ಜನವರಿ 4ರಂದು ಮಂಗಳೂರು ಧರ್ಮಕ್ಷೇತ್ರದ ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆ
ಬಿಷಪ್ ಪೀಟರ್ ಪಾವ್ಲ್ ಸಲ್ಡಾನ್ಹಾರವರ ನೇತೃತ್ವ

ಮಂಗಳೂರು ಧರ್ಮಕ್ಷೇತ್ರದ ವತಿಯಿಂದ ಪ್ರತಿವರ್ಷದ ಸಂಪ್ರದಾಯದಂತೆ 2026ರ ಜನವರಿ 4ರಂದು ಭಾನುವಾರ ವಾರ್ಷಿಕ ಪರಮ ಪವಿತ್ರ ಪ್ರಸಾದದ ಭವ್ಯ ಮೆರವಣಿಗೆಯು ಬಿಷಪ್ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ನಗರದಲ್ಲಿ ಜರುಗಲಿದೆ. ಯೇಸು ಕ್ರಿಸ್ತರ ದೈವದರ್ಶನ ಮಹೋತ್ಸವ (ಎಪಿಫನಿ) ಅಂಗವಾಗಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮವು ಸಾವಿರಾರು ಭಕ್ತಾದಿಗಳ ಭಾಗವಹಿಸುವಿಕೆಗೆ ಸಾಕ್ಷಿಯಾಗಲಿದೆ.

ಈ ಮೆರವಣಿಗೆಯು ಕೇವಲ ಧಾರ್ಮಿಕ ವಿಧಿಯಾಗಿರದೆ, ಪ್ರಾರ್ಥನೆ, ಭಕ್ತಿಗೀತೆಗಳು ಹಾಗೂ ಆರಾಧನೆಯ ಮೂಲಕ ಇಡೀ ನಗರದ ಶಾಂತಿ, ಸೌಹಾರ್ದತೆ ಮತ್ತು ಸಮೃದ್ಧಿಗಾಗಿ ಸಲ್ಲಿಸುವ ಸಾಮೂಹಿಕ ಪ್ರಾರ್ಥನಾ ಯಾತ್ರೆಯಾಗಿದೆ.
ಈ ವರ್ಷದ ಮೆರವಣಿಗೆಯ ಆಧ್ಯಾತ್ಮಿಕ ಚಿಂತನೆಯು ಪೋಪ್ ಲಿಯೋ XIV ಅವರ ಅಪೋಸ್ತಲಿಕ್ ಪ್ರಬೋಧನೆಯಾದ “ದಿಲೆಕ್ಸಿ ತೆ” (Dilexi te – ನಾನು ನಿನ್ನನ್ನು ಪ್ರೀತಿಸಿದ್ದೇನೆ) ಎಂಬ ವಿಷಯದ ಮೇಲೆ ಆಧಾರಿತವಾಗಿರಲಿದೆ. ಈ ಸಂದರ್ಭ ರೊಸಾರಿಯೊ ಕೆಥೆಡ್ರಲ್ ಆವರಣದಲ್ಲಿ ವಂದನೀಯ ಫಾದರ್ ಅಬ್ರಹಾಂ ಡಿಸೋಜ SVD ಅವರು ದೇವರ ವಾಕ್ಯವನ್ನು ಬೋಧಿಸಲಿದ್ದಾರೆ.

ಕಾರ್ಯಕ್ರಮದ ವಿವರಗಳು:
- ಮಧ್ಯಾಹ್ನ 3.30ಕ್ಕೆ ಮಿಲಾಗ್ರಿಸ್ ಚರ್ಚ್ನಲ್ಲಿ ಪವಿತ್ರ ಬಲಿಪೂಜೆ
- ಸಂಜೆ 4.15ಕ್ಕೆ ಮಿಲಾಗ್ರಿಸ್ ಚರ್ಚ್ನಿಂದ ರೊಸಾರಿಯೊ ಕೆಥೆಡ್ರಲ್ ವರೆಗೆ ಭವ್ಯ ಮೆರವಣಿಗೆ
- ಸಂಜೆ 5.30ಕ್ಕೆ ರೊಸಾರಿಯೊ ಕೆಥೆಡ್ರಲ್ ಆವರಣದಲ್ಲಿ ದೇವರ ವಾಕ್ಯದ ಘೋಷಣೆ ಹಾಗೂ ಪರಮ ಪವಿತ್ರ ಪ್ರಸಾದದ ಆಶೀರ್ವಾದ


ಮೆರವಣಿಗೆಯು ಹಂಪನಕಟ್ಟೆ ಹಾಗೂ ಕ್ಲಾಕ್ ಟವರ್ ಸೇರಿದಂತೆ ನಗರದ ಪ್ರಮುಖ ವೃತ್ತಗಳ ಮೂಲಕ ಸಾಗಲಿದ್ದು, ಪವಿತ್ರ ಪ್ರಸಾದವನ್ನು ಹೊತ್ತ ಅಲಂಕೃತ ವಾಹನವು ಭಕ್ತರ ಗಮನಾಕರ್ಷಣೆಯ ಕೇಂದ್ರವಾಗಿರಲಿದೆ. ಮೆರವಣಿಗೆಯಾದ್ಯಂತ ಬ್ಯಾಂಡ್ ಹಾಗೂ ಗಾಯನ ತಂಡಗಳ ಭಕ್ತಿಗೀತೆಗಳು ಭಕ್ತಿಭಾವವನ್ನು ಇನ್ನಷ್ಟು ಗಾಢಗೊಳಿಸಲಿವೆ.




