July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಳ್ಳಾಲದ ಮದ್ರಸಾದ ಶೌಚಾಲಯಗಳ ದುರವಸ್ಥೆ – ಮಕ್ಕಳ ಆರೋಗ್ಯಕ್ಕೆ ಅಪಾಯದ ಎಚ್ಚರಿಕೆ

ಉಳ್ಳಾಲದ ಸಲ್ ಸಬಿಲ್ ಮಸೀದಿ (ಸಲ್ಫಿ ಮಸೀದಿ) ಆವರಣದಲ್ಲಿರುವ ಮದ್ರಸಾದ ಶೌಚಾಲಯಗಳ ದುರವಸ್ಥೆ ಬಗ್ಗೆ ಸಾರ್ವಜನಿಕ ಹಿತದೃಷ್ಟಿಯಿಂದ ಹಿರಿಯ ವಕೀಲರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಸುಮಾರು 15 ದಿನಗಳ ಹಿಂದೆ ಮಸೀದಿಗೆ ಭೇಟಿ ನೀಡಿದ ವೇಳೆ, ಒಂದು ಎಕರೆ ಭೂಮಿಯಲ್ಲಿ ನಿರ್ಮಿಸಲಾದ ಭವ್ಯ ಮಸೀದಿ ಹಾಗೂ ಪಕ್ಕದಲ್ಲಿರುವ ಎರಡು ಮಹಡಿಯ ಮದ್ರಸ ಕಟ್ಟಡವನ್ನು ಕಂಡು ಸಂತೋಷಗೊಂಡಿದ್ದಾಗಿ ಅವರು ತಿಳಿಸಿದ್ದಾರೆ. ನಾಲ್ಕರಿಂದ ಹದಿನಾಲ್ಕು ವರ್ಷದೊಳಗಿನ ಬಾಲಕ–ಬಾಲಕಿಯರು ಸಮವಸ್ತ್ರ ಧರಿಸಿ ವಿದ್ಯಾಭ್ಯಾಸಕ್ಕೆ ಬರುತ್ತಿರುವುದು ಆಶಾದಾಯಕ ಸಂಗತಿಯಾಗಿತ್ತು ಎಂಬುದನ್ನೂ ಅವರು ಉಲ್ಲೇಖಿಸಿದ್ದಾರೆ.

ಆದರೆ ಮಸೀದಿಯ ಶೌಚಾಲಯ ಕಾರ್ಯನಿರ್ವಹಿಸದ ಹಿನ್ನೆಲೆಯಲ್ಲಿ ಮದ್ರಸಾದ ಶೌಚಾಲಯವನ್ನು ಬಳಸಲು ಹೋಗಿದಾಗ, ಅಲ್ಲಿನ ಸ್ಥಿತಿ ಆತಂಕಕಾರಿ ಆಗಿತ್ತು. ಕೆಲವು ಶೌಚಾಲಯಗಳಲ್ಲಿ ನೀರು ಹಾಗೂ ಮೂತ್ರ ಮಿಶ್ರಿತ ಕೊಳಚೆ ನೀರು ಹರಿದು ಹೋಗುವ ವ್ಯವಸ್ಥೆ ಇಲ್ಲದೆ ಶೇಖರಗೊಂಡಿದ್ದು, ದುರ್ವಾಸನೆ ತುಂಬಿದ ಪರಿಸರದಲ್ಲಿ ಚಿಕ್ಕ ಮಕ್ಕಳು ಮೂತ್ರವಿಸರ್ಜನೆ ಮಾಡುತ್ತಿರುವುದು ಕಂಡುಬಂದಿದೆ. ಇದು ಮಕ್ಕಳ ಆರೋಗ್ಯಕ್ಕೆ ಗಂಭೀರ ಅಪಾಯ ಉಂಟುಮಾಡುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಈ ಕುರಿತು 15 ದಿನಗಳ ಬಳಿಕ ಮತ್ತೆ ಮದ್ರಸಕ್ಕೆ ಭೇಟಿ ನೀಡಿದಾಗಲೂ ಯಾವುದೇ ಸುಧಾರಣೆ ಕಂಡುಬರಲಿಲ್ಲ. ಮಸೀದಿಯ ಶೌಚಾಲಯದ ಕಾಮಗಾರಿ ಇನ್ನೂ ಪ್ರಾರಂಭವಾಗದೇ ಇದ್ದು, ಮದ್ರಸಾದ ಶೌಚಾಲಯಗಳ ಸ್ಥಿತಿಯೂ ಅದೇ ರೀತಿ ಮುಂದುವರೆದಿದೆ ಎಂದು ಅವರು ತಿಳಿಸಿದ್ದಾರೆ. ಈ ಎಲ್ಲವನ್ನು ವಿಡಿಯೋ ದಾಖಲೆಯ ಮೂಲಕ ಸಂಗ್ರಹಿಸಿರುವುದಾಗಿ ಹೇಳಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯವರನ್ನು ಸಂಪರ್ಕಿಸಲು ಯತ್ನಿಸಿದರೂ, ಅಧ್ಯಕ್ಷರ ಮೊಬೈಲ್ ಸಂಖ್ಯೆಯನ್ನು ನೀಡಲು ನಿರಾಕರಿಸಲಾಯಿತು. ಬಳಿಕ ಸಂಸ್ಥೆಯ ಮುಖ್ಯ ಕಚೇರಿಗೆ ತೆರಳಿ ವಿಷಯವನ್ನು ವಿವರಿಸಿದರೂ ಸ್ಪಷ್ಟ ಸ್ಪಂದನೆ ಸಿಗಲಿಲ್ಲ ಎಂಬ ಅಸಮಾಧಾನವನ್ನು ಅವರು ವ್ಯಕ್ತಪಡಿಸಿದ್ದಾರೆ. ಇದರಿಂದ ಸಂಸ್ಥೆಯ ಆಡಳಿತ ಕುರಿತು ಅನುಮಾನಗಳು ಮೂಡುತ್ತಿವೆ ಎಂದು ಹೇಳಿದ್ದಾರೆ.

ಸುಮಾರು 40 ವರ್ಷಗಳ ಅನುಭವ ಹೊಂದಿರುವ 72 ವರ್ಷದ ವಕೀಲರಾಗಿರುವ ಎಸ್.ಎಸ್. ಖಾಜಿ ಅವರು, ಮದ್ರಸಾದ ವಿದ್ಯಾರ್ಥಿಗಳ ಆರೋಗ್ಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಈ ವಿಷಯವನ್ನು ಬೆಳಕಿಗೆ ತರುತ್ತಿದ್ದು, ಅಗತ್ಯವಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ.

(ಸಾರ್ವಜನಿಕ ಹಿತದೃಷ್ಟಿಯಿಂದ ಪ್ರಕಟಣೆ)

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page