ನವುಂಡ ಪರಿಸರದಲ್ಲಿ ಚಿರತೆಗಳ ಓಡಾಟ – ನಾಯಿಯ ಮೇಲೆ ದಾಳಿ, ಅರಣ್ಯ ಇಲಾಖೆ ಬೋನು ಅಳವಡಿಕೆ
ಮಡಂತ್ಯಾರು ಇಲ್ಲಿನ ಮಾಲಾಡಿ ಗ್ರಾಮದ ಅಂತರ ನವುಂಡ ದೇವಸ್ಥಾನದ ಸಮೀಪದ ರಸ್ತೆಯಲ್ಲಿ ಜನವರಿ 20ರಂದು ಮಂಗಳವಾರ ರಾತ್ರಿ ಎರಡು ಚಿರತೆಗಳು ಕಾಣಿಸಿಕೊಂಡು ನಾಯಿಯೊಂದರ ಮೇಲೆ ದಾಳಿ ನಡೆಸಿ ಹೊತ್ತೊಯ್ದ ಘಟನೆ ನಡೆದಿದೆ.

ಸ್ಥಳೀಯರೊಬ್ಬರು ರಾತ್ರಿ ತನ್ನ ದ್ವಿಚಕ್ರ ವಾಹನದಲ್ಲಿ ಸಂಚರಿಸುತ್ತಿದ್ದ ವೇಳೆ, ರಸ್ತೆಯ ಬದಿಯಲ್ಲಿ ದಾರಿಹೋಕರಿಗೆ ಹೊಂಚು ಹಾಕುತ್ತಿದ್ದ ಚಿರತೆಗಳನ್ನು ಗಮನಿಸಿ ತಕ್ಷಣ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾರೆ.


ಮಾಹಿತಿ ಪಡೆದ ಕೂಡಲೇ ಅರಣ್ಯಾಧಿಕಾರಿಗಳು ರಾತ್ರಿ ವೇಳೆಯಲ್ಲೇ ಚಿರತೆ ಓಡಾಟ ಕಂಡುಬಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಚಿರತೆಗಳನ್ನು ಸೆರೆ ಹಿಡಿಯುವ ಉದ್ದೇಶದಿಂದ ಬೋನುಗಳನ್ನು ಅಳವಡಿಸಿದ್ದಾರೆ.


ಈ ಹಿಂದೆ ತಾಲೂಕಿನ ವಿವಿಧ ಭಾಗಗಳಲ್ಲಿ ಚಿರತೆಗಳ ಓಡಾಟ ಕಂಡುಬಂದಿರುವ ಹಿನ್ನೆಲೆ, ನಾಗರಿಕರು ಸಂಜೆ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ಸಂಚರಿಸುವಾಗ ವಿಶೇಷ ಜಾಗ್ರತೆ ವಹಿಸಬೇಕೆಂದು ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.



ಈ ಸಂದರ್ಭದಲ್ಲಿ ಬೆಳ್ತಂಗಡಿ ಅರಣ್ಯಾಧಿಕಾರಿ ಸಂದೀಪ್, ಉಪವಲಯ ಅರಣ್ಯಾಧಿಕಾರಿ ರವಿ ಕುಮಾರ್, ಅರಣ್ಯ ಸಂಚಾರಿ ದಳದ ಪುರುಷೋತ್ತಮ್ ಮೇಟಿ, ಸ್ಥಳೀಯರಾದ ಸತೀಶ್ ಮೂಡುಕೋಡಿ, ದಿನೇಶ್ ನವುಂಡ, ಪ್ರಕಾಶ್ ಮಾಲಾಡಿ, ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ್ ಆಳ್ವ ಕುಳ್ಳಂಜ ಹಾಗೂ ಉಮೇಶ್ ಮಾಲಾಡಿ ಅವರು ಅರಣ್ಯಾಧಿಕಾರಿಗಳೊಂದಿಗೆ ಚಿರತೆ ಬೋನು ಅಳವಡಿಸುವ ಕಾರ್ಯದಲ್ಲಿ ಸಹಕರಿಸಿದರು.




