January 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಸೂರಿಕುಮೇರುವಿನ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಬ್ರಷ್ಟಾಚಾರದ ಆರೋಪ ಸಂಪೂರ್ಣ ಸುಳ್ಳು – ಹಿಂದಿನ ಆಡಳಿತ ಮಂಡಳಿಯ ಖಡಕ್ ಸ್ಪಷ್ಟನೆ

ಬ್ರಷ್ಟಾಚಾರ ನಡೆದಿದ್ದರೆ ಧರ್ಮಾಧ್ಯಕ್ಷರ ಮೌನ ಹೇಗೆ ಸಾಧ್ಯ? – ಅಪಪ್ರಚಾರಕರಿಗೆ ಭಕ್ತಾಧಿಗಳ ನೇರ ಸವಾಲು

ನಿಷ್ಟಾವಂತ ಸೇವೆ ನೀಡಿದ ಹಿಂದಿನ ಧರ್ಮಗುರುಗಳ ಹೆಸರುಗಳಿಗೆ ಮಸಿ ಬಳಿಸಲು ಷಡ್ಯಂತ್ರ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಸೂರಿಕುಮೇರುವಿನಲ್ಲಿರುವ ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಕಳೆದ 14 ವರ್ಷಗಳಲ್ಲಿ (2013 ಮೇ ತಿಂಗಳಿನಿಂದ – 2025 ಮೇ ತಿಂಗಳ ತನಕ) ಯಾವುದೇ ರೀತಿಯ ಅವ್ಯವಹಾರ ಅಥವಾ ಬ್ರಷ್ಟಾಚಾರ ನಡೆದಿಲ್ಲ ಎಂದು ಚರ್ಚ್‌ನ ಹಿಂದಿನ ಆಡಳಿತ ಮಂಡಳಿ, ಆರ್ಥಿಕ ಸಮಿತಿ ಹಾಗೂ ನೂರಾರು ಭಕ್ತಾಧಿಗಳು ಒಂದೇ ಧ್ವನಿಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಕ್ರಿಮಿನಲ್ ಹಿನ್ನಲೆಯುಳ್ಳ ನೂತನ ಪಾಲನಾ ಸಮಿತಿಯ ಕೆಲವು ಸದಸ್ಯರು ನಡೆಸುತ್ತಿರುವ ಸುಳ್ಳು ಆರೋಪಗಳು ಸಂಪೂರ್ಣವಾಗಿ ಆಧಾರರಹಿತ, ದುರುದ್ದೇಶಪೂರಿತ ಹಾಗೂ ಮಾನಹಾನಿ ಮಾಡುವ ಉದ್ದೇಶದಿಂದ ಕೂಡಿವೆ ಎಂದು ಅವರು ತೀವ್ರವಾಗಿ ಖಂಡಿಸಿದ್ದಾರೆ.

2013 ಮೇ ತಿಂಗಳಿನಿಂದ 2025 ಮೇ ತಿಂಗಳ ತನಕ ಕಳೆದ 14 ವರ್ಷಗಳ ಅವಧಿಯಲ್ಲಿ ವಂದನೀಯ ಫಾದರ್ ನವೀನ್ ಪಿಂಟೊ (ಪ್ರಸ್ತುತ ಮಂಗಳೂರು ಧರ್ಮಕ್ಷೇತ್ರದ Judicial Vicar), ವಂದನೀಯ ಫಾದರ್ ಮೆಲ್ವಿನ್ ನೊರೊನ್ಹಾ (ಪ್ರಸ್ತುತ ಮೂಡುಬಿದಿರೆಯ ಅಲಂಗಾರ್ ಚರ್ಚ್ ಪ್ರಧಾನ ಧರ್ಮಗುರು), ವಂದನೀಯ ಫಾದರ್ ಗ್ರೆಗರಿ ಪಿರೇರಾ (ಪ್ರಸ್ತುತ ಮರಿಯಾಶ್ರಮ್ ತಲಪಾಡಿ ಚರ್ಚ್ ಧರ್ಮಗುರು) ಹಾಗೂ ವಂದನೀಯ ಫಾದರ್ ನವೀನ್ ಪ್ರಕಾಶ್ ಡಿಸೋಜ (ಪ್ರಸ್ತುತ ವಿಜಯಡ್ಕ ಚರ್ಚ್ ಧರ್ಮಗುರು) ಎಂಬ ನಾಲ್ವರು ನಿಷ್ಠಾವಂತ, ಪ್ರಾಮಾಣಿಕ ಹಾಗೂ ಶಿಸ್ತುಬದ್ಧ ಧರ್ಮಗುರುಗಳ ಅವಿರತ ಸೇವೆಯಿಂದ ಸೈಂಟ್ ಜೋಸೆಫ್ ಚರ್ಚ್ ಅಭಿವೃದ್ಧಿಯ ಶ್ರೇಷ್ಠ ಹಾದಿಯಲ್ಲಿ ಸಾಗಿರುವುದು ಎಲ್ಲರಿಗೂ ತಿಳಿದ ಸತ್ಯವಾಗಿದೆ.

