ಒಡಿಲ್ನಾಳ ಕೆರೆ ದುರಂತ – 15 ವರ್ಷದ ಸುಮಂತ್ ಸಾವಿನ ಪ್ರಕರಣ ಕೊಲೆ ಎಂದು ಪರಿವರ್ತನೆ
ನಾಲ್ಕು ತಂಡಗಳಿಂದ ತನಿಖೆ

ಜನವಾರಿ 14ರಂದು ಬುಧವಾರ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯದಲ್ಲಿ ಸಂಭವಿಸಿದ 15 ವರ್ಷದ ಸುಮಂತ್ ಅವರ ಅಸಹಜ ಸಾವಿನ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಶವಪರೀಕ್ಷೆಯ ನಂತರ ಲಭ್ಯವಾದ ಪ್ರಾಥಮಿಕ ವರದಿ ಪ್ರಕಾರ, ಹುಡುಗನು ಕೆರೆಯಲ್ಲಿ ಮುಳುಗುವ ವೇಳೆ ಜೀವಂತನಾಗಿದ್ದನು ಹಾಗೂ ತಕ್ಷಣದ ಸಾವಿನ ಕಾರಣ ಮುಳುಗು ಸಾವಾಗಿರುತ್ತದೆ ಎಂದು ತಿಳಿಸಿದೆ.


ಪ್ರಾಥಮಿಕ ವರದಿಯಲ್ಲಿ ತಲೆಯ ಮೇಲೆ ಕಂಡುಬಂದ ಗಾಯಗಳು ಮಂದ ಬಲದ ಗಾಯಗಳು (Blunt injury) ಆಗಿದ್ದು, ಯಾವುದೇ ಚೂಪಾದ (Sharp) ಆಯುಧಗಳಿಂದ ಉಂಟಾದ ಗಾಯಗಳಲ್ಲ ಎಂದು ತಿಳಿದುಬಂದಿದೆ. ಆದರೆ ತಲೆಯ ಮೇಲಿನ ಗಾಯಗಳ ಕುರಿತು ಸಮರ್ಪಕವಾದ ವಿವರಣೆ ಲಭ್ಯವಾಗದ ಹಿನ್ನೆಲೆಯಲ್ಲಿ, ಪ್ರಕರಣದ ಸತ್ಯಾಸತ್ಯತೆ ಹೊರತರುವುದು ಅಗತ್ಯವೆಂದು ಪೊಲೀಸ್ ಇಲಾಖೆ ನಿರ್ಧರಿಸಿದೆ.

ಆದ್ದರಿಂದ ಈ ಅಸಹಜ ಸಾವು ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ ಸಮಗ್ರ ಹಾಗೂ ಸೂಕ್ಷ್ಮ ತನಿಖೆ ಕೈಗೊಳ್ಳಲಾಗಿದೆ. ಪ್ರಕರಣದ ಸಮಗ್ರ ತನಿಖೆಗಾಗಿ ಬೆಳ್ತಂಗಡಿ ಡಿಎಸ್ಪಿ ಅವರ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರಿಸಲಾಗಿದೆ.




