ಮಾಣಿ ಗ್ರಾಮದಲ್ಲಿ ‘ಸಮುದಾಯದತ್ತ ಸಾಂತ್ವನ ಅಭಿಯಾನ’
ಕಸಮುಕ್ತ, ನಶೆಮುಕ್ತ, ಹಿಂಸಾಮುಕ್ತ ಮಾದರಿ ಗ್ರಾಮ ನಿರ್ಮಾಣಕ್ಕೆ ಸ್ವಚ್ಛತಾ ಕಾರ್ಯಚರಣೆ

ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ನೇತೃತ್ವ

ಮಾಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ ಹಾಗೂ ವಿವಿಧ ಸಂಘ–ಸಂಸ್ಥೆಗಳ ಜಂಟಿ ಸಹಯೋಗದಲ್ಲಿ ಸಮುದಾಯದತ್ತ ಸಾಂತ್ವನ ಅಭಿಯಾನದ ಅಂಗವಾಗಿ ಕಸಮುಕ್ತ, ನಶೆಮುಕ್ತ ಹಾಗೂ ಹಿಂಸಾಮುಕ್ತ ಮಾದರಿ ಗ್ರಾಮ ನಿರ್ಮಾಣದ ಉದ್ದೇಶದಿಂದ ಸ್ವಚ್ಛ ಮನೆ ಸ್ವಯಂ ಘೋಷಣೆ – ಸ್ವಚ್ಛತಾ ಕಾರ್ಯಚರಣೆ ಕಾರ್ಯಕ್ರಮವನ್ನು ಜನವರಿ 19ರಂದು ಸೋಮವಾರ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ ನೇತೃತ್ವದಲ್ಲಿ ಆಯೋಜಿಸಲಾಯಿತು.


ಕಾರ್ಯಕ್ರಮದ ವೇಳೆ ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ‘ಮಾಣಿ ಜಂಕ್ಷನ್’ ಹಾಗೂ ‘ಸೂರಿಕುಮೇರು ಜಂಕ್ಷನ್’ ಪ್ರದೇಶಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಯಿತು. ಅಂಗಡಿ ಮುಂಗಟ್ಟುಗಳು ಹಾಗೂ ಸ್ಥಳೀಯ ಮನೆಗಳಿಗೆ ಭೇಟಿ ನೀಡಿ ಸ್ವಚ್ಛತೆ ಮತ್ತು ಸಾಂತ್ವನ ಕೇಂದ್ರದ ಕರಪತ್ರಗಳನ್ನು ವಿತರಿಸಿ, ಮಾಣಿ ಗ್ರಾಮವನ್ನು ಕಸಮುಕ್ತ–ನಶೆಮುಕ್ತ–ಹಿಂಸಾಮುಕ್ತ ಮಾದರಿ ಗ್ರಾಮವನ್ನಾಗಿಸಲು ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕೈಜೋಡಿಸಬೇಕೆಂದು ವಿನಂತಿಸಲಾಯಿತು. ತ್ಯಾಜ್ಯವನ್ನು ಸರಿಯಾಗಿ ನಿರ್ವಹಿಸಿ ಸ್ವಚ್ಛ ಸಂಕೀರ್ಣ ವಾಹಿನಿಗೆ ನೀಡುತ್ತಿರುವ ಮನೆಗಳಿಂದ ಸ್ವಚ್ಛ ಮನೆ ಘೋಷಣೆ ಪತ್ರವನ್ನು ಸ್ವೀಕರಿಸಲಾಯಿತು.

ಇಂದಿನ ಸ್ವಚ್ಛತಾ ಕಾರ್ಯಾಚರಣೆಯಲ್ಲಿ ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷೆ ಸುಜಾತ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ ಪಿ., ಪಂಚಾಯತ್ ಸದಸ್ಯರುಗಳು, ಬಂಟ್ವಾಳ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ವಿದ್ಯಾ, ಮಾಣಿ ಲಯನ್ಸ್ ಕ್ಲಬ್ ಅಧ್ಯಕ್ಷ ಜನಾರ್ಧನ ಪೆರಾಜೆ, ರಾಷ್ಟ್ರೀಯ ಮಾನವ ಹಕ್ಕುಗಳು ಮತ್ತು ಮಹಿಳಾ ಮಕ್ಕಳ ವಯಸ್ಕರ ಅಭಿವೃದ್ಧಿ ಸಂಸ್ಥೆಯ ಜಿಲ್ಲಾಧ್ಯಕ್ಷ ಸಚ್ಚಿದಾನಂದ ರೈ, ಸಂಜೀವಿನಿ ಒಕ್ಕೂಟದ ವಲಯ ಮೇಲ್ವಿಚಾರಕಿ ದೀಕ್ಷಿತ, ಸಾಂತ್ವನ ಕೇಂದ್ರದ ಸಮಾಜ ಕಾರ್ಯಕರ್ತೆ ದಾಕ್ಷಾಯಿಣಿ, ಪಂಚಾಯತ್ ಸಿಬ್ಬಂದಿಗಳು, ಮಾಣಿಕ್ಯ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿಜಯ, ಎಂ.ಬಿ.ಕೆ. ಸ್ವಾತಿ, ಎಲ್.ಸಿ.ಆರ್.ಪಿ. ಲೈಲಾಬಿ, ಪಶುಸಖಿ ಚೈತ್ರಾ ಕುಮಾರಿ, ಕೃಷಿ ಸಖಿ ಕವಿತಾ, ಒಕ್ಕೂಟದ ಕಾರ್ಯಕಾರಿ ಸಮಿತಿ ಸದಸ್ಯರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಮಾಣಿ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಕರ್ನಾಟಕ ಪ್ರೌಢಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸ್ಕೌಟ್ಸ್ & ಗೈಡ್ಸ್ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿದರು.




