ಮಾನ್ಯ ನ್ಯಾಯಾಲಯದ ವಾರಂಟ್ ತಪ್ಪಿಸಿಕೊಂಡಿದ್ದ ಅಂತರರಾಜ್ಯ ನೋಟೋರಿಯಸ್ ಕ್ರಿಮಿನಲ್ ಅಬ್ದುಲ್ ರವೂಫ್ @ ಮೀಸೆ ರವೂಫ್ ಬಂಧನ
ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವಾರಂಟ್ ಅಸಾಮಿ 48 ವರ್ಷ ಪ್ರಾಯದ ಅಬ್ದುಲ್ ರವೂಫ್ @ ಮೀಸೆ ರವೂಫ್ ಎಂಬಾತನನ್ನು ಮಂಗಳೂರು ನಗರ ಪೊಲೀಸ್ ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತನು ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಉಪ್ಪಳದ ಮುಸ್ತಫಾ ಮಂಜಿಲ್ ನಿವಾಸಿಯಾಗಿದ್ದಾನೆ.

ಅಬ್ದುಲ್ ರವೂಫ್ ವಿರುದ್ಧ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ 19 ಪ್ರಕರಣಗಳು ದಾಖಲಾಗಿದ್ದು, ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಒಂದು ಪ್ರಕರಣ ಹಾಗೂ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಐದು ಪ್ರಕರಣಗಳು ಸೇರಿ ಒಟ್ಟು 25 ಗಂಭೀರ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಕಾವೂರು ಠಾಣೆಯ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿರಲಿದ್ದು, ಕೋಣಾಜೆ ಠಾಣೆಯ ಐದು ಪ್ರಕರಣಗಳಲ್ಲಿ ನ್ಯಾಯಾಲಯವು ಈತನನ್ನು ಉದ್ಘೋಷಿತ ಅಪರಾಧಿ ಎಂದು ಘೋಷಿಸಿದೆ. ಇದೇ ರೀತಿ ಮಂಜೇಶ್ವರ ಪೊಲೀಸ್ ಠಾಣೆಯ ಒಂದು ಪ್ರಕರಣದಲ್ಲಿಯೂ ಮಾನ್ಯ ನ್ಯಾಯಾಲಯ ದಸ್ತಗಿರಿ ವಾರಂಟ್ ಹೊರಡಿಸಿದೆ.

ಬಂಧಿತನು ಅಂತರರಾಜ್ಯ ನೋಟೋರಿಯಸ್ ಕ್ರಿಮಿನಲ್ ಆಗಿದ್ದು, ಕೇರಳ ರಾಜ್ಯದ ಉಪ್ಪಳ–ಪೈವಳಿಕೆಯ ಇಸುಬು ಜಿಯಾದ್ @ ಜಿಯಾ ಎಂಬಾತನ ಸಹಚರನಾಗಿರುವುದು ತನಿಖೆಯಿಂದ ತಿಳಿದುಬಂದಿದೆ. ಉತ್ತರ ಉಪವಿಭಾಗದ ಎಸಿಪಿ ಶ್ರೀಕಾಂತ ಕೆ. ಅವರ ನೇತೃತ್ವದಲ್ಲಿ ಎಎಸ್ಐ ಚಂದ್ರಶೇಖರ್ ಹಾಗೂ ಸಿಬ್ಬಂದಿಗಳಾದ ಹೆಚ್ಸಿ ರೆಜಿ ವಿ.ಎಂ., ದಾಮೋದರ ಕೆ. ಮತ್ತು ಹಾಲೇಶ್ ನಾಯ್ಕ್ ಅವರನ್ನು ಒಳಗೊಂಡ ತಂಡವು ಇಂದು ದಿನಾಂಕ 16-12-2025ರಂದು ಮಂಗಳವಾರ ಈತನನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮಕ್ಕಾಗಿ ಕಾವೂರು ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ.

ಬಂಧಿತನ ವಿರುದ್ಧ ದರೋಡೆ, ಮನೆಮೇಲು ದಾಳಿ, ಕಳ್ಳತನ, ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಸೇರಿದಂತೆ ಹಲವು ಗಂಭೀರ ಆರೋಪಗಳ ಪ್ರಕರಣಗಳು ದಾಖಲಾಗಿದ್ದು, ಈತನ ಬಂಧನದಿಂದ ಅಂತರರಾಜ್ಯ ಅಪರಾಧ ಚಟುವಟಿಕೆಗಳ ಮೇಲೆ ಮಹತ್ವದ ಹೊಡೆತ ಬಿದ್ದಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.




