನಸೌಧ ನಿರ್ಮಾಣವಾದ ಬಳಿಕ ತಾಲೂಕು ಪಂಚಾಯತ್ ಕಚೇರಿಗೆ ಅನಾಥಭಾವದಂತಿತ್ತು.

ಈಗ ಕರ್ನಾಟಕ ಸರಕಾರದ ಗ್ರಾಮೀಣ ಅಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಗಳ ಮೂಲಕ ಹೊಸ ಕಟ್ಟಡ ನಿರ್ಮಾಣಕ್ಕೆ ಮುನ್ನಡೆ ಸಿಕ್ಕಿದೆ. ಇಲಾಖೆಯ ನಿರಂತರ ಒತ್ತಡ ಮತ್ತು ಶಾಸಕರ ಪ್ರಯತ್ನದ ಮೂಲಕ ರೂಪಾಯಿ 5 ಕೋಟಿ ಅನುದಾನವನ್ನು ಪಡೆಯಲು ಸಾಧ್ಯವಾಗಿದೆ. ಹೊಸ ಕಟ್ಟಡವು ಆಧುನಿಕ ವಿನ್ಯಾಸ, ಸಕಲ ಸೌಲಭ್ಯಗಳು, ಮತ್ತು ಸಮಗ್ರ ಕೆಲಸಗಳಿಗೆ ಅನುಕೂಲವಾಗುವ ವ್ಯವಸ್ಥೆಗಳನ್ನು ಹೊಂದಿರುವಂತೆ ರೂಪಿಸಲಾಗಿದೆ.

ನಾಳೆ ಬೆಳಿಗ್ಗೆ 11.30ಕ್ಕೆ ಶಾಸಕರು ನೂತನ ಕಟ್ಟಡದ ಶಿಲಾನ್ಯಾಸ ನೆರವೇರಿಸಲಿದ್ದು, ಗ್ರಾಮ ಪಂಚಾಯತ್ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.






