ಅಂತರ್ ರಾಜ್ಯ ವಾಹನ ಕಳವು ಹಾಗೂ ಚಿನ್ನದ ಸರಗಳ್ಳತನ ಪ್ರಕರಣ
42 ಅಪರಾಧ ದಾಖಲೆಗಳಿರುವ ಆರೋಪಿಯ ಸಹಿತ ಇಬ್ಬರ ಬಂಧನ

ಯೆಯ್ಯಾಡಿಯ ಶ್ರೀ ಹರಿ ಕಾಂಪ್ಲೆಕ್ಸ್ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಯಮಹಾ FZ (KA-19-ER-7755) ಮೋಟಾರ್ ಸೈಕಲ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಕದ್ರಿ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿ ಮಹತ್ವದ ಯಶಸ್ಸು ಸಾಧಿಸಿದ್ದಾರೆ.

ಡಿಸೆಂಬರ್ 12ರಂದು ಶುಕ್ರವಾರ ಮೋಟಾರ್ ಸೈಕಲ್ ಕಳವು ಸಂಬಂಧ ಕದ್ರಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಖಚಿತ ಮಾಹಿತಿಯ ಮೇರೆಗೆ ಡಿಸೆಂಬರ್ 16 ರಂದು ಮಂಗಳವಾರ ಪ್ರಕರಣದ ಪ್ರಮುಖ ಆರೋಪಿಗಳಾದ ಪೈಸಲ್ @ ತೋಟ ಪೈಸಲ್ (ಉಳ್ಳಾಲ) ಹಾಗೂ ನಿತೀನ್ ಕುಮಾರ್ (ಮೈಸೂರು) ಅವರನ್ನು ವಶಕ್ಕೆ ಪಡೆದು ಕೂಲಂಕಷ ವಿಚಾರಣೆ ನಡೆಸಲಾಯಿತು. ವಿಚಾರಣೆಯಲ್ಲಿ ಆರೋಪಿಗಳು ಡಿಸೆಂಬರ್ 13 ರಂದು ಶನಿವಾರ ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ಡಿ ಹಿತ್ಲು ಬೆಳಕೆ ಪ್ರದೇಶದಲ್ಲಿ 70 ವರ್ಷದ ವೃದ್ಧೆ ಹೊನ್ನಮ್ಮ ಮಹಾದೇವ ನಾಯ್ಕ್ ಅವರ ಕುತ್ತಿಗೆಯಿಂದ ಚಿನ್ನದ ಚೈನ್ ಕಸಿದು ಪರಾರಿಯಾದ ಪ್ರಕರಣದಲ್ಲೂ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳಿಂದ ಅಂದಾಜು ರೂಪಾಯಿ 1,20,000 ಮೌಲ್ಯದ ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ರೂಪಾಯಿ 45,000 ಮೌಲ್ಯದ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಪ್ರಮುಖ ಆರೋಪಿ ಪೈಸಲ್ @ ತೋಟ ಪೈಸಲ್ ವಿರುದ್ಧ ಉಡುಪಿ, ಕಾರ್ಕಳ, ಮಣಿಪಾಲ, ಮಂಗಳೂರು, ಬೆಳ್ತಂಗಡಿ, ವಿಟ್ಲ, ಕಂಕನಾಡಿ ನಗರ, ಪುತ್ತೂರು, ಶಿರ್ವ, ಸುರತ್ಕಲ್, ಕಡಬ, ಕೊಣಾಜೆ, ಮಡಿಕೇರಿಯ ಕುಶಾಲನಗರ ಸೇರಿದಂತೆ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ರಾಬರಿ, ದರೋಡೆ, ಕಳ್ಳತನ ಮತ್ತು ಕೊಲೆ ಪ್ರಕರಣಗಳನ್ನು ಒಳಗೊಂಡಂತೆ ಸುಮಾರು 42 ಪ್ರಕರಣಗಳು ದಾಖಲಾಗಿವೆ. ಈತನ ವಿರುದ್ಧ ವಿವಿಧ ನ್ಯಾಯಾಲಯಗಳಲ್ಲಿ 10 ಕ್ಕಿಂತ ಹೆಚ್ಚು ಜಾಮೀನುರಹಿತ ವಾರಂಟ್ಗಳು ಬಾಕಿಯಿದ್ದು, ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾನೆ.


ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ ಅನಂತ ಪದ್ಮನಾಭ ಅವರ ನೇತೃತ್ವದಲ್ಲಿ ಪಿಎಸ್ಐ ಮನೋಹರ್ ಪ್ರಸಾದ್, ಎಎಸ್ಐಗಳಾದ ಚಂದ್ರಶೇಖರ್, ಸುಧಾಕರ್ ರಾವ್, ರಾಜಶೇಖರ್, ಹೆಚ್ಸಿಗಳಾದ ಲೋಕೆಶ್, ಸಂತೋಷ್ ಡಿ.ಕೆ., ಸುರೇಶ್, ದಿಲೀಪ್, ಮೋಹನ್, ಮಲ್ಲಪ್ಪ ಬಿ., ಹಾಗೂ ಪಿಸಿಗಳಾದ ಸುನೀಲ್, ಮಣಿಕಂಠ, ಮೌಲಾ ಅಹಮ್ಮದ್, ಮಂಜುನಾಥ ವಡ್ಡರ ಮತ್ತು ಕದ್ರಿ ಠಾಣೆಯ ಸಿಬ್ಬಂದಿ ವರ್ಗ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.




