ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಗಲಾಟೆ – ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ, ಲಾರಿ ಚಾಲಕ ಸಹಿತ ಇಬ್ಬರು ವಶಕ್ಕೆ
ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಟೋಲ್ ಹಣ ನೀಡಲು ನಿರಾಕರಿಸಿ ಗೇಟ್ಗೆ ಹಾನಿ ಮಾಡಿರುವುದಲ್ಲದೆ ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ಹಾಗೂ ಕ್ಲೀನರ್ರನ್ನು ಬಂಟ್ವಾಳ ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ನಿವಾಸಿ 25 ವರ್ಷ ಪ್ರಾಯದ ಪ್ರಶಾಂತ್ ಬಿ. ನೀಡಿದ ದೂರಿನಂತೆ, ಅವರು ಬಂಟ್ವಾಳ ಬ್ರಹ್ಮರಕೂಟ್ಲು ಟೋಲ್ ಗೇಟ್ನಲ್ಲಿ ಟೋಲ್ ಇನ್ಚಾರ್ಜ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಿಸೆಂಬರ್ 29ರಂದು ಸೋಮವಾರ ಮುಂಜಾನೆ ಕೆಎ–18 ಸಿ–3048 ನೋಂದಣಿಯ ಟಾಟಾ ಲಾರಿಯೊಂದು ರಸ್ತೆಯ ವಿರುದ್ಧ ದಿಕ್ಕಿನಿಂದ ಟೋಲ್ ಗೇಟ್ಗೆ ಬಂದು, ಟೋಲ್ ಹಣ ಕೇಳಿದಾಗ ಹಣ ನೀಡಲು ನಿರಾಕರಿಸಿದೆ. ಬಳಿಕ ಲಾರಿಯನ್ನು ಮುಂದಕ್ಕೆ ಚಲಾಯಿಸಿ ಟೋಲ್ ಗೇಟ್ಗೆ ಹಾನಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.


ಅಷ್ಟೇ ಅಲ್ಲದೆ, ಲಾರಿ ಚಾಲಕ ಹಾಗೂ ಇನ್ನೋರ್ವ ಆರೋಪಿ ಟೋಲ್ ಸಿಬ್ಬಂದಿಗಳಾದ ಅಂಕಿತ್ ಮತ್ತು ರೋಹಿತ್ ಎಂಬವರನ್ನು ಅವಾಚ್ಯವಾಗಿ ಬೈದು ಹಲ್ಲೆ ನಡೆಸಿದ್ದಾರೆ. ನಂತರ ಮತ್ತೊಂದು ಪಿಕಪ್ ವಾಹನದಲ್ಲಿ ಬಂದ ಇಬ್ಬರನ್ನು ಕರೆದುಕೊಂಡು ಟೋಲ್ ಬೂತ್ ಒಳಗೆ ಅಕ್ರಮವಾಗಿ ಪ್ರವೇಶಿಸಿ, ಮತ್ತೆ ಇಬ್ಬರು ಟೋಲ್ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿರುವ ಆರೋಪವೂ ಇದೆ.

ಈ ಸಂಬಂಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 154/2025ರಡಿ ಭಾರತೀಯ ನ್ಯಾಯ ಸಂಹಿತೆ–2023ರ ಕಲಂಗಳು 329(3), 351(2), 352, 115(2), 118(1), 324(2) ಸಹಿತ 3(5) ಹಾಗೂ ಮೋಟಾರು ವಾಹನ ಕಾಯ್ದೆಯ ಕಲಂ 184(E) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು, ಚಿಕ್ಕಮಗಳೂರು ಮೂಲದ ಲಾರಿ ಚಾಲಕ 23 ವರ್ಷ ಪ್ರಾಯದ ಭರತ್ ಹಾಗೂ ಲಾರಿಯಲ್ಲಿ ಕ್ಲೀನರ್ ಆಗಿದ್ದ 36 ವರ್ಷ ಪ್ರಾಯದ ತೇಜಸ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.




