ಕನ್ನಡದ ನಡಿಗೆ ಶಾಲೆಯ ಕಡೆಗೆ – ಪೆರ್ಮುದೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏಕದಿನ ಸಾಹಿತ್ಯ ಅಭಿಯಾನ
ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷೆ ಹಾಗೂ ಸಾಹಿತ್ಯದ ಬಗ್ಗೆ ಅರಿವು ಮತ್ತು ಆಸಕ್ತಿ ಮೂಡಿಸುವ ಉದ್ದೇಶದಿಂದ “ಕನ್ನಡದ ನಡಿಗೆ ಶಾಲೆಯ ಕಡೆಗೆ” ಎಂಬ ಏಕದಿನ ಸಾಹಿತ್ಯ ಅಭಿಯಾನವು ಜನವರಿ 1ರಂದು ಗುರುವಾರ ಪೆರ್ಮುದೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕೋಡಿಕೆರೆ–ಕುಳಾಯಿ ಇಲ್ಲಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಶಿಕ್ಷಕಿ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷರಾದ ರೇಖಾ ಸುದೇಶ್ ರಾವ್ ಅವರು ಅತಿಥಿ ಅಭ್ಯಾಗತರನ್ನು ಕನ್ನಡ ಶಾಲು ಹೊದಿಸಿ ಸ್ವಾಗತಿಸಿದರು. ಶಾಲಾ ಸಂಚಾಲಕರಾದ ರಮೇಶ್ ರಾವ್ ದೀಪ ಪ್ರಜ್ವಲನೆಗೈದು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಾಧ್ಯಕ್ಷ ಉಮೇಶ್ ರಾವ್ ಕುಂಬ್ಳೆ ಅವರು ಕಾರ್ಯಕ್ರಮದ ಪ್ರಸ್ತಾವನೆ ಮಾಡಿದರು. ಶಾಲಾ ಮುಖ್ಯ ಶಿಕ್ಷಕರಾದ ಕ್ಷಮಾ ಗೌರಿ ಅವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು.


ವಿದ್ಯಾರ್ಥಿಗಳಿಂದ ಮಕ್ಕಳ ಕವನ ವಾಚನ ಕಾರ್ಯಕ್ರಮ ನಡೆಯಿತು. ಪೆರ್ಮುದೆ ಶಾಲೆಯ ವಿಶ್ರಾಂತ ಶಿಕ್ಷಕಿ ಕೃಷ್ಣವೇಣಿ ಅವರು ರಸಪ್ರಶ್ನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಸುಮಾರು 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು. ಅಧ್ಯಕ್ಷೀಯ ನುಡಿಯಲ್ಲಿ ಕ್ಷಮಾ ಗೌರಿ ಅವರು ಕನ್ನಡ ಭಾಷೆಯ ಮೇಲಿನ ಒಲವು ಮತ್ತು ಅದರ ಮಹತ್ವವನ್ನು ಮನದಾಳದ ಭಾವದಿಂದ ವ್ಯಕ್ತಪಡಿಸಿದರು. ಜಿಲ್ಲಾಧ್ಯಕ್ಷರಾದ ರೇಖಾ ಸುದೇಶ್ ರಾವ್ ಅವರು ಅವರ ಸೇವೆಯನ್ನು ಮನಪೂರಕವಾಗಿ ಶ್ಲಾಘಿಸಿದರು.

ಶಾಲಾ ಶಿಕ್ಷಕಿ ರೇಷ್ಮಾ ಕಾರ್ಯಕ್ರಮದ ನಿರೂಪಣೆಗೈದರು. ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರಗಳನ್ನು ವಿತರಿಸಲಾಯಿತು. ಅತಿಥಿ ಅಭ್ಯಾಗತರನ್ನು ಶಾಲು ಹೊದಿಸಿ, ಸ್ಮರಣಿಕೆ, ಅಭಿನಂದನಾ ಪತ್ರ ಹಾಗೂ ಪುಸ್ತಕ ನೀಡಿ ಗೌರವಿಸಲಾಯಿತು. ಶಾಲಾ ಶಿಕ್ಷಕಿ ಮಲ್ಲಿಕಾ ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆಯೊಂದಿಗೆ ಸಮಾಪ್ತಿಗೊಂಡಿತು.




