ಕಡಬ ಬಾರ್ನಲ್ಲಿ ನಗದು ಹಾಗೂ ಮದ್ಯ ಕಳವು – ನೌಕರನ ವಿರುದ್ಧ ಪ್ರಕರಣ ದಾಖಲು
ಬಿಳಿನೆಲೆ ಗ್ರಾಮದ ನೆಟ್ಟಣದಲ್ಲಿರುವ ಬಾರ್ನಲ್ಲಿ ನಗದು ಹಾಗೂ ಮದ್ಯವನ್ನು ಕಳವು ಮಾಡಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ಪಿರ್ಯಾದಿದಾರರಾದ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ 25 ವರ್ಷ ಪ್ರಾಯದ ವಿಶಾಲ್ ಸ್ಟೀಫನ್ ಅವರು ನೀಡಿದ ದೂರಿನಂತೆ, ಅವರ ತಾಯಿಗೆ ಸೇರಿದ ಬಾರ್ನಲ್ಲಿ ಕಡಬ ತಾಲೂಕಿನ ಹುಂಚಪ್ಪಡಿ ನಿವಾಸಿ ಹರ್ಷಿತ್ ಬಿ.ಕೆ. ಎಂಬಾತನು ಕಳೆದ ಸುಮಾರು 7 ವರ್ಷಗಳಿಂದ ಕೆಲಸ ಮಾಡುತ್ತಿದ್ದು, ದಿನನಿತ್ಯದ ಹಣಕಾಸು ವ್ಯವಹಾರ, ಸ್ಟಾಕ್ ನಿರ್ವಹಣೆ ಹಾಗೂ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದನು.


ಡಿಸೆಂಬರ್ 21ರಂದು ಭಾನುವಾರ ರಾತ್ರಿ ಬಾರ್ನ ವಹಿವಾಟು ಪರಿಶೀಲನೆ ನಡೆಸಿದ ವೇಳೆ ಲೆಕ್ಕಪತ್ರಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಬಗ್ಗೆ ಪ್ರಶ್ನಿಸಿದಾಗ ಮರುದಿನ ಎಲ್ಲವೂ ಸರಿಯಾಗುತ್ತದೆ ಹಾಗೂ ವ್ಯಾಪಾರದ ನಗದನ್ನು ಬ್ಯಾಂಕಿಗೆ ಜಮೆ ಮಾಡುವುದಾಗಿ ಹರ್ಷಿತ್ ತಿಳಿಸಿದ್ದಾನೆ. ಆದರೆ ಮರುದಿನ ಹಣ ಜಮೆಯಾಗದ ಹಿನ್ನೆಲೆಯಲ್ಲಿ ಆತನ ವಾಸ್ತವ್ಯವಿದ್ದ ಕೊಠಡಿಗೆ ತೆರಳಿದಾಗ ಆತ ನಾಪತ್ತೆಯಾಗಿರುವುದು ಕಂಡುಬಂದಿದೆ.

ಪರಿಶೀಲನೆ ವೇಳೆ ಸ್ಟಾಕ್ ರೂಮಿನಲ್ಲಿದ್ದ ಸುಮಾರು ರೂಪಾಯಿ 6,57,104 ಮೌಲ್ಯದ ಮದ್ಯವನ್ನು ಆರೋಪಿಯು ಈ ಮೊದಲೇ ಮಾರಾಟ ಮಾಡಿ, ಅದರ ಮೊತ್ತವನ್ನು ಬ್ಯಾಂಕಿಗೆ ಜಮೆ ಮಾಡದೇ ವಂಚಿಸಿರುವುದು ಹಾಗೂ ಡಿಸೆಂಬರ್ 21ರಂದು ವ್ಯಾಪಾರದ ನಗದನ್ನು ಕಳವು ಮಾಡಿಕೊಂಡು ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 94/2025, ಕಲಂ 303(2), 314, 316(4) BNS–2023 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




