ಜನವರಿ 11ರಂದು ಮಂಗಳೂರಿನಲ್ಲಿ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಮಂಗಳೋತ್ಸವ – ಸಹಸ್ರಾರು ಭಕ್ತರ ಪಾಲ್ಗೊಳ್ಳುವ ನಿರೀಕ್ಷೆ
ಜಗದ್ಗುರು ಪರಮಪೂಜ್ಯ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮಶತಾಬ್ದಿ ಮಂಗಳೋತ್ಸವವನ್ನು ಜನವರಿ 11ರಂದು ಭಾನುವಾರ ಮಂಗಳೂರು ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಕಾಶೀಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ವಿಜೃಂಭಣೆಯಿಂದ ಆಚರಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಲಾಯಿತು.


ಕಾಶೀಮಠದ 20ನೇ ಪೀಠಾಧಿಪತಿಗಳಾಗಿದ್ದ ಶ್ರೀಮತ್ ಸುಧೀಂದ್ರ ತೀರ್ಥ ಸ್ವಾಮೀಜಿಯವರು 70 ವರ್ಷಗಳ ಕಾಲ ಸಮಾಜದ ಹಾಗೂ ಸಮಸ್ತ ಸಮುದಾಯಗಳ ಏಳಿಗೆಗಾಗಿ ತಪೋಶಕ್ತಿಯನ್ನು ಸಮರ್ಪಿಸಿದ ಮಹಾನಿಯೋಗಿ. ಅವರ ಜನ್ಮಶತಾಬ್ದಿ ಅಂಗವಾಗಿ ಕಳೆದ ಒಂದೂವರೆ ವರ್ಷಗಳಿಂದ ಘರ್-ಘರ್ ಭಜನೆ, ವ್ಯಾಸೋಪಾಸನೆ, ಗುರುಗುಣಗಾನ, ವಿಷ್ಣು ಸಹಸ್ರನಾಮ ಪಠಣ, ದಂಪತಿ–ಕುಮಾರಿ–ವಟು ಪೂಜೆಗಳು, ಭಜನಾ ಮಹೋತ್ಸವಗಳು ದೇಶ-ವಿದೇಶಗಳಲ್ಲಿ ನಡೆದಿವೆ. ಸುಮಾರು 10 ಸಾವಿರಕ್ಕೂ ಅಧಿಕ ಘರ್-ಘರ್ ಭಜನೆಗಳು ಹಾಗೂ ಒಂದು ಲಕ್ಷಕ್ಕೂ ಅಧಿಕ ವಿಷ್ಣು ಸಹಸ್ರನಾಮ ಪಠಣಗಳು ನಡೆದಿವೆ.

ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ 65 ಸಾವಿರಕ್ಕೂ ಹೆಚ್ಚು ಫಲ ನೀಡುವ ಗಿಡಗಳನ್ನು ವಿವಿಧ ದೇವಾಲಯಗಳು ಮತ್ತು ಸಂಘ ಸಂಸ್ಥೆಗಳ ಮೂಲಕ ವಿತರಿಸಲಾಗಿದೆ. ಜೊತೆಗೆ ಶ್ರೀಗಳ ದಿವ್ಯ ಸ್ವರ್ಣ ಪಾದುಕೆಯ ದಿಗ್ವಿಜಯ ಯಾತ್ರೆ ಬದ್ರಿಯಿಂದ ರಾಮೇಶ್ವರ–ತಿರುವನಂತಪುರದವರೆಗೆ ಸಂಚರಿಸಿ ಮಂಗಳೂರನ್ನು ತಲುಪಿದೆ. ಜನವರಿ 11ರಂದು ಮಧ್ಯಾಹ್ನ 3.30ಕ್ಕೆ ಕೊಂಚಾಡಿ ಕಾಶೀಮಠದಿಂದ ಭಜನಾ ಸಂಕೀರ್ತನೆ, ವ್ಯಾಸಧ್ವಜ ಹಾಗೂ ಪಾದುಕಾ ದಿಗ್ವಿಜಯ ಪಾದಯಾತ್ರೆ ಆರಂಭವಾಗಲಿದ್ದು, ನಗರದ ಪ್ರಮುಖ ರಸ್ತೆಗಳನ್ನು ಹಾದು ಶ್ರೀ ವೆಂಕಟರಮಣ ದೇವಸ್ಥಾನವನ್ನು ತಲುಪಲಿದೆ. ದಾರಿಯುದ್ದಕ್ಕೂ ಭಜನಾ ಮಂಡಳಿಗಳು, ಟ್ಯಾಬ್ಲೋಗಳು, ವೇದಘೋಷ, ವಾದ್ಯವೃಂದಗಳು ಪಾದಯಾತ್ರೆಯ ಶೋಭೆ ಹೆಚ್ಚಿಸಲಿವೆ. ರಾತ್ರಿ 8.30ರಿಂದ ಮಂಗಳೋತ್ಸವದ ಸಭಾ ಕಾರ್ಯಕ್ರಮ ನಡೆಯಲಿದ್ದು, ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಚನ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜರುಗಲಿದೆ.

ಭಕ್ತರ ಸೌಲಭ್ಯಕ್ಕಾಗಿ ಪಾರ್ಕಿಂಗ್, ಪಾನೀಯ, ಫಲಾಹಾರ ಹಾಗೂ ರಾತ್ರಿ ಭೋಜನ ಪ್ರಸಾದದ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಸಿಎ ಜಗನ್ನಾಥ್ ಕಾಮತ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.




