ಇತಿಹಾಸ–ಸಂಸ್ಕೃತಿ ಅಧ್ಯಯನಕ್ಕೆ ಬಂದ ಶ್ರೀಲಂಕಾದ ಮಾಧ್ಯಮ ತಜ್ಞರಿಗೆ ‘ಕನ್ನಡ ಪಯಸ್ವಿನಿ’ ಪ್ರಶಸ್ತಿ
ಇತಿಹಾಸ, ಸಂಸ್ಕೃತಿ ಮತ್ತು ಸಮಾಜದ ಕುರಿತು ಅಧ್ಯಯನ ನಡೆಸುವ ಉದ್ದೇಶದಿಂದ ಕಾಸರಗೋಡಿಗೆ ಆಗಮಿಸಿದ್ದ ಶ್ರೀಲಂಕಾದ ಆರು ಮಂದಿ ಮಾಧ್ಯಮ ತಜ್ಞರನ್ನು ಗೌರವಿಸಿ ಕಾಸರಗೋಡು ಕನ್ನಡಭವನದ ವತಿಯಿಂದ ‘ಕನ್ನಡ ಪಯಸ್ವಿನಿ’ ಪ್ರಶಸ್ತಿಯನ್ನು ಪ್ರದಾನಿಸಲಾಯಿತು.


ಕನ್ನಡಭವನ ಗ್ರಂಥಾಲಯದ ಸಂಸ್ಥಾಪಕ ವಾಮನರಾವ್ ಬೇಕಲ್ ಹಾಗೂ ನಿರ್ದೇಶಕಿ ಸಂಧ್ಯಾ ರಾಣಿ ಟೀಚರ್ ಅವರು ಪ್ರಶಸ್ತಿಗಳನ್ನು ಪ್ರದಾನಿಸಿದರು. ಶ್ರೀಲಂಕಾ ಸರ್ಕಾರದ ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ವಾರ್ತಾ ಇಲಾಖೆಯ ಪ್ರತಿನಿಧಿಗಳು ಮತ್ತು ಅಲ್ಲಿನ ಕೇಂದ್ರ ಸಚಿವರ ಮಾಧ್ಯಮ ಕಾರ್ಯದರ್ಶಿಗಳು ಈ ಪ್ರಶಸ್ತಿಯನ್ನು ಸ್ವೀಕರಿಸಿದರು. ಪ್ರಶಸ್ತಿ ಪಡೆದವರಲ್ಲಿ ಪಾಟುಮ್ ಪಾಸ್ಕಲ್, ನಿಶಾಂತಾ ಅಲ್ವಿಸ್, ಸಂಜೀವ್ ತಿಸೇರಾ, ಹೇಮಂತ ಕುಮಾರಸಿಂಗೆ, ತುಷಾರ ಹೆಚ್ಚಿಯಾಚಿ ಹಾಗೂ ಧಾಮಿಶ್ ಅಜಿತ್ ಅವರು ಸೇರಿದ್ದರು.


ಕಾರ್ಯಕ್ರಮದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎ.ಆರ್. ಸುಬ್ಬಯಕಟ್ಟೆ, ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರವಿ ನಾಯ್ಕಾಪು, ಕಾರ್ಯದರ್ಶಿ ಗಂಗಾಧರ ತೆಕ್ಕೇಮೂಲೆ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ರಾಧಾಕೃಷ್ಣ ಕೆ. ಉಳಿಯತ್ತಡ್ಕ, ಮಾಜಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.




