ಜೇನು ಮೇಣದಿಂದ ಚೆಸ್ ಬೋರ್ಡ್ ನಿರ್ಮಿಸಿ ಇತಿಹಾಸ
ಕಿನ್ನಿಗೋಳಿ ಯುವ ಜೇನುಕೃಷಿಕ ಪ್ರಜ್ವಲ್ M ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ ಆಯ್ಕೆ

ಶಾಸಕ ಉಮಾನಾಥ್ ಕೋಟ್ಯಾನ್ ಅವರಿಂದ ಅಭಿನಂದನೆ

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕೃಷಿ ಮೇಳದಲ್ಲಿ ಜೇನು ವಿಭಾಗದ ಪ್ರದರ್ಶನದಲ್ಲಿ ಭಾಗವಹಿಸಿದ್ದ ಯುವ ಜೇನುಕೃಷಿಕರಾದ ಕಿನ್ನಿಗೋಳಿಯ ಪ್ರಜ್ವಲ್ ಎಂ. ಅವರು ಜೇನು ಮೇಣದಿಂದ ತಯಾರಿಸಿದ ವಿಶಿಷ್ಟ ಚೆಸ್ ಬೋರ್ಡ್ ಮೂಲಕ ಅಪರೂಪದ ಸಾಧನೆ ಮಾಡಿದ್ದಾರೆ. ಅವರ ಈ ನವೀನ ಕಲ್ಪನೆ ಹಾಗೂ ಸೃಜನಾತ್ಮಕ ಪ್ರಯತ್ನಕ್ಕೆ ‘INDIA BOOK OF RECORD’ ನಲ್ಲಿ ಸ್ಥಾನ ದೊರೆತಿರುವುದು ಹೆಮ್ಮೆಯ ವಿಷಯವಾಗಿದೆ.


ಜೇನು ಮೇಣವನ್ನು ಉಪಯೋಗಿಸಿ ಸಂಪೂರ್ಣವಾಗಿ ಕೈಚಾಣಾಕ್ಷತೆಯಿಂದ ತಯಾರಿಸಲಾದ ಈ ಚೆಸ್ ಬೋರ್ಡ್ ಕೃಷಿ ಮೇಳಕ್ಕೆ ಆಗಮಿಸಿದ್ದ ಅನೇಕ ವೀಕ್ಷಕರನ್ನು ಆಕರ್ಷಿಸಿದ್ದು, ಜೇನು ಉತ್ಪನ್ನಗಳ ಹೊಸ ಬಳಕೆ ಹಾಗೂ ಮೌಲ್ಯವರ್ಧನೆಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಜೇನುಕೃಷಿಯಲ್ಲಿ ಕೇವಲ ಜೇನು ಮಾತ್ರವಲ್ಲದೆ ಜೇನು ಮೇಣದಂತಹ ಉಪ ಉತ್ಪನ್ನಗಳನ್ನೂ ಸೃಜನಾತ್ಮಕವಾಗಿ ಬಳಸಬಹುದೆಂಬುದನ್ನು ಪ್ರಜ್ವಲ್ ಅವರು ತಮ್ಮ ಸಾಧನೆಯ ಮೂಲಕ ಸಾಬೀತುಪಡಿಸಿದ್ದಾರೆ.

ಈ ಸಾಧನೆಗೆ ಭಾಜನರಾದ ಪ್ರಜ್ವಲ್ ಎಂ. ಅವರಿಗೆ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಉಮಾನಾಥ್ ಕೋಟ್ಯಾನ್ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ. “ಯುವಕರು ಕೃಷಿ ಮತ್ತು ಜೇನುಕೃಷಿಯಲ್ಲಿ ಹೊಸ ಆವಿಷ್ಕಾರಗಳ ಮೂಲಕ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಸಂತಸದ ವಿಚಾರ. ಪ್ರಜ್ವಲ್ ಅವರ ಸಾಧನೆ ಇತರ ಯುವಕರಿಗೂ ಪ್ರೇರಣೆಯಾಗಲಿ” ಎಂದು ಅವರು ಆಶಯ ವ್ಯಕ್ತಪಡಿಸಿದರು.


ಯುವ ಜೇನುಕೃಷಿಕ ಪ್ರಜ್ವಲ್ ಎಂ. ಅವರ ಈ ಸಾಧನೆ ಸ್ಥಳೀಯ ಮಟ್ಟದಿಂದ ರಾಷ್ಟ್ರಮಟ್ಟದವರೆಗೆ ಗಮನ ಸೆಳೆಯುತ್ತಿದ್ದು, ಅವರ ಪರಿಶ್ರಮ ಹಾಗೂ ಸೃಜನಶೀಲತೆ ಇನ್ನೂ ಹೆಚ್ಚಿನ ಎತ್ತರ ತಲುಪಲಿ ಎಂಬುದು ಎಲ್ಲರ ಆಶಯವಾಗಿದೆ. ಈ ಸಾಧನೆ ಲೋಕಕ್ಕೆ ಪಸರಿಸಲಿ, ಇನ್ನೂ ಅನೇಕ ಹೊಸ ದಾಖಲೆಗಳು ಅವರಿಂದ ನಿರ್ಮಾಣವಾಗಲಿ ಎಂಬ ಶುಭಾಶಯಗಳು ಎಲ್ಲೆಡೆಯಿಂದ ಹರಿದುಬರುತ್ತಿವೆ.




