April 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮದ್ಯ ಮಾರಾಟ ಲೈಸನ್ಸ್‌ಗೆ ಇ-ಹರಾಜು – ದಕ್ಷಿಣ ಕನ್ನಡದಲ್ಲಿ ಜನವರಿ 19ರಂದು 30 ಅಬಕಾರಿ ಸನ್ನದುಗಳ ನೇರ ಬಿಡ್

ಅಬಕಾರಿ ಇಲಾಖೆಯು ಭಾರತೀಯ ಮದ್ಯ, ವಿದೇಶಿ ಮದ್ಯ ಅಥವಾ ಎರಡನ್ನೂ ಮಾರಾಟ ಮಾಡಲು ಫಾರಂ ಸಿಎಲ್-2ಎ ಹಾಗೂ ಫಾರಂ ಸಿಎಲ್-9ಎ ನಮೂನೆಗಳಲ್ಲಿನ ಖಾಲಿ ಅಥವಾ ಲಭ್ಯವಿರುವ ಅಬಕಾರಿ ಸನ್ನದುಗಳನ್ನು ನೀಡುವ ಉದ್ದೇಶದಿಂದ ಅರ್ಹ ಬಿಡ್‌ದಾರರಿಂದ ಇ-ಹರಾಜು ಮೂಲಕ ಬಿಡ್‌ಗಳನ್ನು ಆಹ್ವಾನಿಸಿದೆ. ಯಶಸ್ವಿ H1 ಬಿಡ್‌ದಾರರಿಗೆ ಈ ಸನ್ನದುಗಳನ್ನು ನೀಡಲಾಗುತ್ತದೆ.

ಇ-ಹರಾಜು ಪ್ರಕ್ರಿಯೆಯು ಎಂ.ಎಸ್.ಟಿ.ಸಿ ಲಿಮಿಟೆಡ್‌ನ ಇ-ಹರಾಜು ವೆಬ್‌ಸೈಟ್ https://www.mstcecommerce.com ಮೂಲಕ ನಡೆಯಲಿದ್ದು, ಹರಾಜು ನಡೆಯುವ ಹಾಗೂ ಅಂಗೀಕಾರ ಪತ್ರ ನೀಡುವ ವರ್ಷಗಳನ್ನು ಒಳಗೊಂಡಂತೆ ಒಟ್ಟು ಐದು ಅಬಕಾರಿ ವರ್ಷಗಳ ಅವಧಿಗೆ ಅನ್ವಯವಾಗಲಿದೆ. ಇ-ಹರಾಜಿಗೆ ಸಂಬಂಧಿಸಿದ ಮಾರ್ಗಸೂಚಿಗಳು, ನಿಯಮಗಳು ಮತ್ತು ಷರತ್ತುಗಳು, ಜಿಲ್ಲಾವಾರು ಸನ್ನದುಗಳ ವಿವರಗಳು, ಮೀಸಲಾತಿ ಮಾಹಿತಿ, ಅರ್ಜಿ ಶುಲ್ಕ, ಮುಂಗಡ ಠೇವಣಿ (EMD), ಮೂಲ ಬೆಲೆ ಹಾಗೂ ಹರಾಜಿನ ನಂತರದ ಪ್ರಕ್ರಿಯೆಗಳ ಸಂಪೂರ್ಣ ವಿವರಗಳು ಅಬಕಾರಿ ಇಲಾಖೆಯ ಅಧಿಕೃತ ವೆಬ್‌ಸೈಟ್ https://stateexcise.karnataka.gov.in ಮತ್ತು ಎಂ.ಎಸ್.ಟಿ.ಸಿ ಇ-ಹರಾಜು ಪೋರ್ಟಲ್‌ https://www.mstcecommerce.com  ನಲ್ಲಿ ಲಭ್ಯವಿರುತ್ತವೆ.

ಇ-ಹರಾಜಿನ ವೇಳಾಪಟ್ಟಿ:

ಬಿಡ್‌ದಾರರ ನೋಂದಣಿ ಡಿಸೆಂಬರ್ 22ರಿಂದ ಆರಂಭವಾಗಿದ್ದು, ಸಂಭಾವ್ಯ ಬಿಡ್‌ದಾರರು ಮತ್ತು ಜಿಲ್ಲಾ ಇ-ಹರಾಜು ನೋಡಲ್ ಅಧಿಕಾರಿಗಳಿಗೆ ಡಿಸೆಂಬರ್ 23ರಿಂದ ಜನವರಿ 7ರವರೆಗೆ ತರಬೇತಿ ನೀಡಲಾಗುತ್ತದೆ. ನೇರ ಇ-ಹರಾಜು ಜನವರಿ 13ರಿಂದ ಜನವರಿ 20ರವರೆಗೆ ನಡೆಯಲಿದೆ. ನೋಂದಣಿ ಪ್ರಕ್ರಿಯೆ ಪೂರ್ಣಗೊಂಡು ಆನ್‌ಲೈನ್ ಮೂಲಕ ವ್ಯಾಲೆಟ್‌ಗೆ ಹಣ ಪಾವತಿ ದೃಢಪಟ್ಟ ಬಳಿಕ ಮಾತ್ರ ಬಿಡ್‌ದಾರರು ಹರಾಜಿನಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ತಾಂತ್ರಿಕ ತೊಂದರೆಗಳಿಂದ ವಿಳಂಬವಾಗದಂತೆ, ತಾವು ಭಾಗವಹಿಸಲು ಇಚ್ಛಿಸುವ ಸ್ಲಾಟ್ ಹರಾಜು ಆರಂಭವಾಗುವ ಕನಿಷ್ಠ 48 ಗಂಟೆಗಳ ಮುಂಚಿತವಾಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಲು ಅಬಕಾರಿ ಇಲಾಖೆ ಸಲಹೆ ನೀಡಿದೆ.

ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಇ-ಹರಾಜು ಪ್ರಕ್ರಿಯೆಯ ನೋಡಲ್ ಅಧಿಕಾರಿಯಾಗಿ ಜಿಲ್ಲೆಯ ಅಬಕಾರಿ ಆಯುಕ್ತರನ್ನು ನೇಮಕ ಮಾಡಲಾಗಿದ್ದು, ಅವರ ದೂರವಾಣಿ ಸಂಖ್ಯೆ 9449597103 ಆಗಿದೆ. ಅಬಕಾರಿ ಆಯುಕ್ತರು ಪ್ರಕಟಿಸಿರುವ ತರಬೇತಿ ವೇಳಾ ಪಟ್ಟಿಯನ್ನು ಅಬಕಾರಿ ಇಲಾಖೆಯ ವೆಬ್ ಸೈಟ್  https://stateexcise.karnataka.gov.in ಮತ್ತು ಎಂ.ಎಸ್.ಟಿ.ಸಿ. ಇ ಹರಾಜು ಪೋರ್ಟಲ್ https://www.mstcecommerce.com ರಲ್ಲಿ ಪ್ರಕಟಿಸಲಾಗಿದ್ದು,  ಸಂಭಾವ್ಯ ಬಿಡ್‌ದಾರರಿಗೆ ತರಬೇತಿಯನ್ನು ನೀಡಲು ಸಿದ್ಧಪಡಿಸಿರುವ ವೇಳಾಪಟ್ಟಿಯಂತೆ ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಜನವರಿ 6ರಂದು ತರಬೇತಿ ನಿಗದಿಯಾಗಿದ್ದು, ತರಬೇತಿಯು ಉಡುಪಿ ಜಿಲ್ಲೆಯ ರಜತಾದ್ರಿ ಡೆಪ್ಯುಟಿ ಕಮಿಷನರ್ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ನಡೆಯಲಿದೆ.

ಇದಲ್ಲದೆ, ಜನವರಿ 19ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಧ್ಯಾಹ್ನ 3ರಿಂದ ಸಂಜೆ 5ರವರೆಗೆ ಸಿಎಲ್-2ಎ ವಿಭಾಗದ 29 ಹಾಗೂ ಸಿಎಲ್-9ಎ ವಿಭಾಗದ 1 ಸೇರಿದಂತೆ ಒಟ್ಟು 30 ಅಬಕಾರಿ ಸನ್ನದುಗಳ ನೇರ ಇ-ಹರಾಜು ನಡೆಯಲಿದೆ ಎಂದು ಡೆಪ್ಯುಟಿ ಕಮಿಷನರ್ ಆಫ್ ಎಕ್ಸೈಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You may also like

News

ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ – ಏಪ್ರಿಲ್ 18ಕ್ಕೆ ಪೂರ್ವಭಾವಿ ಸಭೆ ಹಾಗೂ ಸ್ವಾಗತ ಸಮಿತಿ ರಚನೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಘಟಕದ ಸಹಯೋಗದಲ್ಲಿ ಮೇ 12ರಂದು ನಡೆಯಲಿರುವ ‘ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ’ದ ಸಿದ್ಧತೆಗಳು
News

ಮಂಗಳೂರು ಧರ್ಮಕ್ಷೇತ್ರದ ವಿವಿಧ ಧರ್ಮಗುರುಗಳ 2026 ನೇ ಸಾಲಿನ ವರ್ಗಾವಣೆ ಪಟ್ಟಿ ಪ್ರಕಟ

ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆದೇಶ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

You cannot copy content of this page