ಜೀವಾವಧಿ ಕೈದಿಗಳ ನಡುವೆ ಜೈಲಿನಲ್ಲಿ ಅರಳಿದ ಪ್ರೇಮ: ಮದುವೆಗೆ 15 ದಿನಗಳ ಪೆರೋಲ್ ಮಂಜೂರು
ಜೈಪುರದ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಇಬ್ಬರು ಕೈದಿಗಳ ನಡುವೆ ಪ್ರೇಮಾಂಕುರವಾಗಿದ್ದು, ಇದೀಗ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಮುