July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

‘ಗಾ ತುಂ ಜಿಬೆ’ ಕೊಂಕಣಿ ಸಮೂಹ ಗಾಯನ ಸ್ಪರ್ಧೆ

ಮಂಗಳೂರಿನ ‘ಕಂತಾತೆ ದೊಮಿನೊ’ ತಂಡಕ್ಕೆ ಪ್ರಥಮ ಸ್ಥಾನ  

ನಿವೃತ್ತ ಬಿಷಪ್ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರಿಂದ ಅಪಾರ ಮೆಚ್ಚುಗೆ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ಜೆಪ್ಪುವಿನಲ್ಲಿರುವ ಸಂತ ಅಂತೋನಿ ಆಶ್ರಮದಲ್ಲಿ ಜನವರಿ 18ರಂದು ಭಾನುವಾರ ನಡೆದ ಐತಿಹಾಸಿಕ ‘ಗಾ ತುಂ ಜಿಬೆ’ (ಹಾಡು ನೀ ನಾಲಿಗೆಯೇ) ಕೊಂಕಣಿ ಸಮೂಹ ಗಾಯನ ಸ್ಪರ್ಧೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಮುಂಬರುವ ಸಂತ ಅಂತೋನಿಯವರ ಪವಿತ್ರ ಅವಶೇಷದ ಹಬ್ಬದ ಅಂಗವಾಗಿ ಆಯೋಜಿಸಲಾದ ಈ ಸ್ಪರ್ಧೆಯಲ್ಲಿ ಮಂಗಳೂರು ಧರ್ಮಕ್ಷೇತ್ರದ ವಿವಿಧ ತಂಡಗಳು ಭಕ್ತಿಗೀತೆಗಳ ಮೂಲಕ ಸಂತ ಅಂತೋನಿಯವರನ್ನು ಸ್ತುತಿಸಿವೆ.

ನೋಂದಾಯಿತ 21 ತಂಡಗಳ ಪೈಕಿ 17 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿವಿಧ ಚರ್ಚ್‌ಗಳ ಗಾಯನ ಮಂಡಳಿಗಳು, ಧಾರ್ಮಿಕ ಸಂಸ್ಥೆಗಳು, ಧರ್ಮ ಭಗಿನಿಯರು, ಯುವಜನರು ಹಾಗೂ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

ತೀವ್ರ ಪೈಪೋಟಿಯ ಈ ಸ್ಪರ್ಧೆಯಲ್ಲಿ ಮಂಗಳೂರಿನ ‘ಕಂತಾತೆ ದೊಮಿನೊ’ (Cantate Domino) ತಂಡವು ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಜೆಪ್ಪು ಚರ್ಚ್ ತಂಡ ದ್ವಿತೀಯ ಸ್ಥಾನ ಹಾಗೂ ಅಂತೋನಿಕಟ್ಟೆಯ ಸಂತ ಅಂತೋನಿ ಚರ್ಚ್ ತಂಡ ತೃತೀಯ ಸ್ಥಾನವನ್ನು ಗಳಿಸಿತು.

 

ಇದೇ ಸಂದರ್ಭದಲ್ಲಿ ಹೋಲಿ ರೋಜರಿ ಕೆಥೆಡ್ರಲ್, ಅಥೇನಾ ನರ್ಸಿಂಗ್ ಕಾಲೇಜು, ಅಬೋಡ್ ಆಫ್ ಪೀಸ್ (ಯುಎಫ್‌ಎಸ್) ದೇರಳಕಟ್ಟೆ, ಫೆರ್ಮಾಯಿಯ ಸಂತ ಅಂತೋನಿ ಚರ್ಚ್, ಚಿಲಿ ಪಿಲಿ ಗಾಯನ ತಂಡ (ಬೊಂದೆಲ್ ಶ್ರೈನ್), ಕಾರ್ಪಸ್ ಕ್ರಿಸ್ಟಿ ಗಾಯನ ತಂಡ ಮೂಡುಬಿದಿರೆ, ಬೆಥನಿ ಸಿಸ್ಟರ್ಸ್ ಮಂಗಳೂರು ಪ್ರಾಂತ, ರಂಗ್ ತರಂಗ್ ಮೂಡುಬಿದಿರೆ, ಸಂತ ಸಿಸಿಲಿಯಾ ಗಾಯನ ಮಂಡಳಿ ಮಿಲಾಗ್ರಿಸ್ ಹಾಗೂ ಫಾದರ್ ವಾಲ್ಟರ್ ಅಲ್ಬುಕರ್ಕ್ ಮೆಮೋರಿಯಲ್ ಗಾಯನ ತಂಡಗಳಿಗೆ ಸಮಾಧಾನಕರ ಬಹುಮಾನಗಳನ್ನು ಪ್ರದಾನಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ ಮಂಗಳೂರು ಧರ್ಮಕ್ಷೇತ್ರದ ನಿವೃತ್ತ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜ ಅವರು ಆಶ್ರಮದ ಈ ವಿನೂತನ ಉಪಕ್ರಮವನ್ನು ಶ್ಲಾಘಿಸಿ, “ಹಾಡುವುದು ದೇವರನ್ನು ಮಹಿಮೆಪಡಿಸುವುದು ಹಾಗೂ ನಮ್ಮನ್ನು ನಾವೇ ಪವಿತ್ರೀಕರಿಸಿಕೊಳ್ಳುವ ಮಾರ್ಗ. ಸ್ಪರ್ಧೆಯ ನಂತರವೂ ಗಾಯನ ಮಂಡಳಿಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು,” ಎಂದು ಕರೆ ನೀಡಿದರು.

ಖ್ಯಾತ ಸಂಗೀತ ತಜ್ಞರಾದ ವಂದನೀಯ ಫಾದರ್ ಆಲ್ವಿನ್ ಸಿಕ್ವೇರಾ (ಒಸಿಡಿ), ಜೋಯಲ್ ಪಿರೇರಾ ಹಾಗೂ ಬೆಂಗಳೂರಿನ ಸಿಸ್ಟರ್ ಮರಿಯಾ ಕ್ಲಾರಿಸ್ (ಎಸಿ) ಅವರು ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ಸಂತ ಅಂತೋನಿ ಆಶ್ರಮದ ನಿರ್ದೇಶಕ ವಂದನೀಯ ಫಾದರ್ ಜೆ.ಬಿ. ಕ್ರಾಸ್ತಾ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆಶ್ರಮದ ಆಡಳಿತಾಧಿಕಾರಿ ವಂದನೀಯ ಫಾದರ್ ಪ್ರವೀಣ್ ಅಮೃತ್ ಮಾರ್ಟಿಸ್ ಸಂಯೋಜಕರಾಗಿ ಹಾಗೂ ವಂದನೀಯ ಫಾದರ್ ನಿಶಾಂತ್ ವಿವಿಯನ್ ರೊಡ್ರಿಗಸ್ ಸಹ-ಸಂಯೋಜಕರಾಗಿ ಕಾರ್ಯನಿರ್ವಹಿಸಿದರು. ಗಣ್ಯರು, ಧಾರ್ಮಿಕ ನಾಯಕರು, ಸ್ವಯಂಸೇವಕರು ಮತ್ತು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page