ಹೊಸ ವರ್ಷಾಚರಣೆಗೆ ಮಾರಾಟಕ್ಕೆ ತಂದಿದ್ದ 21.45 ಕೆ.ಜಿ ಗಾಂಜಾ ವಶ – ಸುರತ್ಕಲ್ನಲ್ಲಿ ಇಬ್ಬರ ಬಂಧನ
ಮಂಗಳೂರು ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆಯ ವೇಳೆ ಮಾರಾಟ ಮಾಡುವ ಉದ್ದೇಶದಿಂದ ದಾಸ್ತಾನು ಮಾಡಿದ್ದ ಸುಮಾರು 21 ಕೆ.ಜಿ 450 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.


ಜನವರಿ 03ರಂದು ಶನಿವಾರ ಚೊಕ್ಕಬೆಟ್ಟು ಗ್ರಾಮದ ಪರಮೇಶ್ವರಿ ನಗರ, 2ನೇ ಕ್ರಾಸ್ನ ‘ಬೆನಕ’ ಎಂಬ ಮನೆಯ ಬಳಿ ಕಾರಿನಲ್ಲಿ ಗಾಂಜಾ ಸಂಗ್ರಹಿಸಿ ಮಾರಾಟ ಮಾಡಲು ಯತ್ನಿಸುತ್ತಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದರು. ಈ ವೇಳೆ 32 ವರ್ಷ ಪ್ರಾಯದ ಪ್ರದೀಪ್ ಪೂಜಾರಿ ಮತ್ತು 42 ವರ್ಷ ಪ್ರಾಯದ ವಸಂತ ಎಂಬ ಆರೋಪಿಗಳನ್ನು ಬಂಧಿಸಲಾಯಿತು.


ಆರೋಪಿಗಳ ವಶದಿಂದ ಅಂದಾಜು ಮೌಲ್ಯ ರೂಪಾಯಿ 10,72,500 ಇರುವ ಗಾಂಜಾ, 3 ಮೊಬೈಲ್ ಫೋನ್ಗಳು, ಗಾಂಜಾ ಸಾಗಣೆಗೆ ಬಳಸಿದ ಕೆಎ-04 ಎಂಡಿ-2532 ನಂಬರಿನ ಸ್ವಿಫ್ಟ್ ಕಾರು, 3 ಲಗೇಜ್ ಬ್ಯಾಗ್ಗಳು, ಗಾಂಜಾ ಸೇವನೆಗೆ ಬಳಸುವ ಸ್ಟ್ರಿಫ್ಸ್ ಹಾಗೂ ನಗದು ಹಣವನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಒಟ್ಟು ವಸ್ತುಗಳ ಮೌಲ್ಯ ಸುಮಾರು ರೂಪಾಯಿ 13,86,500 ಆಗಿದೆ.

ಆರೋಪಿಗಳು ದಿನಾಂಕ 29-12-2025 ರಂದು ಓರಿಸ್ಸಾದಿಂದ ಗಾಂಜಾವನ್ನು ಮಂಗಳೂರು ನಗರಕ್ಕೆ ತಂದಿದ್ದು, ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಇದ್ದ ಕಾರಣ ಮಾರಾಟ ಮಾಡಲು ಸಾಧ್ಯವಾಗದೇ ಕಾರಿನಲ್ಲೇ ಇಟ್ಟುಕೊಂಡಿದ್ದಾಗಿ ವಿಚಾರಣೆಯಲ್ಲಿ ತಿಳಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ. 01/2026 ಕಲಂ 8(C), 20(b)(ii)(C) ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಆರೋಪಿಗಳಲ್ಲಿ ಪ್ರದೀಪ್ ಪೂಜಾರಿ ವಿರುದ್ಧ ಹಿಂದಿನ ಹಲವು ಅಪರಾಧ ಪ್ರಕರಣಗಳು ದಾಖಲಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಪತ್ತೆ ಕಾರ್ಯದಲ್ಲಿ ಉತ್ತರ ಉಪ ವಿಭಾಗದ ಎಸಿಪಿ ಶ್ರೀಕಾಂತ ಕೆ. ಅವರ ಮಾರ್ಗದರ್ಶನದಲ್ಲಿ ಸುರತ್ಕಲ್ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.




