“ವಿಟ್ಲ ಠಾಣೆಗೆ ಪ್ರಕಾಶ್ ದೇವಾಡಿಗ ಆಗಮನದ ಬಳಿಕ ಭಯರಹಿತ ವಾತಾವರಣ – ದಕ್ಷ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗೆ ಐಕ್ಯ ವೇದಿಕೆಯಿಂದ ಸನ್ಮಾನ”
“ಶಾಂತಿ–ಸೌಹಾರ್ದತೆಯ ಸಂಕೇತವಾದ ಪೊಲೀಸ್ ಅಧಿಕಾರಿ

ವಿಟ್ಲ ಪೊಲೀಸ್ ಠಾಣಾ ನಿರೀಕ್ಷಕರಾಗಿ ಕರ್ತವ್ಯ ಸ್ವೀಕರಿಸಿದ ಬಳಿಕ ದಕ್ಷತೆ, ಪ್ರಾಮಾಣಿಕತೆ ಹಾಗೂ ಜನಸ್ನೇಹಿ ನಡೆ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಿರುವ ಪೊಲೀಸ್ ಅಧಿಕಾರಿ ಪ್ರಕಾಶ್ ದೇವಾಡಿಗ ಅವರಿಗೆ ಐಕ್ಯ ವೇದಿಕೆ (ರಿ.) ಕೊಡಾಜೆಯ ನೂತನ ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನವರಿ 18ರಂದು ಭಾನುವಾರ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ದೇವಾಡಿಗ ಅವರು, ಕಳೆದ ಎರಡು ವರ್ಷಗಳಿಂದ ಸಮಾಜದಲ್ಲಿ ಶಾಂತಿ–ಸೌಹಾರ್ದತೆಯ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ಐಕ್ಯ ವೇದಿಕೆ ನಿರಂತರವಾಗಿ ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. ನೆಟ್ಲಮುಡ್ನೂರು, ಮಾಣಿ ಹಾಗೂ ಅನಂತಾಡಿ ಗ್ರಾಮಗಳಿಗೆ ಸೀಮಿತವಾಗಿರುವ ಸಂಸ್ಥೆಯ ಚಟುವಟಿಕೆಗಳನ್ನು ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವಂತೆ ಸಲಹೆ ನೀಡಿದರು.

ವಿಟ್ಲ ಠಾಣೆಗೆ ಅವರು ಆಗಮಿಸಿದ ಬಳಿಕ ಅಪರಾಧ ನಿಯಂತ್ರಣ, ಕಾನೂನು ಸುವ್ಯವಸ್ಥೆ ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆ ಬಲಪಡಿಸಿರುವ ಪರಿಣಾಮ ಸಾರ್ವಜನಿಕರು ಯಾವುದೇ ಭಯವಿಲ್ಲದೆ ಬದುಕುವಂತಹ ವಾತಾವರಣ ನಿರ್ಮಾಣವಾಗಿದೆ ಎಂದು ಐಕ್ಯ ವೇದಿಕೆಯ ಪದಾಧಿಕಾರಿಗಳು ಹೇಳಿದರು. ದಕ್ಷ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಪ್ರಕಾಶ್ ದೇವಾಡಿಗ ಅವರು ಪೊಲೀಸ್ ಇಲಾಖೆಗೆ ಗೌರವ ತರುವಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಐಕ್ಯ ವೇದಿಕೆಯ ಅಧ್ಯಕ್ಷ ಅಶ್ರಫ್ ಭಾರತ್, ಕೋಶಾಧಿಕಾರಿ ರಫೀಕ್ ಎಸ್.ಎಸ್., ಕಾರ್ಯದರ್ಶಿ ಆಬಿದ್ ನೇರಳಕಟ್ಟೆ, ಸದಸ್ಯರಾದ ಅಬೂಬಕ್ಕರ್ (ಅಬ್ಬು), ಮಜೀದ್ ಅನಂತಾಡಿ ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಲತೀಫ್ ನೇರಳಕಟ್ಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.