2013 ರ ಹಿಂದಿನ ಚಿತ್ರಗಳು

ಈ ಅವಧಿಯಲ್ಲಿ ಚರ್ಚ್ ಪಾಲನಾ ಸಮಿತಿ, ಆರ್ಥಿಕ ಸಮಿತಿ ಹಾಗೂ ಭಕ್ತಾಧಿಗಳ ಸಮನ್ವಯ ಮತ್ತು ಪಾರದರ್ಶಕ ಸಹಕಾರದಿಂದ ಚರ್ಚ್‌ನಲ್ಲಿ ಶಾಶ್ವತ ಅಭಿವೃದ್ಧಿಯ ಅನೇಕ ಮಹತ್ವದ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಆಕರ್ಷಕ ಪ್ರವೇಶ ದ್ವಾರ, ಕಾಂಕ್ರೀಟ್ ರಸ್ತೆ, ರಸ್ತೆಯ ಇಕ್ಕೆಲಗಳಲ್ಲಿ ಇಂಟರ್ ಲಾಕ್ಸ್, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸೊಲಾರ್ ಲೈಟ್ಸ್, ಮಾತೆ ಮರಿಯಮ್ಮರವರ ಗ್ರೊಟ್ಟೊ, 14 ಶಿಲುಬೆಯ ಹಾದಿ, ಸ್ಮಶಾನ ನವೀಕರಣ, ಚರ್ಚ್ ಆವರಣದ ಬಲಿಷ್ಠ ಗೋಡೆ, ವಾಟರ್ ಟ್ಯಾಂಕ್, ಕತ್ತಲಾಗುತ್ತಿರುವ ಸಂದರ್ಭದಲ್ಲಿ ಚರ್ಚ್ ಪರಿಸರಕ್ಕೆ ಬೆಳಗಾಗುವಂತೆ ಹೈಮಾಸ್ಟ್ ಲೈಟ್, ಭವ್ಯ ರಂಗಮಂಟಪ, ಸುಸಜ್ಜಿತ ಶೌಚಾಲಯಗಳು, ಚರ್ಚ್ ಗೆ ಸಂಬಂಧಪಟ್ಟ ಎಲ್ಲಾ ದಸ್ತವೇಜುಗಳನ್ನು ಸರಿಪಡಿಸುವುದು, ಚರ್ಚ್ ವ್ಯಾಪ್ತಿಗೆ ಸಂಬಂಧಪಟ್ಟ ನಿರಾಶ್ರಿತ ಎರಡು ಕುಟುಂಬಗಳಿಗೆ ನಿವೇಶನ ಹಾಗೂ ಮನೆಗಳು  ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಗಳು ಕೇವಲ ದಾಖಲೆಗಳಲ್ಲಿ ಅಲ್ಲ, ಕಣ್ಣಿಗೆ ಕಾಣುವ ನೈಜ ಸಾಕ್ಷಿಗಳಾಗಿವೆ.

ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸ್ವತಃ ಪರಿಶೀಲಿಸಿ, ತಮ್ಮ ಪವಿತ್ರ ಹಸ್ತದಿಂದ ಆಶೀರ್ವದಿಸಿದ್ದು, ಈ ಸಂದರ್ಭದಲ್ಲಿ ಧರ್ಮಗುರುಗಳು, ಚರ್ಚ್ ಆಡಳಿತ ಮಂಡಳಿ ಹಾಗೂ ಭಕ್ತಾಧಿಗಳಿಗೆ ಸಾರ್ವಜನಿಕವಾಗಿ ಕೃತಜ್ಞತೆ ಸಲ್ಲಿಸಿದ್ದರು. ಇಂತಹ ಸಂದರ್ಭಗಳೇ ಚರ್ಚ್‌ನಲ್ಲಿ ನಡೆದಿರುವ ಪಾರದರ್ಶಕ, ನಿಷ್ಠಾವಂತ ಆಡಳಿತಕ್ಕೆ ಅಚಲ ಸಾಕ್ಷಿಯಾಗಿದೆ ಎಂದು ಭಕ್ತಾಧಿಗಳು ಹೇಳಿದ್ದಾರೆ.

ಇಂತಹ ಸ್ಪಷ್ಟ ದಾಖಲೆಗಳು ಮತ್ತು ಸಾಕ್ಷಿಗಳು ಇರುವಾಗ, ಅಭಿವೃದ್ಧಿಯನ್ನು ಕಣ್ಣುಗಳಲ್ಲಿ ನೋಡಿ ಸಹಿಸದ ಕ್ರಿಮಿನಲ್ ಹಿನ್ನೆಲೆಯುಳ್ಳ ಕೆಲ ನೂತನ ಪಾಲನಾ ಸಮಿತಿಯ ಸದಸ್ಯರು ಸೇರಿಕೊಂಡು, ಹಿಂದೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಧರ್ಮಗುರುಗಳು ಹಾಗೂ ಪಾಲನಾ ಸಮಿತಿಯ ಗೌರವಾನ್ವಿತ ಮುಖಂಡರ ಹೆಸರು ಕೆಡಿಸುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಅಪಪ್ರಚಾರ ನಡೆಸುತ್ತಿರುವುದು ಅತ್ಯಂತ ಖಂಡನೀಯ ಎಂದು ಭಕ್ತಾಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಭಕ್ತಾಧಿಗಳು ಅತ್ಯಂತ ತೀಕ್ಷ್ಣವಾದ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ:ನಿಜವಾಗಿಯೂ ಹಿಂದಿನ ಆಡಳಿತ ಅವಧಿಯಲ್ಲಿ ಬ್ರಷ್ಟಾಚಾರ ಅಥವಾ ಅವ್ಯವಹಾರ ನಡೆದಿದ್ದರೆ, ಶಿಸ್ತು ಮತ್ತು ಪಾರದರ್ಶಕತೆಗೆ ಹೆಸರಾದ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಯಾಕೆ ಮೌನ ವಹಿಸುತ್ತಿದ್ದರು? ಧರ್ಮಕ್ಷೇತ್ರ ಇಂತಹ ಗಂಭೀರ ವಿಷಯವನ್ನು ಇಷ್ಟು ವರ್ಷಗಳ ಕಾಲ ಕಡೆಗಣಿಸಿತ್ತೇ?”

ಈ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯ ಅಪಪ್ರಚಾರಕರಿಗೆ ಇದೆಯೇ ಎಂದು ಹಿಂದಿನ ಪಾಲನಾ ಸಮಿತಿಯ ಮಾಜಿ ಉಪಾಧ್ಯಕ್ಷರಾದ ಸ್ಟೀವನ್ ಪ್ರಕಾಶ್ ಮಾರ್ಟಿಸ್ ಮತ್ತು ಮಾಜಿ ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್ ನೇರವಾಗಿ ಸವಾಲು ಹಾಕಿದ್ದಾರೆ.

