ಮಂಗಳೂರಿನಲ್ಲಿ 9ನೇ ಅಂತರ್ರಾಷ್ಟ್ರೀಯ ಗಾಳಿಪಟ ಉತ್ಸವ – ಜನವರಿ 17–18 ರಂದು ಬ್ಲೂ ಬೇ ಬೀಚ್ನಲ್ಲಿ ವೈಭವ
ಕರಾವಳಿ ಉತ್ಸವದ ಅಂಗವಾಗಿ ದೇಶದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ‘ಟೀಮ್ ಮಂಗಳೂರು’ ಹವ್ಯಾಸಿ ಗಾಳಿಪಟ ತಂಡವು ಮಂಗಳೂರಿನ ತಣ್ಣೀರುಬಾವಿಯ ನವೀಕರಣಗೊಂಡ ಬ್ಲೂ ಬೇ ಬೀಚ್ನಲ್ಲಿ 9ನೇ ಅಂತರ್ರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಆಯೋಜಿಸುತ್ತಿದೆ. ಓಎನ್ಜಿಸಿ–ಎಂಆರ್ಪಿಎಲ್ ಪ್ರಾಯೋಜಕತ್ವದಲ್ಲಿ ನಡೆಯುವ ಈ ಉತ್ಸವ ಜನವರಿ 17 ಮತ್ತು 18ರಂದು ಜರುಗಲಿದೆ.

ಉತ್ಸವದ ಪೂರ್ವಭಾವಿ ಕಾರ್ಯಕ್ರಮವಾಗಿ ಜನವರಿ 10ರಂದು ಶನಿವಾರ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಣ್ಣಬಣ್ಣದ ಗಾಳಿಪಟವನ್ನು ಬಾನಿಗೆ ಎತ್ತಿ ಹಿಡಿದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವರಾದ ಎಚ್.ಕೆ. ಪಾಟೀಲ್, ವಿಧಾನಸಭಾಧ್ಯಕ್ಷ ಸನ್ಮಾನ್ಯ ಯು.ಟಿ. ಖಾದರ್, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್, ಜಿಲ್ಲಾಧಿಕಾರಿಯವರಾದ ದರ್ಶನ್ ಎಚ್.ವಿ., MLC ಐವನ್ ಡಿಸೋಜ, ಕಾಪು ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.



ಈ ಬಾರಿ ಉತ್ಸವದಲ್ಲಿ 14 ಅಂತರ್ರಾಷ್ಟ್ರೀಯ ಗಾಳಿಪಟ ತಂಡಗಳು ಹಾಗೂ 8 ರಾಷ್ಟ್ರೀಯ ತಂಡಗಳು ಭಾಗವಹಿಸಲಿದ್ದು, ವಿವಿಧ ದೇಶಗಳ ವೈಶಿಷ್ಟ್ಯಮಯ ಗಾಳಿಪಟ ಪ್ರದರ್ಶನಗಳು ಪ್ರೇಕ್ಷಕರನ್ನು ಆಕರ್ಷಿಸಲಿವೆ. ದೇಶೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವುದರ ಜೊತೆಗೆ ಅಂತರ್ರಾಷ್ಟ್ರೀಯ ಸ್ನೇಹಭಾವವನ್ನು ಬೆಸೆಯುವ ಉದ್ದೇಶದೊಂದಿಗೆ ಸಾರ್ವಜನಿಕರಿಗೆ ಭರಪೂರ ಮನರಂಜನೆ ನೀಡಲು ಈ ಗಾಳಿಪಟ ಉತ್ಸವ ಸಜ್ಜಾಗಿದೆ.




