ಮೊಗರ್ನಾಡ್ ಚರ್ಚ್ ಸ್ಥಾಪನೆಯ 250ನೇ ವರ್ಷದ ಜ್ಯುಬಿಲಿ ಪ್ರಯುಕ್ತ ಅದ್ದೂರಿ ಹೊರೆಕಾಣಿಕೆ ಜಾಥಾ
ಮಂಗಳೂರು ಧರ್ಮಕ್ಷೇತ್ರದ ಮೊಗರ್ನಾಡ್ ದೇವಮಾತಾ ಧರ್ಮಕೇಂದ್ರದ ಸ್ಥಾಪನೆಯ 250ನೇ ವರ್ಷದ ಜ್ಯುಬಿಲಿ ಸಂಭ್ರಮಾಚರಣೆಯ ಅಂಗವಾಗಿ ಡಿಸೆಂಬರ್ 28ರಂದು ಸಮಾರೋಪ ಕಾರ್ಯಕ್ರಮಕ್ಕೆ ಊಟದ ತಯಾರಿಗಾಗಿ ಹೊರೆಕಾಣಿಕೆ ಸಮರ್ಪಣೆಯ ಅದ್ದೂರಿ ಜಾಥಾವನ್ನು ವಿಶಿಷ್ಟವಾಗಿ ನಡೆಸಲಾಯಿತು.










ಮಧ್ಯಾಹ್ನ 2.45ಕ್ಕೆ ಕಲ್ಲಡ್ಕ ಕೆ.ಸಿ. ರೋಡಿನಿಂದ ವಾಹನ ಜಾಥಾದ ಮೂಲಕ ಹೊರೆಕಾಣಿಕೆ ಸಮರ್ಪಣೆಗೆ ಚಾಲನೆ ನೀಡಲಾಯಿತು. ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ, ದೇವಮಾತಾ ಆಂಗ್ಲ ಮಾಧ್ಯಮ ಶಾಲೆ ಅಮ್ಟೂರು ಇಲ್ಲಿನ ಮುಖ್ಯೋಪಾಧ್ಯಾಯರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೊ ಹಾಗೂ ಡಿಕಾನ್ ಅವಿಲ್ ಸಾಂತುಮಾಯೋರ್ ಅವರು ಜಾಥಾಕ್ಕೆ ಅಧಿಕೃತ ಚಾಲನೆ ನೀಡಿದರು.



























ಕೆ.ಸಿ. ರೋಡಿನಿಂದ ಆರಂಭವಾದ ಮೆರವಣಿಗೆ ಅಮ್ಟೂರು ಮಾರ್ಗವಾಗಿ ಮೊಗರ್ನಾಡು ದೇವಾಲಯವನ್ನು ತಲುಪಿತು. ಬಳಿಕ ಪ್ರಾರ್ಥನಾ ವಿಧಿಯನ್ನು ನೆರವೇರಿಸಿ ಹೊರೆಕಾಣಿಕೆಗಳ ಮೇಲೆ ಆಶೀರ್ವಚನ ನೀಡಲಾಯಿತು. ಈ ಹೊರೆಕಾಣಿಕೆ ಸಮರ್ಪಣೆಯಲ್ಲಿ ದೇವಮಾತೆ ದೇವಾಲಯದ ಹೊಸನ್ನಾ, ರಿಜೋಯ್ಸ್, ಬೆತ್ಲೆಹೆಮ್, ಜೆರುಜಲೆಮ್ ಹಾಗೂ ಗ್ಲೋರಿಯಾ ವಲಯಗಳು, ಸ್ತ್ರೀಶಕ್ತಿ ಸಂಘಟನೆ, ಸಂತ ವಿಶೆಂತ್ ಪಾವ್ಲ್ ಸಭಾ, ಕಥೊಲಿಕ್ ಸಭಾ, ಲಯನ್ಸ್ ಕ್ಲಬ್ ಸೇರಿದಂತೆ ಸಾಲೆತ್ತೂರು, ವಿಟ್ಲ, ಪೆರುವಾಯಿ, ಸೂರಿಕುಮೇರು ಬೊರಿಮಾರ್ ಹಾಗೂ ಶಂಭೂರು ದೇವಾಲಯಗಳ ಭಕ್ತಾಭಿಮಾನಿಗಳು ಅಪಾರ ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳನ್ನು ಸಮರ್ಪಿಸಿದರು.





ಸಮರ್ಪಿಸಲಾದ ಎಲ್ಲಾ ಹೊರೆಕಾಣಿಕೆಗಳನ್ನು ಮೊಗರ್ನಾಡ್ ಚರ್ಚ್ ಧರ್ಮಗುರು ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊ ಅವರು ಸ್ವೀಕರಿಸಿದರು. ಹೊರೆಕಾಣಿಕೆ ತಂದ ಭಕ್ತಾಭಿಮಾನಿಗಳಿಗೆ ಧನ್ಯವಾದ ಅರ್ಪಿಸಿ, ಸಮರ್ಪಕರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಲ್ಲರಿಗೂ ಚಹಾ ಹಾಗೂ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.



ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರು ಹಾಗೂ ಹೊಸನ್ನಾ ವಲಯದ ಮುಖ್ಯಸ್ಥರಾದ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೋ, ಸರ್ವ ಆಯೋಗಗಳ ಸಂಯೋಜಕಿ ಎಮಿಲಿಯಾನಾ ಡಿಕುನ್ಹಾ, ಜ್ಯುಬಿಲಿ ಸಮಿತಿಯ ಸಂಚಾಲಕ ನವೀನ್ ರಾಜೇಶ್ ಡಿಕುನ್ಹಾ, ವಿವಿಧ ವಲಯಗಳ ಮುಖ್ಯಸ್ಥರು, ಜ್ಯುಬಿಲಿ ಸಮಿತಿಯ ಸದಸ್ಯರು, ಸ್ತ್ರೀಶಕ್ತಿ ಸಂಘಟನೆಯ ಸದಸ್ಯರು, ವಿವಿಧ ಸಭಾ ಸಂಘಟನೆಗಳು ಹಾಗೂ ಅಪಾರ ಸಂಖ್ಯೆಯ ಭಕ್ತಾಭಿಮಾನಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ನೊವೆಲ್ ಲೋಬೋ ನಿರೂಪಿಸಿದರು.




