ಮಂಗಳೂರಿನ ಚೆಲುವೆಗೆ ಅಂತಾರಾಷ್ಟ್ರೀಯ ಕಿರೀಟ: ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ವಿಜೇತೆ ವಿದ್ಯಾ ಸಂಪತ್
ಮನೆ, ಸಂಸಾರ, ಮಗ ಮತ್ತು ಉದ್ಯಮವನ್ನು ಸಮರ್ಥವಾಗಿ ನಿಭಾಯಿಸುತ್ತಾ ಮಾಡೆಲಿಂಗ್ ಜಗತ್ತಿನಲ್ಲಿ ತಮ್ಮದೇ ಛಾಪು ಮೂಡಿಸಿರುವ ಮಂಗಳೂರಿನ ಸುಂದರಿ ವಿದ್ಯಾ ಸಂಪತ್ ಫಿಲಿಫೈನ್ಸ್ನಲ್ಲಿ ನಡೆದ ಪ್ರತಿಷ್ಠಿತ ಮಿಸೆಸ್ ಅರ್ಥ್ ಇಂಟರ್ನ್ಯಾಷನಲ್ ಸೌಂದರ್ಯ ಸ್ಪರ್ಧೆಯಲ್ಲಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ವಿಶ್ವದ 22 ದೇಶಗಳ ಸ್ಪರ್ಧಿಗಳನ್ನು ಮೀರಿಸಿ ಅವರು ಗ್ರಾಂಡ್ ವಿನ್ನರ್ ಆಗಿ ಹೊರಹೊಮ್ಮಿ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ಮಂಗಳೂರಿನ ಚಿತ್ರಾಪುರದಲ್ಲಿ ಸೂಪರ್ ಮಾರ್ಕೆಟ್ ಉದ್ಯಮ ನಡೆಸುತ್ತಿರುವ ವಿದ್ಯಾ ಸಂಪತ್ ಉದ್ಯಮಿಯಾಗಿಯೂ, ಮಾಡೆಲ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯ ವಿವಿಧ ಸುತ್ತುಗಳಲ್ಲಿ ಯಶಸ್ವಿಯಾಗಿ ಭಾಗವಹಿಸಿ ಅಂತಾರಾಷ್ಟ್ರೀಯ ಮಟ್ಟದ ಈ ಸ್ಪರ್ಧೆಗೆ ಅವರು ಆಯ್ಕೆಯಾಗಿದ್ದರು. ಡಿಸೆಂಬರ್ 2ರಿಂದ 10ರವರೆಗೆ ಫಿಲಿಫೈನ್ಸ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದಿಂದ ಆಯ್ಕೆಯಾದ ಏಕೈಕ ಸ್ಪರ್ಧಿಯಾಗಿದ್ದರು ಎಂಬುದು ವಿಶೇಷ.

ಟ್ಯಾಲೆಂಟ್ ರೌಂಡ್, ನ್ಯಾಷನಲ್ ಕಾಸ್ಟ್ಯೂಮ್ ಸೇರಿದಂತೆ ಹಲವು ಕಠಿಣ ಸುತ್ತುಗಳಲ್ಲಿ ತಮ್ಮ ಪ್ರತಿಭೆ, ಆತ್ಮವಿಶ್ವಾಸ ಮತ್ತು ವಿಭಿನ್ನ ಚಿಂತನೆಯ ಮೂಲಕ ತೀರ್ಪುಗಾರರನ್ನು ಮೆಚ್ಚಿಸಿದ ವಿದ್ಯಾ ಸಂಪತ್ ಗ್ರಾಂಡ್ ವಿನ್ನರ್ ಪಟ್ಟಕ್ಕೇರಿದರು. ನ್ಯಾಷನಲ್ ಕಾಸ್ಟ್ಯೂಮ್ ಸುತ್ತಿನಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿ, ರಾಷ್ಟ್ರೀಯ ಪಕ್ಷಿ ನವಿಲು ಹಾಗೂ ತಾವರೆ ಹೂವಿನ ಸಂಕೇತಗಳನ್ನು ಒಳಗೊಂಡ ವಿನ್ಯಾಸ ಪ್ರದರ್ಶಿಸಿ ಗಮನ ಸೆಳೆದರು. ‘ಕಸದಿಂದ ರಸ’ಪರಿಕಲ್ಪನೆಯಲ್ಲಿ ಬಳಸಿ ಎಸೆದ ಟಿನ್ಗಳು ಮತ್ತು ಪ್ಲಾಸ್ಟಿಕ್ ತ್ಯಾಜ್ಯದಿಂದ ತಯಾರಿಸಿದ ವಸ್ತ್ರದ ಮೂಲಕ ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು. ಜೊತೆಗೆ ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಪ್ರತಿಮೆಯನ್ನು ವಿವಿಧ ರಾಷ್ಟ್ರಗಳ 22 ಸ್ಪರ್ಧಿಗಳಿಗೆ ಉಡುಗೊರೆಯಾಗಿ ನೀಡಿ ನಮ್ಮ ನಾಡಿನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದರು.

ಮುಂಬೈನಲ್ಲಿ ಜನಿಸಿದರೂ ಸದ್ಯ ಮಂಗಳೂರು ವಾಸಿಯಾಗಿರುವ ವಿದ್ಯಾ ಸಂಪತ್, ಪಾತ್ ವೇ ಮಾಡೆಲಿಂಗ್ ಸ್ಟುಡಿಯೋದ ದೀಪಕ್ ಗಂಗೂಲಿ ಹಾಗೂ ಮರ್ಸಿ ಬ್ಯೂಟಿ ಅಕಾಡೆಮಿ ಮತ್ತು ಲೇಡೀಸ್ ಸಲೂನ್ನ ಮರ್ಸಿ ಅವರಿಂದ ತರಬೇತಿ ಪಡೆದಿದ್ದಾರೆ. ಫ್ಯಾಷನ್ ಲೋಕದಲ್ಲಿ ತಮ್ಮದೇ ಆದ ಗುರುತು ಮೂಡಿಸಿರುವ ಅವರು ‘ಬ್ಯೂಟಿ ವಿತ್ ಬ್ರೈನ್’ ಎಂಬುದಕ್ಕೆ ಜೀವಂತ ಉದಾಹರಣೆಯಾಗಿದ್ದಾರೆ. ಈ ಸಾಧನೆ ಕುರಿತು ಮಾತನಾಡಿದ ಅವರು, “ಫಿಲಿಫೈನ್ಸ್ಗೆ ಹೋಗಿ ಸ್ಪರ್ಧಿಸುವುದು ಸುಲಭವಾಗಿರಲಿಲ್ಲ. ಆದರೆ ಸಿಕ್ಕ ಪ್ರೋತ್ಸಾಹ ಮತ್ತು ಬೆಂಬಲದಿಂದ ಇದು ಸಾಧ್ಯವಾಯಿತು. ಗ್ರಾಂಡ್ ವಿನ್ನರ್ ಆಗಿ ಆಯ್ಕೆಯಾದ ಕ್ಷಣ ಅತ್ಯಂತ ಖುಷಿ ತಂದಿತು” ಎಂದು ಸಂತಸ ವ್ಯಕ್ತಪಡಿಸಿದರು.




