ಬಿಕರ್ನಕಟ್ಟೆಯ ದಿವ್ಯ ಬಾಲಯೇಸುವಿನ ವಾರ್ಷಿಕ ಮಹೋತ್ಸವಕ್ಕೆ ಸಿದ್ಧತೆ – ಜನವರಿ 14–15 ರಂದು ಭಕ್ತಿಭಾವದ ಸಂಭ್ರಮ
ಮಂಗಳೂರಿನ ಬಿಕರ್ನಕಟ್ಟೆಯ ಕಾರ್ಮೆಲ್ ಹಿಲ್ನಲ್ಲಿರುವ ಬಾಲ ಯೇಸುವಿನ ಪುಣ್ಯಕ್ಷೇತ್ರದಲ್ಲಿ 2026ನೇ ಸಾಲಿನ ದಿವ್ಯ ಬಾಲಯೇಸುವಿನ ವಾರ್ಷಿಕ ಮಹೋತ್ಸವವನ್ನು ಜನವರಿ 14 ಹಾಗೂ 15 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಇಂದು ಡಿಸೆಂಬರ್ 31ರಂದು ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಯಿತು.

ಮಹೋತ್ಸವದ ಅಂಗವಾಗಿ ಜನವರಿ 14ರಂದು ಸಂಜೆ 6.00 ಗಂಟೆಗೆ ಉಡುಪಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಸಾಂಭ್ರಮಿಕ ಬಲಿಪೂಜೆಯನ್ನು ನೆರವೇರಿಸಲಿದ್ದಾರೆ. ಅದೇ ದಿನ ಬೆಳಿಗ್ಗೆ 10.00 ಗಂಟೆಗೆ ವೃದ್ಧರು ಹಾಗೂ ಅಸ್ವಸ್ಥರಿಗಾಗಿ ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ವಿಶೇಷ ಬಲಿಪೂಜೆಯನ್ನು ಸಲ್ಲಿಸಲಿದ್ದಾರೆ.


ಜನವರಿ 15ರಂದು ಬೆಳಿಗ್ಗೆ 10.00 ಗಂಟೆಗೆ ಕಾರವಾರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ದುಮಿಂಗ್ ಡಾಯಸ್ ಅವರು ಮಕ್ಕಳಿಗಾಗಿ ವಿಶೇಷ ಬಲಿಪೂಜೆಯನ್ನು ನಡೆಸಿಕೊಡಲಿದ್ದಾರೆ. ಮಹೋತ್ಸವದ ಸಮಾರೋಪ ಪ್ರಾರ್ಥನಾ ವಿಧಿ ಸಂಜೆ 6.00 ಗಂಟೆಗೆ ಮಂಗಳೂರು ಧರ್ಮಕ್ಷೇತ್ರದ ಶ್ರೇಷ್ಠ ಗುರುಗಳಾದ ಅತೀ ವಂದನೀಯ ಮೊನ್ಸಿಂಞೆರ್ ಮ್ಯಾಕ್ಸಿಂ ಎಲ್. ನೊರೊನ್ಹಾ ಅವರ ನೇತೃತ್ವದಲ್ಲಿ ನಡೆಯಲಿದೆ.


ವಾರ್ಷಿಕ ಮಹೋತ್ಸವಕ್ಕೆ ಪೂರ್ವಸಿದ್ಧತೆಯಾಗಿ ಜನವರಿ 5 ರಿಂದ 13ರವರೆಗೆ ನವ ದಿನಗಳ ನೊವೇನಾ ಪ್ರಾರ್ಥನೆ ನಡೆಯಲಿದ್ದು, ಪ್ರತಿದಿನ ವಿವಿಧ ಭಾಷೆಗಳಲ್ಲಿ ಬಲಿಪೂಜೆಗಳು, ಪರಮ ಪ್ರಸಾದದ ಆರಾಧನೆ ಹಾಗೂ ದಿವ್ಯ ಬಾಲಯೇಸುವಿನ ಮೆರವಣಿಗೆ ಆಯೋಜಿಸಲಾಗಿದೆ. ಜೊತೆಗೆ ಅನ್ನಸಂತರ್ಪಣೆ, ಕಣ್ಣಿನ ಶಿಬಿರ, ರಕ್ತದಾನ ಶಿಬಿರ ಹಾಗೂ ಸಮಾಜಾಭಿವೃದ್ಧಿ ಯೋಜನೆಯ ಅನಾವರಣ ಸೇರಿದಂತೆ ಹಲವು ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಪತ್ರಿಕಾಗೋಷ್ಠಿಯಲ್ಲಿ ಬಾಲಯೇಸುವಿನ ಪುಣ್ಯಕ್ಷೇತ್ರದ ಮುಖ್ಯಸ್ಥರಾದ ವಂದನೀಯ ಫಾದರ್ ಮೆಲ್ವಿನ್ ಡಿಕುನ್ಹಾ, ನಿರ್ದೇಶಕರಾದ ವಂದನೀಯ ಫಾದರ್ ಸ್ಟೀಫನ್ ಪಿರೇರಾ ಸೇರಿದಂತೆ ವಿವಿಧ ಪ್ರತಿನಿಧಿಗಳು ಹಾಜರಿದ್ದು, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಹ್ವಾನಿಸಿದರು.




