January 13, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸಂತ ಆಗ್ನೇಸ್ ಕಾಲೇಜಿನಲ್ಲಿ ಸರ್ವಧರ್ಮ ಸಂವಾದ: ಗಡಿಗಳನ್ನು ಮೀರಿ ಶಾಂತಿಯ ಸಂದೇಶ

ಸಂತ ಆಗ್ನೇಸ್ ಕಾಲೇಜು (ಸ್ವಾಯತ್ತ), ಮಂಗಳೂರು ಇಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಅಂತರ್ ಧರ್ಮೀಯ ಸಂವಾದ ಆಯೋಗ ಹಾಗೂ ಮಂಗಳೂರು ಧರ್ಮಕ್ಷೇತ್ರದ ಅಂತರ್ ಧರ್ಮೀಯ ವೇದಿಕೆಯ ಸಂಯುಕ್ತ ಸಹಯೋಗದಲ್ಲಿ “ಗಡಿಗಳನ್ನು ಮೀರಿ ಶಾಂತಿ: ಯುವಕರು ನಂಬಿಕೆಗಳ ನಡುವೆ ಸಾಮರಸ್ಯವನ್ನು ಬೆಳೆಸುವುದು” ಎಂಬ ವಿಷಯದಡಿ ಸರ್ವಧರ್ಮ ಸಂವಾದ ಕಾರ್ಯಕ್ರಮವನ್ನು ಶತಮಾನೋತ್ಸವ ಸಭಾಂಗಣದಲ್ಲಿ ಆಯೋಜಿಸಲಾಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಬಿಜೈ ಸಂತ ಫ್ರಾನ್ಸಿಸ್ ಕ್ಸೇವಿಯರ್ ಚರ್ಚ್‌ನ ಪ್ರಧಾನ ಧರ್ಮಗುರು ವಂದನೀಯ ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ಡಾನ್ಹಾ, ಬ್ರಹ್ಮ ಕುಮಾರೀಸ್ ಮಂಗಳೂರು ಕೇಂದ್ರದ ಉಸ್ತುವಾರಿ ಬ್ರಹ್ಮ ಕುಮಾರಿ ವಿಶ್ವೇಶ್ವರಿ, ಸನ್ಮಾರ್ಗ ಪಬ್ಲಿಕೇಷನ್ ಟ್ರಸ್ಟ್ ಮಂಗಳೂರಿನ ಅಶ್ಫಾಕ್ ಅಹ್ಮದ್ ಶರೀಫ್, ಮಂಗಳೂರು ವಿಶ್ವವಿದ್ಯಾಲಯದ ಕ್ರೈಸ್ತಧರ್ಮ ಪೀಠದ ಮುಖ್ಯಸ್ಥ ವಂದನೀಯ ಡಾ. ಸುನಿಲ್ ಜಿ. ಡಿಸೋಜ ಮಂಗಳೂರು ಧರ್ಮಕ್ಷೇತ್ರದ ಅಂತರ್ಧರ್ಮೀಯ ಸಂವಾದ ಹಾಗೂ ಕ್ರೈಸ್ತಧರ್ಮ ಆಯೋಗಗಳ ಗವರ್ನರ್ ವಂದನೀಯ ಫಾದರ್ ರೂಪೇಶ್ ಮಾಡ್ತಾ, ಸಂತ ಆಗ್ನೇಸ್ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸಿಸ್ಟರ್ ಮರಿಯಾ ರೂಪ ಎ.ಸಿ. ಸೇರಿದಂತೆ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂತ ಆಗ್ನೇಸ್ ಕಾಲೇಜಿನ (ಸ್ವಾಯತ್ತ) ಪ್ರಾಂಶುಪಾಲರಾದ ಸಿಸ್ಟರ್ ಡಾ. ಎಂ. ವೆನಿಸ್ಸಾ ಎ.ಸಿ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ವಂದನೀಯ ಡಾ. ಜಾನ್ ಬ್ಯಾಪ್ಟಿಸ್ಟ್ ಸಲ್ಡಾನ್ಹಾ ಮಾತನಾಡಿ, ಸಮಾಜದಲ್ಲಿ ಸಾಮರಸ್ಯದ ಅಗತ್ಯತೆ, ಪೂರ್ವಾಗ್ರಹಗಳನ್ನು ತೊರೆದು ಶಾಂತಿಪ್ರಿಯರಾಗುವ ಮಹತ್ವವನ್ನು ವಿವರಿಸಿದರು.

