January 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಜಿ ವೀರಕಂಭ ಶಾಲಾ ವಾರ್ಷಿಕೋತ್ಸವ “ಹೆಜ್ಜೆ ಗೆಜ್ಜೆ – ನಿನಾದ ವೈವಿಧ್ಯ”ವಿಜೃಂಭಣೆ

ಶಾಲೆಯ ಚಿತ್ರಣ ಬದಲಿಸುವಲ್ಲಿ ಸಂಘಟನೆಗಳ ಪಾತ್ರ ಮಹತ್ವದ್ದು – ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ

ಸರಕಾರಿ ಶಾಲೆಗಳ ಶೈಕ್ಷಣಿಕ ಹಾಗೂ ಭೌತಿಕ ಅಭಿವೃದ್ಧಿಯಲ್ಲಿ ಸಂಘಟನೆಗಳು, ದಾನಿಗಳು ಮತ್ತು ಸಮಾಜದ ಸಹಕಾರ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ ಎಂದು ಬಂಟ್ವಾಳ ತಾಲೂಕು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಮಾಲತಿ ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಡಿಸೆಂಬರ್ 13ರಂದು ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ “ಹೆಜ್ಜೆ ಗೆಜ್ಜೆ – ನಿನಾದ ವೈವಿಧ್ಯ” ವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ಸಂಸ್ಥೆಯ ಏಳಿಗೆಯಲ್ಲಿ ಪೋಷಕರ ಸಹಕಾರ ಮತ್ತು ಶಾಲಾಭಿವೃದ್ಧಿ ಕಾರ್ಯಗಳು ಪ್ರಮುಖವಾಗಿದ್ದು, ಸೇವಾ ಮನೋಭಾವ ಹಾಗೂ ಸಮಾನ ಗುರಿಯನ್ನು ಹೊಂದಿರುವವರ ಪರಿಶ್ರಮದಿಂದಲೇ ಕಾರ್ಯಕ್ರಮಗಳು ಯಶಸ್ವಿಯಾಗುತ್ತವೆ ಎಂದರು. ಮಜಿ ಸರಕಾರಿ ಶಾಲೆಯು “ಮಾದರಿ ಜೀವನ” ನಡೆಸುವ ಉತ್ತಮ ನಿದರ್ಶನವಾಗಿದ್ದು, ಸರಕಾರಿ ಶಾಲೆಯ ಚಿತ್ರಣವನ್ನು ಬದಲಿಸುವಲ್ಲಿ ಈ ಶಾಲೆ ಮಾದರಿಯಾಗಿದೆ ಎಂದು ಪ್ರಶಂಸಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೀರಕಂಬ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ ಗೋಳಿಮಾರ್, ತಾವು ಮಜಿ ಶಾಲೆಯ ಹಿರಿಯ ವಿದ್ಯಾರ್ಥಿಯಾಗಿರುವ ಕಾರಣ ಶಾಲೆಗೆ ತಮ್ಮದೇ ಆದ ಕೊಡುಗೆಯಾಗಿ ನಿರ್ಮಾಣಗೊಂಡ ಶಾಲಾ ಮುಖದ್ವಾರದ ಪೂರ್ಣ ವೆಚ್ಚವನ್ನು ತಾವೇ ಭರಿಸುವುದಾಗಿ ಘೋಷಿಸಿದರು.

ಈ ಸಂದರ್ಭದಲ್ಲಿ ಕಳೆದ 10 ವರ್ಷಗಳಿಂದ ಉಚಿತವಾಗಿ ತರಕಾರಿ ಪೂರೈಸುತ್ತಿರುವ ಮೇಲ್ಕಾರಿನ ಚಂದ್ರಿಕಾ ವೆಜಿಟೇಬಲ್ಸ್ ಮಾಲಕ ಮಹಮ್ಮದ್ ಶರೀಫ್, ಸತತ ಏಳು ವರ್ಷಗಳ ಕಾಲ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಗೆ ಕಾರಣಕರ್ತರಾದ ಸುರತ್ಕಲ್ ಮಾತ ಡೆವಲಪರ್ಸ್‌ನ ಸಂತೋಷ ಶೆಟ್ಟಿ ಅರೆಬೆಟ್ಟು, ಕಳೆದ 25 ವರ್ಷಗಳಿಂದ ಶಾಲೆಯ ಭೌತಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಚಿನ್ನಾ ಮೈರಾ ಹಾಗೂ ನಿವೃತ್ತ ಅಕ್ಷರ ದಾಸೋಹ ಸಹಾಯಕಿ ಗಿರಿಜಾ ಅವರನ್ನು ಶಾಲಾ ಪರವಾಗಿ ಗೌರವಿಸಿ ಅಭಿನಂದಿಸಲಾಯಿತು. ಕಲಿಕೆ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವೀರಕಂಬ ಗ್ರಾಮ ಪಂಚಾಯತ್ ಸದಸ್ಯೆ ಮೀನಾಕ್ಷಿ ಸುನಿಲ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಸುಕರಾಜ್, ನಿವೃತ್ತ ಮುಖ್ಯ ಶಿಕ್ಷಕ ಕೇಶವಯ್ಯ ಎಸ್., ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಈಶ್ವರ ಭಟ್ ರಾಕೋಡಿ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೊರಗಪ್ಪ ನಾಯ್ಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥನೆ ನೆರವೇರಿಸಿ, ಮುಖ್ಯ ಶಿಕ್ಷಕಿ ಬೆನ್ನಿಡಿಕ್ಟ ಆಗ್ನೇಸ್ ಮೆಂಡೋನ್ಸ ಸ್ವಾಗತಿಸಿದರು. ಶಾಲಾ ವರದಿಯನ್ನು ಮುಷಿದಾ ಬಾನು ವಾಚಿಸಿದರು. ಶಿಕ್ಷಕಿ ಜಯಲಕ್ಷ್ಮಿ ಬಹುಮಾನಿತರ ಪಟ್ಟಿ ಓದಿದರು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ವಂದಿಸಿದರು. ಸಂಗೀತ ಶರ್ಮ ಪಿ.ಜಿ. ಮತ್ತು ತೌಸೀಫ್ ಅಹಮ್ಮದ್ ಕಾರ್ಯಕ್ರಮ ನಿರೂಪಿಸಿದರು.

ಶಾಲೆಯನ್ನು ಮಕ್ಕಳೇ ತಯಾರಿಸಿದ ಗೆರೆಟೆಯ ಅಲಂಕಾರಗಳು ಹಾಗೂ ವಿದ್ಯುತ್ ದೀಪಗಳಿಂದ ಸಿಂಗರಿಸಲಾಗಿತ್ತು. ಸಾರ್ವಜನಿಕ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಅಂಗನವಾಡಿ ಪುಟಾಣಿಗಳು, ಶಾಲಾ ಮಕ್ಕಳು ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿದವು.

You may also like

News

ಸಂದೇಶ ಪ್ರಶಸ್ತಿಗಳು 2026 ಘೋಷಣೆ – ಜನವರಿ 21ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

ಮಂಗಳೂರಿನ ಪ್ರತಿಷ್ಠಿತ ಸಂಗೀತಗಾರ ಸೈಮನ್ ಪಾಯ್ಸ್ ಬಜಾಲ್ ಸೇರಿದಂತೆ ಹಲವು ಸಾಧಕರಿಗೆ ಪ್ರಶಸ್ತಿಗಳು ಮೌಲ್ಯಾಧಾರಿತ ಸಮಾಜ ನಿರ್ಮಾಣದ ಧ್ಯೇಯದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು
News

ಸಿಒಡಿಪಿ ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ತರಬೇತಿ ಯಶಸ್ವಿ

ಜನವರಿ 8ರಂದು ಗುರುವಾರ ಮಹಿಳಾ ಸಬಲೀಕರಣ ಯೋಜನೆಯಡಿಯಲ್ಲಿ ಮಿಸೋರಿಯರ್ ಮತ್ತು ಬೆಂಗಳೂರು ಕ್ರಾಸ್ ಸಂಸ್ಥೆಗಳ ಸಹಯೋಗದೊಂದಿಗೆ ಸಿಒಡಿಪಿ ಸಂಸ್ಥೆಯಲ್ಲಿ ಒಕ್ಕೂಟ ಬಲವರ್ಧನೆ ತರಬೇತಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.

You cannot copy content of this page