ಕರಾವಳಿ ಉತ್ಸವ ಹಿನ್ನೆಲೆ: ಮಂಗಳೂರು ನಗರದಲ್ಲಿ ಸಂಚಾರ ನಿಯಂತ್ರಣ
ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿರುವ ಕರಾವಳಿ ಉತ್ಸವ ಕಾರ್ಯಕ್ರಮದ ಉದ್ಘಾಟನೆ ಡಿಸೆಂಬರ್ 20ರಂದು ಸಂಜೆ 5 ಗಂಟೆಗೆ ಮಂಗಳೂರು ನಗರದ ಕರಾವಳಿ ಮೈದಾನದಲ್ಲಿ ನಡೆಯಲಿದೆ. ಇದರ ಬಳಿಕ ಜನವರಿ 2ರವರೆಗೆ ಸಂಜೆ ವೇಳೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟಿವೆ. ಉದ್ಘಾಟನಾ ಸಮಾರಂಭ ಹಾಗೂ ಮುಂದಿನ ದಿನಗಳ ಕಾರ್ಯಕ್ರಮಗಳಿಗೆ ಗಣ್ಯ ವ್ಯಕ್ತಿಗಳು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ವಾಹನಗಳು ಭಾಗವಹಿಸುವ ನಿರೀಕ್ಷೆಯಿರುವುದರಿಂದ, ನಗರದ ಕೆಲ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ಮಂಗಳೂರು ನಗರ ಪೊಲೀಸ್ ಇಲಾಖೆ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಲಾಲ್ಬಾಗ್ನಿಂದ ಕರಾವಳಿ ಮೈದಾನದವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ವಾಹನ ಪಾರ್ಕಿಂಗ್ಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಕಾರ್ಯಕ್ರಮಗಳಿಗೆ ಬರುವ ಸಾರ್ವಜನಿಕರು ಪೊಲೀಸರು ನಿಗದಿಪಡಿಸಿರುವ ಪಾರ್ಕಿಂಗ್ ಸ್ಥಳಗಳಲ್ಲಿಯೇ ತಮ್ಮ ವಾಹನಗಳನ್ನು ನಿಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ. ಕಾರ್ಯಕ್ರಮದ ಮಾರ್ಗದಲ್ಲಿ ವಾಹನ ನಿಲುಗಡೆ ಕುರಿತ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪೊಲೀಸರು ತಿಳಿಸಿದ್ದಾರೆ.


ಕಾರ್ಯಕ್ರಮಕ್ಕೆ ಆಗಮಿಸುವ ವಾಹನಗಳಿಗೆ ನಿಗದಿಪಡಿಸಿರುವ ಪಾರ್ಕಿಂಗ್ ಸ್ಥಳಗಳು: ಉರ್ವ ಮಾರ್ಕೆಟ್ ಮೈದಾನ (ಕಾರು), ಗಾಂಧಿನಗರ ಸರಕಾರಿ ಶಾಲೆ – ಪ್ರೆಸ್ ಕ್ಲಬ್ ಸಮೀಪ (ದ್ವಿಚಕ್ರ ಹಾಗೂ ಕಾರು), ಲೇಡಿಹಿಲ್ ಚರ್ಚ್ ಪಾರ್ಕಿಂಗ್, ಕೆನರಾ ಸ್ಕೂಲ್ ಮೈದಾನ ಮಣ್ಣಗುಡ್ಡೆ, ತಿಮ್ಮಪ್ಪ ಹೋಟೆಲ್ ಅವರಣ (ದ್ವಿಚಕ್ರ/ಕಾರು), ಸ್ಕೌಟ್ & ಗೈಡ್ ಹಾಲ್ ಅವರಣ – ಕರಾವಳಿ ಮೈದಾನ ಹಿಂಭಾಗ (ದ್ವಿಚಕ್ರ), ಉರ್ವ ಮಾರ್ಕೆಟ್ ರಸ್ತೆ ಹಾಗೂ ಹ್ಯಾಟ್ ಹಿಲ್ ರಸ್ತೆ (ದ್ವಿಚಕ್ರ).

ಸದರಿ ಕಾರ್ಯಕ್ರಮಗಳ ವೇಳೆ ವಾಹನ ಸಂಚಾರಕ್ಕೆ ತಾತ್ಕಾಲಿಕ ಅಡಚಣೆಗಳು ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು ಎಂದು ಪೊಲೀಸ್ ಆಯುಕ್ತರು, ಮಂಗಳೂರು ನಗರ ಅವರು ಮನವಿ ಮಾಡಿದ್ದಾರೆ.