ಬ್ರಹ್ಮ ಕುಮಾರಿ ವಿಶ್ವೇಶ್ವರಿ “ಓಂ ಶಾಂತಿ” ಪಠಣದ ಅರ್ಥವನ್ನು ವಿವರಿಸಿ, ವಿವಿಧ ಧರ್ಮಗಳು ದೇವರನ್ನು ಒಂದೇ ರೀತಿಯಲ್ಲಿ ಕಾಣುವ ತತ್ವದ ಬಗ್ಗೆ ಮಾತನಾಡಿದರು. ಅಶ್ಫಾಕ್ ಅಹ್ಮದ್ ಶರೀಫ್ ಶಾಂತಿಯುತ ಸಮಾಜ ನಿರ್ಮಾಣಕ್ಕೆ ನ್ಯಾಯದ ಪಾತ್ರವನ್ನು ಒತ್ತಿ ಹೇಳಿದರು. ಇಸ್ಲಾಮಿಕ್ ಇತಿಹಾಸದಲ್ಲಿ ಶಾಂತಿಯುತ ಸಹಬಾಳ್ವೆಯ ಉದಾಹರಣೆಗಳನ್ನು ಅವರು ಹಂಚಿಕೊಂಡರು. ಮುಕ್ತ ಸಂವಾದದೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು.

ಉಪಪ್ರಾಂಶುಪಾಲರಾದ ಸಿಸ್ಟರ್ ಡಾ. ರೂಪಾ ರೊಡ್ರಿಗಸ್ ಎ.ಸಿ., ಪಿಜಿ ಸಂಯೋಜಕರಾದ ಸಿಸ್ಟರ್ ಡಾ. ಎಂ. ವಿನೋರಾ ಎ.ಸಿ., ಆಡಳಿತಾಧಿಕಾರಿ ಸಿಸ್ಟರ್ ಕಾರ್ಮೆಲ್ ರೀಟಾ ಎ.ಸಿ., ಡೀನ್‌ಗಳು, ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಪ್ರಾಂಶುಪಾಲರಾದ ಸಿಸ್ಟರ್ ಡಾ. ವೆನಿಸ್ಸಾ ಎ.ಸಿ. ಸ್ವಾಗತಿಸಿದರು. ವಂದನೀಯ ಫಾದರ್ ಸುನಿಲ್ ಡಿಸೋಜ ವಂದಿಸಿದರು. ಇಂಗ್ಲಿಷ್ ವಿಭಾಗದ ಪ್ರೊ. ಆಶಾ ಅಲ್ಬುಕರ್ಕ್ ಕಾರ್ಯಕ್ರಮ ನಿರೂಪಿಸಿದರು. ಶೋನ್ ಮತ್ತು ತಂಡದವರು ಪ್ರಾರ್ಥನೆ ನಡೆಸಿದರು.

You may also like

News

ಮಂಗಳೂರಿನಲ್ಲಿ 9ನೇ ಅಂತರ್‌ರಾಷ್ಟ್ರೀಯ ಗಾಳಿಪಟ ಉತ್ಸವ – ಜನವರಿ 17–18 ರಂದು ಬ್ಲೂ ಬೇ ಬೀಚ್‌ನಲ್ಲಿ ವೈಭವ

ಕರಾವಳಿ ಉತ್ಸವದ ಅಂಗವಾಗಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ‘ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡವು ಮಂಗಳೂರಿನ ತಣ್ಣೀರುಬಾವಿಯ ನವೀಕರಣಗೊಂಡ ಬ್ಲೂ ಬೇ ಬೀಚ್‌ನಲ್ಲಿ 9ನೇ ಅಂತರ್‌ರಾಷ್ಟ್ರೀಯ
News

ಧರ್ಮ ಕೇಳಿ ಅವಾಚ್ಯ ನಿಂದನೆ ಹಾಗೂ ಹಲ್ಲೆ – ಕೊಲೆಯತ್ನ ಪ್ರಕರಣದಲ್ಲಿ ಕಾವೂರು ಠಾಣಾ ಪೊಲೀಸರಿಂದ ಮೂವರ ಬಂಧನ

ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಧರ್ಮ ವಿಚಾರಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

You cannot copy content of this page