July 10, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರು ಧರ್ಮಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಸಂತ ಅಂತೋನಿಯವರ ಭಕ್ತಿಗೀತೆಗಳಿಗೆ ‘ಗಾ ತು ಜಿಬೆ’ ಬೃಹತ್ ಕೊಂಕಣಿ ಸಮೂಹ ಗಾಯನ ಸ್ಪರ್ಧೆ

ಜನವರಿ 18ರಂದು ನಡೆಯಲಿರುವ ಬೃಹತ್ ಐತಿಹಾಸಿಕ ಸ್ಪರ್ಧೆ

ಮಂಗಳೂರು ಧರ್ಮಕ್ಷೇತ್ರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ, ಜೆಪ್ಪು ಸಂತ ಅಂತೋನಿ ಡಿವೋಷನ್ ಟ್ರಸ್ಟ್ ವತಿಯಿಂದ ಸಂತ ಅಂತೋನಿಯವರ ಭಕ್ತಿಗೀತೆಗಳಿಗೆ ಮಾತ್ರ ಮೀಸಲಾದ ‘ಗಾ ತು ಜಿಬೆ’ (ಹಾಡು ಓ ನಾಲಗೆಯೇ) ಎಂಬ ಧರ್ಮಕ್ಷೇತ್ರ ಮಟ್ಟದ ಬೃಹತ್ ಕೊಂಕಣಿ ಸಮೂಹ ಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಐತಿಹಾಸಿಕ ಸ್ಪರ್ಧೆಯು 2026ರ ಜನವರಿ 18ರಂದು ಭಾನುವಾರ ಜೆಪ್ಪು ಸಂತ ಅಂತೋನಿ ಆಶ್ರಮದಲ್ಲಿ ನಡೆಯಲಿದೆ.

ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಪದುವದ ಸಂತ ಅಂತೋನಿಯವರ ಪವಿತ್ರ ಅವಶೇಷದ ಹಬ್ಬದ (Feast of the Relic) ಆಧ್ಯಾತ್ಮಿಕ ತಯಾರಿಯ ಅಂಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಂತ ಅಂತೋನಿಯವರ ಪುರಾತನ ಸಾಂಪ್ರದಾಯಿಕ ಭಕ್ತಿಗೀತೆಗಳನ್ನು ಪುನರುಜ್ಜೀವನಗೊಳಿಸುವುದು ಹಾಗೂ ಹೊಸ ರಾಗ ಸಂಯೋಜನೆಗಳನ್ನು ಪ್ರೋತ್ಸಾಹಿಸುವುದು ಈ ವಿಶಿಷ್ಟ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ.

ಮಂಗಳೂರು ಧರ್ಮಕ್ಷೇತ್ರದ ವಿವಿಧ ಚರ್ಚ್ ಗಳು, ಧಾರ್ಮಿಕ ಸಂಸ್ಥೆಗಳು ಹಾಗೂ ಶಿಕ್ಷಣ ಸಂಸ್ಥೆಗಳ ಗಾಯನ ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಸಾಂಪ್ರದಾಯಿಕ ಹಾಗೂ ಸ್ವರಚಿತ ಭಕ್ತಿಗೀತೆಗಳ ಸುಂದರ ಸಂಗಮಕ್ಕೆ ಪ್ರೇಕ್ಷಕರು ಸಾಕ್ಷಿಯಾಗಲಿದ್ದಾರೆ. ಉತ್ತಮ ಗುಣಮಟ್ಟದ ಸಮೂಹ ಗಾಯನವು ಈ ಪವಿತ್ರ ಸಂಗೀತೋತ್ಸವದ ವಿಶೇಷ ಆಕರ್ಷಣೆಯಾಗಲಿದೆ.

ಸ್ಪರ್ಧೆಯು ಅಪರಾಹ್ನ 3:15ಕ್ಕೆ ಆರಂಭವಾಗಲಿದ್ದು, ಸಂಜೆ 6:45ಕ್ಕೆ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣೆ ಜರುಗಲಿದೆ. ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಿದ್ದಾರೆ.

ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದ್ದು, ಪ್ರಥಮ ಬಹುಮಾನವಾಗಿ ರೂಪಾಯಿ 25,000, ದ್ವಿತೀಯ ಬಹುಮಾನ ರೂಪಾಯಿ 20,000, ತೃತೀಯ ಬಹುಮಾನ ರೂಪಾಯಿ 15,000 ಹಾಗೂ 10 ಸಮಾಧಾನಕರ ಬಹುಮಾನಗಳನ್ನು ನೀಡಲಾಗುವುದು.

ಸ್ಪರ್ಧಾರ್ಥಿಗಳಿಗೆ ವೃತ್ತಿಪರ ಹಾಗೂ ಆಧ್ಯಾತ್ಮಿಕ ವಾತಾವರಣವನ್ನು ಒದಗಿಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಆಶ್ರಮದ ಆಡಳಿತಾಧಿಕಾರಿ ಹಾಗೂ ಕಾರ್ಯಕ್ರಮ ಸಂಯೋಜಕರಾದ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್ ತಿಳಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಜೆಪ್ಪು ಸಂತ ಅಂತೋನಿ ಆಶ್ರಮದ ನಿರ್ದೇಶಕರಾದ ವಂದನೀಯ ಫಾದರ್ ಜೆ. ಬಿ. ಕ್ರಾಸ್ತಾ, “ಇದು ಕೇವಲ ಒಂದು ಸ್ಪರ್ಧೆಯಲ್ಲ; ಪವಾಡ ಪುರುಷ ಸಂತ ಅಂತೋನಿಯವರಿಗೆ ಸಲ್ಲಿಸುವ ಸಂಗೀತ ನಮನ. ಕೊಂಕಣಿ ಸಂಗೀತ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು” ಎಂದು ಆಹ್ವಾನ ನೀಡಿದ್ದಾರೆ.

ಮಾಧ್ಯಮ ಸಂಪರ್ಕ:

ವಂದನೀಯ ಫಾದರ್ ಅನಿಲ್ ಐವನ್ ಫೆರ್ನಾಂಡಿಸ್, ಮಾಧ್ಯಮ ಸಂಯೋಜಕರು – 82779 37790

ವಂನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್, ಕಾರ್ಯಕ್ರಮ ಸಂಯೋಜಕರು, ಸಂತ ಅಂತೋನಿ ಆಶ್ರಮ, ಜೆಪ್ಪು – 94488 87893

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page