January 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನ ಆಯುಷ್ ಇಲಾಖೆಯ ಅವಧಿ ಮೀರಿದ ಔಷಧ ಅಕ್ರಮ—ಸರ್ಕಾರದ ನಿರ್ಲಕ್ಷ್ಯಕ್ಕೆ ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ

ಮಂಗಳೂರಿನ ಆಯುಷ್ ಇಲಾಖೆಯಲ್ಲಿ ಅವಧಿ ಮೀರಿದ ಔಷಧಿಗಳನ್ನು ಪೂರೈಕೆ ಮಾಡಿ ರೋಗಿಗಳ ಜೀವದೊಂದಿಗೆ ಆಟವಾಡಿದ ಗಂಭೀರ ಅಕ್ರಮದ ಕುರಿತಾಗಿ ಯಾವುದೇ ಕ್ರಮ ಕೈಗೊಳ್ಳದಿರುವುದನ್ನು ಶಾಸಕ ವೇದವ್ಯಾಸ ಕಾಮತ್ ಅವರು ವಿಧಾನಮಂಡಲ ಅಧಿವೇಶನದಲ್ಲಿ ತೀವ್ರವಾಗಿ ಆಕ್ಷೇಪಿಸಿದರು. ಅಕ್ರಮ ತಿಳಿದ ಕೂಡಲೇ ಆಡಿಯೋ, ವೀಡಿಯೋ ಸಾಕ್ಷ್ಯಗಳೊಂದಿಗೆ, ಅವಧಿ ಮೀರಿದ ಔಷಧಿಗಳ ರಾಶಿಯ ದಾಖಲೆಗಳನ್ನೂ ಸೇರಿಸಿ ಉನ್ನತ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಅವರು ತಿಳಿಸಿದರು. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ಹಾಸನ, ಚಿಕ್ಕಮಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಅವಧಿ ಮೀರಿದ ಔಷಧಿಗಳನ್ನು ಸಂಗ್ರಹಿಸಿ ಏಜೆಂಟರ ಮುಖಾಂತರ ಮಂಗಳೂರಿಗೆ ತರುವ ವ್ಯವಸ್ಥಿತ ಜಾಲ ಇದಕ್ಕೆ ಕಾರಣವಾಗಿರುವುದಾಗಿ ಶಾಸಕ ಕಾಮತ್ ಹೇಳಿದರು. ಈ ಬಗ್ಗೆ ಲೋಕಾಯುಕ್ತ ದಾಳಿ ನಡೆದಿದ್ದರೂ ಇಲ್ಲಿಯವರೆಗೂ ಅಧಿಕಾರಿಗಳ ಮೇಲೆ ಕ್ರಮದ ಕೊರತೆ ಏಕೆ? ಸರ್ಕಾರವೇ ಇವರ ರಕ್ಷಣೆಗೆ ನಿಂತಿದೆಯೇ ಎಂದು ಅವರು ಪ್ರಶ್ನಿಸಿದರು.

“ಪೂರೈಕೆ ಮಾಡಿದವರು ಯಾರು? ಇದಕ್ಕೆ ಹಿಂದೆ ಯಾರಿದ್ದಾರೆ? ಸಂಪೂರ್ಣ ಸತ್ಯವನ್ನು ಬಹಿರಂಗಗೊಳಿಸಬೇಕು,” ಎಂದು ಅವರು ಆಗ್ರಹಿಸಿದರು. ಅಲ್ಲದೇ ಎಂ.ಆರ್.ಪಿ.ಎಲ್. ಕಂಪೆನಿಯಿಂದ ಸಿ.ಎಸ್.ಆರ್. ಅನುದಾನದಲ್ಲಿ ಮಂಗಳೂರಿನ ಆಯುಷ್ ಸಂಯುಕ್ತ ಆಸ್ಪತ್ರೆಗೆ ನೀಡಿದ ರೂಪಾಯಿ 38.50 ಲಕ್ಷದ ಬಳಕೆಯಲ್ಲಿ ಅಕ್ರಮ ನಡೆದಿದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಿರುವ ವಿಚಾರ ಅವರ ಅಸಮಾಧಾನಕ್ಕೆ ಕಾರಣವಾಯಿತು.

“ಇಂತಹ ಅಕ್ರಮ ಮಾಡಲು ಅಧಿಕಾರಿಗಳಿಗೆ ಧೈರ್ಯ ಬರಲು ಹೇಗೆ ಸಾಧ್ಯ? ಮಂತ್ರಿಗಳು ಮತ್ತು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮವಾಗದಿರುವುದು ಅತ್ಯಂತ ಗಂಭೀರ. ಹೀಗೆ ಮುಂದುವರಿದರೆ, ಮುಂದಿನ ದಿನಗಳಲ್ಲಿ ಯಾವ ಕಂಪೆನಿಯೂ ಸರ್ಕಾರಿ ಸಂಸ್ಥೆಗಳಿಗೆ ಸಿ.ಎಸ್.ಆರ್ ಅನುದಾನ ನೀಡಲು ಮುಂದೆ ಬರೋದಿಲ್ಲ,” ಎಂದು ಶಾಸಕ ಕಾಮತ್ ತೀವ್ರವಾಗಿ ಪ್ರಶ್ನಿಸಿದರು.

You may also like

News

ಸಂದೇಶ ಪ್ರಶಸ್ತಿಗಳು 2026 ಘೋಷಣೆ – ಜನವರಿ 21ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

ಮಂಗಳೂರಿನ ಪ್ರತಿಷ್ಠಿತ ಸಂಗೀತಗಾರ ಸೈಮನ್ ಪಾಯ್ಸ್ ಬಜಾಲ್ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿಗಳು ಮೌಲ್ಯಾಧಾರಿತ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು
News

ಸಿಒಡಿಪಿ ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ತರಬೇತಿ ಯಶಸ್ವಿ

ಜನವರಿ 8ರಂದು ಗುರುವಾರ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ಮಿಸೋರಿಯರ್ ಮತ್ತು ಬೆಂಗಳೂರು ಕ್ರಾಸ್ ಸಂಸ್ಥೆಗಳ ಸಹಯೋಗದೊಂದಿಗೆ ಸಿಒಡಿಪಿ ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

You cannot copy content of this page