ಸುಳ್ಳು ಆರೋಪಗಳ ಮೂಲಕ ಚರ್ಚ್‌ನಲ್ಲಿ ಶಾಂತಿ ಭಂಗಗೊಳಿಸುವ, ಭಕ್ತಾಧಿಗಳ ನಡುವೆ ವಿಭಜನೆ ಸೃಷ್ಟಿಸುವ ಹಾಗೂ ನಿಷ್ಠಾವಂತ ಧರ್ಮಗುರುಗಳ ಗೌರವಕ್ಕೆ ಧಕ್ಕೆ ತರುವ ಈ ಕೀಳು ಪ್ರಯತ್ನವನ್ನು ಭಕ್ತಾಧಿಗಳು ತೀವ್ರವಾಗಿ ಖಂಡಿಸಿದ್ದಾರೆ. ಅಪಪ್ರಚಾರ ಮಾಡುವವರಿಗೆ ಚರ್ಚ್ ಅಭಿವೃದ್ಧಿ ಮಾಡುವ ಸಾಮರ್ಥ್ಯವಿಲ್ಲ; ಚರ್ಚ್ ಅಂಗಳದ ಒಂದು ಸೆಗಣಿ ತೆಗೆದು ಸ್ವಚ್ಛಗೊಳಿಸುವ ಶ್ರಮವೂ ಇವರಲ್ಲಿ ಕಾಣುವುದಿಲ್ಲ ಎಂದು ಭಕ್ತಾಧಿಗಳು ಕಟುವಾಗಿ ಹೇಳಿದ್ದಾರೆ.

ಅದೇ ವೇಳೆ, ಸುಳ್ಳು ಅಪಪ್ರಚಾರವನ್ನು ತಕ್ಷಣ ನಿಲ್ಲಿಸದಿದ್ದಲ್ಲಿ ಅಪಪ್ರಚಾರ ಮಾಡಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದರೊಂದಿಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹಿಂದಿನ ಪಾಲನಾ ಸಮಿತಿಯ ಸದಸ್ಯರು ಮತ್ತು ಭಕ್ತಾಧಿಗಳು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ.

ಚರ್ಚ್‌ನ ಗೌರವ, ಏಕತೆ ಮತ್ತು ಧಾರ್ಮಿಕ ಮೌಲ್ಯಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಸತ್ಯವನ್ನು ಜನರ ಮುಂದೆ ತರುವ ಈ ವರದಿ, ಸುಳ್ಳು ಅಪಪ್ರಚಾರ ನಡೆಸುತ್ತಿರುವವರಿಗೆ ನಾಚಿಕೆಪಡುವಂತೆ ಮಾಡುವ ಸ್ಪಷ್ಟ, ದೃಢ ಮತ್ತು ಅಂತಿಮ ಉತ್ತರವಾಗಿದೆ ಎಂದು ಭಕ್ತಾಧಿಗಳು ಅಭಿಪ್ರಾಯಪಟ್ಟಿದ್ದಾರೆ.

 

 

 

 

You may also like

News

ತುಳುಕೂಟ ಥೈಲ್ಯಾಂಡ್ ಸಹಕಾರದಿಂದ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರ ಸಂಪೂರ್ಣ ಪುನರ್‌ನವೀಕರಣ – ಹಸ್ತಾಂತರ ಹಾಗೂ ಸೇವಾ ಕಾರ್ಯಕ್ರಮಗಳು ಯಶಸ್ವಿ

ಅಧ್ಯಕ್ಷ ವಿನಯ್ ರೈ ಅವರ ಕಾರ್ಯ ವೈಖರಿಗೆ ವ್ಯಾಪಕ ಮೆಚ್ಚುಗೆ ಬಟ್ಟಾರಬೆಟ್ಟು–ಅಳಪೆ–ಪಡೀಲ್‌ನ ಗ್ರೀನ್‌ವ್ಯೂ ಅಂಗನವಾಡಿ ಕೇಂದ್ರವು ತುಳುಕೂಟ ಥೈಲ್ಯಾಂಡ್‌ನ ಅಮೂಲ್ಯ ಸಹಕಾರದಿಂದ ಸಂಪೂರ್ಣವಾಗಿ ಪುನರ್‌ನವೀಕರಣಗೊಂಡಿದ್ದು, ಇದರ ಹಸ್ತಾಂತರ
News

ಶಾಸಕಿ ಭಾಗೀರಥಿ ಮುರುಳ್ಯರ ಭಾವಚಿತ್ರ ಅವಹೇಳನ – ಬಿಜೆಪಿ ದಕ್ಷಿಣ ಕನ್ನಡದಿಂದ ಮಿನಿ ವಿಧಾನಸೌಧ ಎದುರು ಪ್ರತಿಭಟನೆ

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಭಾವಚಿತ್ರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವುದನ್ನು ಖಂಡಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ ನಗರದ ಮಿನಿ ವಿಧಾನಸೌಧದ

You cannot copy content of this page