ಬ್ಯಾಂಕ್ ಆಫ್ ಬರೋಡಾ ಪೆರ್ನೆ ಶಾಖೆಯಲ್ಲಿ ₹71.41 ಲಕ್ಷ ವಂಚನೆ – ಜಂಟಿ ವ್ಯವಸ್ಥಾಪಕನ ವಿರುದ್ಧ ಪ್ರಕರಣ
ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಭಾರೀ ಹಣಕಾಸು ವಂಚನೆ ನಡೆದಿರುವುದು ಬೆಳಕಿಗೆ ಬಂದಿದೆ. ದಿನಾಂಕ 04-09-2023 ರಿಂದ 19-12-2025ರ ಅವಧಿಯಲ್ಲಿ ಶಾಖೆಯ ಜಂಟಿ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದ ಪುಲುಗುಜ್ಜು ನಿವಾಸಿ 30 ವರ್ಷ ಪ್ರಾಯದ ಸುಬ್ರಹ್ಮಣ್ಯಂ ಅವರು ಎಟಿಎಂ ಮೇಲ್ವಿಚಾರಣೆಯ ಜವಾಬ್ದಾರಿ ಹೊಂದಿದ್ದರು.


ಆರೋಪಿತನು ದಿನಾಂಕ 06-02-2024 ರಿಂದ 16-12-2025 ರವರೆಗೆ ಎಟಿಎಂಗೆ ನಿಗದಿತ ಪ್ರಮಾಣದ ನಗದು ಜಮಾ ಮಾಡದೇ ಕಡಿಮೆ ಹಣ ಜಮಾ ಮಾಡಿ ಸುಮಾರು ₹70,86,000 ಮೊತ್ತವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಅಲ್ಲದೆ, ದಿನಾಂಕ 19-12-2025ರಂದು ಸೇಫ್ ಲಾಕರ್ ಪರಿಶೀಲನೆಯ ವೇಳೆ ₹55,000 ಮೌಲ್ಯದ 4.400 ಗ್ರಾಂ ಚಿನ್ನವೂ ವಂಚನೆಯಾಗಿರುವುದು ಪತ್ತೆಯಾಗಿದೆ. ಹಣದ ದುರುಪಯೋಗ ಪತ್ತೆಯಾಗುತ್ತಿದ್ದಂತೆ ಆರೋಪಿತನು ದಿನಾಂಕ 17-12-2025 ರಂದು ಯಾರಿಗೂ ತಿಳಿಸದೇ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಒಟ್ಟು ವಂಚನೆಯ ಮೊತ್ತ ₹71,41,000 ಆಗಿದೆ.

ಈ ಕುರಿತು ಬ್ಯಾಂಕ್ ಆಫ್ ಬರೋಡಾ ಪ್ರಾದೇಶಿಕ ವ್ಯವಸ್ಥಾಪಕರಾದ ಜೆಪ್ಪು, ಮಂಗಳೂರು ನಿವಾಸಿ 50 ವರ್ಷ ಪ್ರಾಯದ C.V.S. ಚಂದ್ರಶೇಖರ್ ಅವರು ದಿನಾಂಕ 23-12-2025 ರಂದು ನೀಡಿದ ದೂರಿನ ಮೇರೆಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 121/2025 ಅಡಿಯಲ್ಲಿ BNS-2023 ಕಲಂ 314, 316(5), 318(2) ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.




