ಮಂಗಳೂರು ಕರಾವಳಿ ಉತ್ಸವಕ್ಕೆ ಕಳೆ ತಂದ ಪೊಲೀಸ್ ಕಲಾ ವೈಭವ – ಜನಮನ ಗೆದ್ದ ನಗರ ಪೊಲೀಸ್ ಕಲಾವಿದರು
ಜಿಲ್ಲಾಡಳಿತದ ವತಿಯಿಂದ ಡಿಸೆಂಬರ್ 27ರಂದು ಆಯೋಜಿಸಲಾದ ಮಂಗಳೂರು ಕರಾವಳಿ ಉತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಮಂಗಳೂರು ನಗರ ಪೊಲೀಸ್ ಇಲಾಖೆಯಿಂದ ನಡೆಸಲಾದ ಪೊಲೀಸ್ ಕಲಾ ವೈಭವ ಕಾರ್ಯಕ್ರಮ ಮಂಗಳೂರು ಜನತೆಯನ್ನು ಅಪಾರವಾಗಿ ಮನರಂಜಿಸಿ, ಪ್ರಶಂಸೆಗೆ ಪಾತ್ರವಾಯಿತು. ಪೊಲೀಸ್ ಇಲಾಖೆ ಕೇವಲ ಕಾನೂನು ಮತ್ತು ಭದ್ರತೆಯಷ್ಟೇ ಅಲ್ಲ, ಸಂಸ್ಕೃತಿ ಮತ್ತು ಕಲೆಯಲ್ಲಿಯೂ ಮುಂಚೂಣಿಯಲ್ಲಿದೆ ಎಂಬುದನ್ನು ಈ ಕಾರ್ಯಕ್ರಮ ಸ್ಪಷ್ಟಪಡಿಸಿತು.








ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರು ಪತ್ನಿ ಸಮೇತರಾಗಿ ಕರಾವಳಿ ಸಂಸ್ಕೃತಿಗೆ ಅನುರೂಪವಾಗಿ ಕಳಸಕ್ಕೆ ಬತ್ತ ತುಂಬುವ ಮೂಲಕ ನೆರವೇರಿಸಿದರು. ಈ ಸಂದರ್ಭದಲ್ಲಿ ಡಿಸಿಪಿ ಮಿಥುನ್ ಹಾಗೂ ಎಸಿಪಿ ಗೀತಾ ಕುಲಕರ್ಣಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕೆಎಸ್ಆರ್ಪಿ ಪೊಲೀಸರಿಂದ ಭವ್ಯ ಪೊಲೀಸ್ ಬ್ಯಾಂಡ್ ಪ್ರದರ್ಶನ ನಡೆಯಿತು. ಶಿಸ್ತಿನ ಜೊತೆಗೆ ಸಂಗೀತದ ಸೊಬಗು ಸೇರಿ ಪ್ರೇಕ್ಷಕರ ಗಮನ ಸೆಳೆಯಿತು. ನಂತರ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಂದ ತುಳು, ಕೊಂಕಣಿ, ಕನ್ನಡ ಮತ್ತು ಹಿಂದಿ ಭಾಷೆಗಳ ಜನಪ್ರಿಯ ಗೀತೆಗಳು ಗಾಯನಗೊಂಡು ಜನರ ಕಿವಿಗೆ ಇಂಪಾದವು.




ಜೀ ಕನ್ನಡ ಸಾ ರೆ ಗ ಮ ಪ ಖ್ಯಾತಿಯ ಪೊಲೀಸ್ ಸಿಬ್ಬಂದಿ ಸುಬ್ರಮಣಿ ಅವರು ಹಾಡಿದ ಕನ್ನಡ ಗೀತೆಗಳು ವಿಶೇಷ ಮೆಚ್ಚುಗೆ ಪಡೆದು ಪ್ರೇಕ್ಷಕರಿಂದ ಭಾರೀ ಚಪ್ಪಾಳೆ ಗಳಿಸಿತು. ಗೋಪಾಲಕೃಷ್ಣ ಪ್ರಶಾಂತ್ ಶೆಟ್ಟಿ, ಗಣೇಶ್ ಕಲ್ಲಡ್ಕ, ಗಜೇಂದ್ರ, ಸುಧೀರ್ ಕುಮಾರ್, ಜಯಾನಂದ್ ಸೇರಿದಂತೆ ಹಲವು ಪೊಲೀಸ್ ಕಲಾವಿದರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕಾರ್ಯಕ್ರಮದ ನಿರೂಪಣೆಯನ್ನು ಆರ್ಜೆ ನಯನ ಶೆಟ್ಟಿ ಅವರು ಚುರುಕಾಗಿ, ಹಾಸ್ಯಭರಿತವಾಗಿ ನಡೆಸಿಕೊಟ್ಟು ಪ್ರೇಕ್ಷಕರನ್ನು ಕೊನೆಯವರೆಗೂ ಹುರಿದುಂಬಿಸುವಂತೆ ಮಾಡಿದರು.


ಒಟ್ಟಿನಲ್ಲಿ ಪೊಲೀಸ್ ಕಲಾ ವೈಭವ ಕಾರ್ಯಕ್ರಮವು ಶಿಸ್ತು, ಸಂಸ್ಕೃತಿ ಹಾಗೂ ಸೃಜನಶೀಲತೆಯ ಸುಂದರ ಸಂಗಮವಾಗಿ ಮೂಡಿಬಂದು, ಮಂಗಳೂರು ಕರಾವಳಿ ಉತ್ಸವಕ್ಕೆ ವಿಶೇಷ ಕಳೆ ನೀಡಿತು. ಜನಸಾಮಾನ್ಯರೊಂದಿಗೆ ಪೊಲೀಸ್ ಇಲಾಖೆಯ ಆತ್ಮೀಯ ಸಂಪರ್ಕವನ್ನು ಇನ್ನಷ್ಟು ಗಟ್ಟಿಗೊಳಿಸಿದ ಈ ಪ್ರಯತ್ನಕ್ಕೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಯಿತು.




