ಬಂಟ್ವಾಳದಲ್ಲಿ ನೀಟ್–ಸಿಇಟಿ–ಜೆಇಇ ಮಾಹಿತಿ ಕಾರ್ಯಾಗಾರ: ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ
ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕ ಹಾಗೂ ಹಿದಾಯ ಫೌಂಡೇಶನ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ನೀಟ್, ಸಿಇಟಿ ಹಾಗೂ ಜೆಇಇ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರವು ಮೆಲ್ಕಾರಿನ ಬಿರ್ವ ಸಭಾಂಗಣದಲ್ಲಿ ಇಂದು ಡಿಸೆಂಬರ್ 14ರಂದು ಭಾನುವಾರ ಯಶಸ್ವಿಯಾಗಿ ನಡೆಯಿತು. ಕಾರ್ಯಾಗಾರವನ್ನು ಉದ್ಘಾಟಿಸಿದ ಹಿದಾಯ ಫೌಂಡೇಶನ್ನ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ಮಾತನಾಡಿ, ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾದ ಮಾಹಿತಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದರೆ ಸಮಯ ಹಾಗೂ ಸಂಪನ್ಮೂಲಗಳ ಉಳಿತಾಯ ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜಮೀಯ್ಯತುಲ್ ಫಲಾಹ್ ಬಂಟ್ವಾಳ ಘಟಕದ ಅಧ್ಯಕ್ಷ ಬಿ.ಎಂ. ಅಬ್ಬಾಸ್ ಅಲಿ ಮಾತನಾಡಿ, ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಉದ್ಯೋಗ ವಲಯದಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಆದ್ದರಿಂದ ಎದುರಾಗುವ ಸವಾಲುಗಳಿಗೆ ಯುವ ಸಮುದಾಯ ಮಾನಸಿಕವಾಗಿ ಸಜ್ಜಾಗಬೇಕಿದೆ ಎಂದು ಅಭಿಪ್ರಾಯಪಟ್ಟರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಸೆನೆಟ್ ಸದಸ್ಯ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಮುಸ್ಥಾಫ ಬಸ್ತಿಕೋಡಿ ಮತ್ತು ನೀಟ್ ಪರೀಕ್ಷಾ ಸಲಹೆಗಾರ ಇಫ್ತಿಕಾರ್ ಅಹಮದ್ ಮಂಗಳೂರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಸ್ವರೂಪ, ಅಗತ್ಯ ದಾಖಲೆಗಳು, ಸರ್ಕಾರಿ ಪ್ರವೇಶಾತಿಗಳ ಪ್ರಯೋಜನಗಳು ಸೇರಿದಂತೆ ಹಲವು ಉಪಯುಕ್ತ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.



ಈ ಸಂದರ್ಭದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಆಯ್ಕೆಯಾದ ಡಾ. ಮುಸ್ಥಾಫ ಬಸ್ತಿಕೋಡಿ ಅವರನ್ನು ಆಯೋಜಕ ಉಭಯ ಸಂಸ್ಥೆಗಳ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಆಜೀವ ಸದಸ್ಯ ಮೊಹಮ್ಮದ್ ರಫೀಕ್ ಹಾಜಿ ಸುರಿಬೈಲು ಅತಿಥಿಯಾಗಿ ಭಾಗವಹಿಸಿದ್ದರು. ಆಜೀವ ಸದಸ್ಯರಾದ ಮೊಹಮ್ಮದ್ ಸಾಗರ್ ಮಿತ್ತಬೈಲ್, ಬಿ.ಎ. ಮೊಹಮ್ಮದ್ ಬಂಟ್ವಾಳ, ಪಿ. ಮೊಹಮ್ಮದ್ ಪಾಣೆಮಂಗಳೂರು, ಕರೀಂ ಕೋಟೆಕಣಿ, ಇಬ್ರಾಹಿಂ ಮೊಯ್ದಿನ್ ನಂದಾವರ, ಪಿ.ಎ. ರಹೀಂ ಬಿ.ಸಿ. ರೋಡ್, ಕರೀಂ ರೆಂಗೇಲು, ಇಬ್ರಾಹೀಂ ಖಲೀಲ್ ಕೆ.ಸಿ. ರೋಡ್ ಹಾಗೂ ಆಶಿಕ್ ಕುಕ್ಕಾಜೆ ಉಪಸ್ಥಿತರಿದ್ದರು.


ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಕೀಂ ಕಲಾಯಿ ಸ್ವಾಗತಿಸಿದರು. ಕೋಶಾಧಿಕಾರಿ ಅಬ್ದುಲ್ ಲತೀಫ್ ನೇರಳಕಟ್ಟೆ ವಂದಿಸಿದರು. ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.






