ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಹಾಗೂ ಪಣಂಬೂರು ಬೀಚ್ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಣ – ಮಂಗಳೂರು ನಗರ ಪೊಲೀಸ್ ಸೂಚನೆ
ಕರಾವಳಿ ಉತ್ಸವದ ಪ್ರಯುಕ್ತ ತಣ್ಣೀರುಬಾವಿ ಬ್ಲೂ ಪ್ಲ್ಯಾಗ್ ಬೀಚ್ನಲ್ಲಿ ಜನವರಿ 17 ಮತ್ತು 18ರಂದು ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಹಾಗೂ ಗಣ್ಯರ ಹೆಚ್ಚಿನ ಆಗಮನದಿಂದ ಮಧ್ಯಾಹ್ನ 3 ಗಂಟೆಯ ನಂತರ ಕೊಟ್ಟಾರ ಚೌಕಿ–ಪಣಂಬೂರು ರಾಷ್ಟ್ರೀಯ ಹೆದ್ದಾರಿ ಹಾಗೂ ತಣ್ಣೀರುಬಾವಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ ಎಂದು ಮಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ.

ಕಾರ್ಯಕ್ರಮ ನಡೆಯುವ ಅವಧಿಯಲ್ಲಿ ಕುದುರೆಮುಖ ಜಂಕ್ಷನ್ನಿಂದ ತಣ್ಣೀರುಬಾವಿ ಬೀಚ್ ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ಯಾವುದೇ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ಸುಲ್ತಾನ್ ಬತ್ತೇರಿಯಿಂದ ಫೇರಿಯ ಸೇವೆ ಅಥವಾ ಕೆಐಒಸಿಎಲ್ನಿಂದ ತಣ್ಣೀರುಬಾವಿಗೆ ಒದಗಿಸಲಾದ ಉಚಿತ KSRTC ಬಸ್ ಸೇವೆಯನ್ನು ಬಳಸಿಕೊಳ್ಳಬಹುದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಣ್ಣೀರುಬಾವಿ ಬೀಚ್ ಕಾರ್ಯಕ್ರಮಕ್ಕೆ ದೋಸ್ತ್ ಗ್ರೌಂಡ್, ಕಟ್ಟೆ ಗ್ರೌಂಡ್, ತಣ್ಣೀರುಬಾವಿ ಮಸೀದಿ ಎದುರು, ರಫ್ತಾರ್ ಪಾರ್ಕಿಂಗ್, ತಣ್ಣೀರುಬಾವಿ ಬೀಚ್ ಪಾರ್ಕಿಂಗ್, ಡೆಲ್ಟಾ ಮೈದಾನ, ಫೀಜಾ ಕ್ರಿಕೆಟ್ ಗ್ರೌಂಡ್ ಹಾಗೂ ಎ.ಜೆ. ಶೆಟ್ಟಿ ಅವರ ಗ್ರೌಂಡ್ಗಳನ್ನು ಪಾರ್ಕಿಂಗ್ ಸ್ಥಳಗಳಾಗಿ ನಿಗದಿಪಡಿಸಲಾಗಿದೆ.

ಇದೇ ವೇಳೆ ಪಣಂಬೂರು ಬೀಚ್ನಲ್ಲಿ ಜನವರಿ 17 ಮತ್ತು 18ರಂದು ಮ್ಯೂಸಿಕ್ ಫೆಸ್ಟಿವಲ್, ತಾಯ್ಕಡಂ ಬ್ರಿಡ್ಜ್ ಕಾನ್ಸರ್ಟ್, ಜಾವೇದ್ ಅಲಿ ನೈಟ್ ಹಾಗೂ ಮರಳು ಶಿಲ್ಪಕಲೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 3 ಗಂಟೆಯ ನಂತರ ಕೂಳೂರು–ಪಣಂಬೂರು ಬೈಕಂಪಾಡಿ ರಾಷ್ಟ್ರೀಯ ಹೆದ್ದಾರಿ ಹಾಗೂ ಪಣಂಬೂರು ಬೀಚ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.



ಕಾರ್ಯಕ್ರಮ ನಡೆಯುವ ಸಮಯದಲ್ಲಿ ಕುದುರೆಮುಖ ಜಂಕ್ಷನ್ನಿಂದ ಪಣಂಬೂರು ಜಂಕ್ಷನ್ ವರೆಗೆ ಮತ್ತು ಡಿಕ್ಸಿ ಕ್ರಾಸ್ನಿಂದ ಪಣಂಬೂರು ಬೀಚ್ ವರೆಗಿನ ರಸ್ತೆಯ ಎರಡೂ ಬದಿಗಳಲ್ಲಿ ವಾಹನ ಪಾರ್ಕಿಂಗ್ ನಿಷೇಧಿಸಲಾಗಿದೆ. ಪಣಂಬೂರು ಬೀಚ್ ಕಾರ್ಯಕ್ರಮಕ್ಕೆ ಕೆ.ಕೆ. ಗೇಟ್ ಟ್ರಕ್ ಯಾರ್ಡ್ ಹಾಗೂ ಪಣಂಬೂರು ಬೀಚ್ ಪಾರ್ಕಿಂಗ್ ಸ್ಥಳಗಳನ್ನು ನಿಗದಿಪಡಿಸಲಾಗಿದೆ.
ಸಾರ್ವಜನಿಕರು ತಮ್ಮ ವಾಹನಗಳನ್ನು ನಿಗದಿತ ಪಾರ್ಕಿಂಗ್ ಸ್ಥಳಗಳಲ್ಲಿ ಮಾತ್ರ ನಿಲ್ಲಿಸುವುದು, ಮಾರ್ಗಸೂಚಿ ಫಲಕಗಳನ್ನು ಪಾಲಿಸುವುದು, ಅನಾವಶ್ಯಕವಾಗಿ ರಸ್ತೆ ಮೇಲೆ ನಿಲ್ಲದೇ ಶಿಸ್ತು ಕಾಪಾಡುವುದು ಹಾಗೂ ಪೊಲೀಸರ ಸೂಚನೆಗಳನ್ನು ಅನುಸರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರು ಮನವಿ ಮಾಡಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸಿ ಸುರಕ್ಷಿತರಾಗಿರಿ ಎಂದು ಅವರು ತಿಳಿಸಿದ್ದಾರೆ.




