ಕ್ರೈಸ್ತರ ಮೇಲಿನ ದಾಳಿಗಳಿಗೆ ಖಂಡನೆ – ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ ನಲ್ಲಿ ಮೌನ ಪ್ರತಿಭಟನೆ
ಕ್ರಿಸ್ಮಸ್ ಹಬ್ಬದ ಆಚರಣೆಗಳ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಗಳನ್ನು ಖಂಡಿಸಿ, ಮಂಗಳೂರು ನಗರದ ಬೆಂದೂರು ಸಂತ ಸೆಬಾಸ್ಟಿಯನ್ ಚರ್ಚ್ ವತಿಯಿಂದ ಇಂದು ಜನವರಿ 3ರಂದು ಶನಿವಾರ ಸಂಜೆ 6 ಗಂಟೆಗೆ ಚರ್ಚ್ ಮುಂಭಾಗದಲ್ಲಿ ಶಾಂತಿಯುತ ಮೌನ ಪ್ರತಿಭಟನೆ ಆಯೋಜಿಸಲಾಯಿತು.






ಈ ಪ್ರತಿಭಟನೆಯಲ್ಲಿ ಬೆಂದೂರ್ ಚರ್ಚ್ ನ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ವಾಲ್ಟರ್ ಡಿಸೋಜ, ಸಹಾಯಕ ಧರ್ಮಗುರುಗಳಾದ ವಂದನೀಯ ಫಾದರ್ ವಿವೇಕ್ ಪಿಂಟೋ ಹಾಗೂ ವಂದನೀಯ ಫಾದರ್ ಓಜ್ಮೊಂಡ್ ರೋಷನ್ ಡಿಸೋಜ, ಪಾದುವಾ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಫಾದರ್ ಅರುಣ್ ಲೋಬೊ ಸೇರಿದಂತೆ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ದೀಪಕ್ ರಂಜನ್ ಡಿಸೋಜ, ಕಾರ್ಯದರ್ಶಿ ರೋಯ್ ಸ್ಟನ್ ಫರಾಯಸ್, ಆಯೋಗಗಳ ಸಂಯೋಜಕ ಲೋಯ್ ರೇಗೊ ಹಾಗೂ ಅನೇಕ ಗಣ್ಯರು ಭಾಗವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ವಂದನೀಯ ಫಾದರ್ ವಾಲ್ಟರ್ ಡಿಸೋಜ ಅವರು ಎಲ್ಲರನ್ನು ಸ್ವಾಗತಿಸಿ, ಮೌನ ಪ್ರತಿಭಟನೆಯ ಉದ್ದೇಶ ಮತ್ತು ಅದರ ಮಹತ್ವವನ್ನು ವಿವರಿಸಿದರು.




ಪ್ರತಿಭಟನೆಯಲ್ಲಿ ಭಾಗವಹಿಸಿದ ಭಕ್ತಾಧಿಗಳು ಮುಂಬತ್ತಿಗಳನ್ನು ಬೆಳಗಿಸಿ ಭಕ್ತಿಪೂರ್ವಕವಾಗಿ ಪ್ರಾರ್ಥನೆ ಸಲ್ಲಿಸಿ, ತಮ್ಮ ನೋವು, ಆಕ್ರೋಶ ಹಾಗೂ ಶಾಂತಿ–ನ್ಯಾಯಕ್ಕಾಗಿ ಇರುವ ಆಶಯವನ್ನು ವ್ಯಕ್ತಪಡಿಸಿದರು. ಮೌನ ಪ್ರತಿಭಟನೆಯಲ್ಲಿ ಚರ್ಚ್ ನ ಭಕ್ತಾಧಿಗಳು, ಧರ್ಮ ಭಗಿನಿಯರು ಮತ್ತು ವಿವಿಧ ಸಂಘಟನೆಗಳ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


ಈ ಮೌನ ಪ್ರತಿಭಟನೆ ಸಂಪೂರ್ಣ ಶಾಂತಿಯುತವಾಗಿ ನಡೆದು, ಕ್ರೈಸ್ತ ಸಮುದಾಯದ ಏಕತೆ, ಸೌಹಾರ್ದತೆ ಮತ್ತು ಶಾಂತಿಯ ಬಲವಾದ ಸಂದೇಶವನ್ನು ಸಮಾಜಕ್ಕೆ ನೀಡಿತು.




