January 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರು ನಿವಾಸಿ ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ನಿಧನ

ಅಸ್ಸಾಂನ ಬೊಂಗೈಗಾಂವ್ ಧರ್ಮಕ್ಷೇತ್ರದ ಸೇವೆಗೆ ಸಮರ್ಪಿತ ಜೀವನಕ್ಕೆ ಶಾಂತ ಅಂತ್ಯ

ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರು ನಿವಾಸಿಯಾಗಿದ್ದ ಅಸ್ಸಾಂನ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದ 57 ವರ್ಷ ಪ್ರಾಯದ ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರು ಇಂದು ಡಿಸೆಂಬರ್ 30ರಂದು ಮುಂಜಾನೆ ಅಸೌಖ್ಯದಿಂದ ನಿಧನ ಹೊಂದಿದರು. ಅವರ ನಿಧನದ ಸುದ್ದಿ ಸೂರಿಕುಮೇರು ಸೇರಿದಂತೆ ಧಾರ್ಮಿಕ ವಲಯದಲ್ಲಿ ತೀವ್ರ ದುಃಖ ಮತ್ತು ಶೋಕವನ್ನುಂಟುಮಾಡಿದೆ.

ಬೊನವೆಂಚರ್ ಪಿಂಟೊ ಮತ್ತು ಆಲಿಸ್ ಪಿಂಟೊ ದಂಪತಿಗಳಿಗೆ ಪುತ್ರರಾಗಿ 1968ರ ಫೆಬ್ರವರಿ 28ರಂದು ಜನಿಸಿದ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರು, ಬಾಲ್ಯದಿಂದಲೇ ಧಾರ್ಮಿಕತೆ, ಶಿಸ್ತು ಹಾಗೂ ಸೇವಾಭಾವವನ್ನು ತಮ್ಮ ಜೀವನದ ಮೌಲ್ಯಗಳಾಗಿ ಅಳವಡಿಸಿಕೊಂಡಿದ್ದರು. 2003ರ ಮೇ 1ರಂದು ಗುರುದೀಕ್ಷೆ ಪಡೆದ ಅವರು, ನಂತರ ಬೊಂಗೈಗಾಂವ್ ಧರ್ಮಕ್ಷೇತ್ರದಲ್ಲಿ ಧರ್ಮಗುರುಗಳಾಗಿ ಸೇವೆ ಸಲ್ಲಿಸಿ ಅನೇಕ ವರ್ಷಗಳ ಕಾಲ ನಿಷ್ಠೆಯಿಂದ ದೇವಜನರ ಸೇವೆಗೆ ತಮ್ಮ ಜೀವನವನ್ನು ಸಮರ್ಪಿಸಿದರು.

ಸರಳ ಸ್ವಭಾವ, ಮೃದು ವಾಣಿ, ಪ್ರೀತಿ ಮತ್ತು ಕಾಳಜಿಯೊಂದಿಗೆ ಜನರ ಹೃದಯ ಗೆದ್ದ ಫಾದರ್ ಫೆಲಿಕ್ಸ್ ಪಿಂಟೊ ಅವರು, ಧರ್ಮೋಪದೇಶ, ಸಮಾಜಸೇವೆ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಅನೇಕ ವಿಶ್ವಾಸಿಗಳಿಗೆ ಮಾರ್ಗದರ್ಶಕರಾಗಿದ್ದರು. ಅವರು ಸೇವೆ ಸಲ್ಲಿಸಿದ ಪ್ರತಿಯೊಂದು ಸ್ಥಳದಲ್ಲಿಯೂ ತಮ್ಮ ವಿನಮ್ರತೆ ಹಾಗೂ ಆತ್ಮೀಯತೆಯಿಂದ ಆಳವಾದ ಗುರುತು ಮೂಡಿಸಿದ್ದರು.

ಮೃತರು ತಂದೆ ಬೊನವೆಂಚರ್ ಪಿಂಟೊ, ಸಹೋದರ ವಿಕ್ಟರ್ ಪಿಂಟೊ, ಸಹೋದರಿಯರು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಫಾದರ್ ಫೆಲಿಕ್ಸ್ ಪಿಂಟೊ ಅವರ ನಿಧನಕ್ಕೆ ಸೂರಿಕುಮೇರು ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಹಾಗೂ ಕಥೊಲಿಕ್ ಸಭಾ ಸೂರಿಕುಮೇರು ಬೊರಿಮಾರ್ ಘಟಕದ ಅಧ್ಯಕ್ಷ ಎಲಿಯಾಸ್ ಪಿರೇರಾ, ಮಾಜಿ ಅಧ್ಯಕ್ಷ ತೊಮಸ್ ಲಸ್ರಾದೊ ಸೇರಿದಂತೆ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. “ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರ ಸೇವಾಮಯ ಜೀವನ ಸದಾ ಸ್ಮರಣೀಯ” ಎಂದು ಅವರುಗಳು ಶ್ರದ್ಧಾಂಜಲಿ ಅರ್ಪಿಸಿದ್ದಾರೆ.

ವಂದನೀಯ ಫಾದರ್ ಫೆಲಿಕ್ಸ್ ಲಿಯೋ ಪಿಂಟೊ ಅವರ ಅಂತಿಮ ವಿಧಿವಿಧಾನವು 2026ರ ಜನವರಿ 1ರಂದು ಗುರುವಾರ ಸಂಜೆ 3:30 ಗಂಟೆಗೆ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಭಗವಂತರು ಅವರ ಆತ್ಮಕ್ಕೆ ಶಾಶ್ವತ ಶಾಂತಿಯನ್ನು ನೀಡಲಿ ಹಾಗೂ ದುಃಖತಪ್ತ ಕುಟುಂಬಸ್ಥರಿಗೆ, ಬಂಧು-ಮಿತ್ರರಿಗೆ ಈ ನೋವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಸಮಸ್ತ ಭಕ್ತ ಸಮುದಾಯ ಪ್ರಾರ್ಥಿಸಿದೆ.

You may also like

News

ತುಳುಕೂಟ ಥೈಲ್ಯಾಂಡ್ ಸಹಕಾರದಿಂದ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರ ಸಂಪೂರ್ಣ ಪುನರ್‌ನವೀಕರಣ – ಹಸ್ತಾಂತರ ಹಾಗೂ ಸೇವಾ ಕಾರ್ಯಕ್ರಮಗಳು ಯಶಸ್ವಿ

ಅಧ್ಯಕ್ಷ ವಿನಯ್ ರೈ ಅವರ ಕಾರ್ಯ ವೈಖರಿಗೆ ವ್ಯಾಪಕ ಮೆಚ್ಚುಗೆ ಬಟ್ಟಾರಬೆಟ್ಟು–ಅಳಪೆ–ಪಡೀಲ್‌ನ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರವು ತುಳುಕೂಟ ಥೈಲ್ಯಾಂಡ್‌ನ ಅಮೂಲ್ಯ ಸಹಕಾರದಿಂದ ಸಂಪೂರ್ಣವಾಗಿ ಪುನರ್‌ನವೀಕರಣಗೊಂಡಿದ್ದು, ಇದರ ಹಸ್ತಾಂತರ
News

ಶಾಸಕಿ ಭಾಗೀರಥಿ ಮುರುಳ್ಯರ ಭಾವಚಿತ್ರ ಅವಹೇಳನ – ಬಿಜೆಪಿ ದಕ್ಷಿಣ ಕನ್ನಡದಿಂದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನು ಖಂಡಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಗರದ ಮಿನಿ ವಿಧಾನಸೌಧದ

You cannot copy content of this page