ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಯತ್ನ ಹಾಗೂ ಗುಂಪು ಹಲ್ಲೆ – ಎರಡು ಪ್ರತ್ಯೇಕ ಪ್ರಕರಣ ದಾಖಲು
ಬೆಳ್ತಂಗಡಿ ತಾಲೂಕು ವೇಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳವು ಯತ್ನ ಹಾಗೂ ಅದರ ನಂತರ ನಡೆದ ಗುಂಪು ಹಲ್ಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಜನವರಿ 20ರಂದು ಮಂಗಳವಾರ ಬೆಳಗ್ಗಿನ ಜಾವ 02.10 ರಿಂದ 02.30 ಗಂಟೆಯ ಅವಧಿಯಲ್ಲಿ ಬೆಳ್ತಂಗಡಿ ತಾಲೂಕು, ಮರೋಡಿ ಗ್ರಾಮದ ಪಳಾರಗೋಳಿ ಎಂಬಲ್ಲಿ ಮರೋಡಿ ಗ್ರಾಮ ನಿವಾಸಿ 22 ವರ್ಷ ಪ್ರಾಯದ ದೇವಿಪ್ರಸಾದ್, ಅವರ ಮನೆ ಹತ್ತಿರದ ಮೋಯಿದಿನ್ ನಾಸೀರ್ ಹಾಗೂ ಅಬ್ದುಲ್ ಸಮದ್ ಎಂಬವರು ಪಿರ್ಯಾದಿದಾರರ ಬೈಕ್ ಕಳವು ಮಾಡಿಕೊಂಡು ಹೋಗಲು ಯತ್ನಿಸಿದ ವೇಳೆ ತಡೆಯಲು ಮುಂದಾದ ದೇವಿಪ್ರಸಾದ್ ಮೇಲೆ ಹಲ್ಲೆ ನಡೆಸಿ ಬೈಕ್ನೊಂದಿಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ದೂರಿನ ಮೇರೆಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 02/2026 ಕಲಂ 303(2), 307 ಬಿ.ಎನ್.ಎಸ್–2023 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇದೇ ಘಟನೆಯ ಸಂಬಂಧವಾಗಿ, ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಬೈಕ್ ತೆಗೆದುಕೊಂಡು ಹೋಗುವ ಸಂದರ್ಭ ಸುಮಾರು 25–30 ಮಂದಿಯ ಅಕ್ರಮ ಕೂಟ ಸೇರಿ ಪಿರ್ಯಾದಿದಾರರು ಹಾಗೂ ಅವರ ಸ್ನೇಹಿತನನ್ನು ಸುತ್ತುವರಿದು ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಾಗೂ ಮರದ ಕೋಲಿನಿಂದ ಹಲ್ಲೆ ನಡೆಸಿ, ಮರಕ್ಕೆ ಕಟ್ಟಿಹಾಕಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಮಂಗಳೂರಿನ ಬೇಂಗ್ರೆ ಕುಳೂರು ನಿವಾಸಿ 29 ವರ್ಷ ಪ್ರಾಯದ ಅಬ್ದುಲ್ ಸಮದ್ ಅವರು ನೀಡಿದ ದೂರಿನಂತೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ. 03/2026 ಕಲಂ 189(2), 191(2), 191(3), 352, 115(2), 118(1), 351(2) ಹಾಗೂ 190 ಬಿ.ಎನ್.ಎಸ್–2023 ಅಡಿಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ವೇಣೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




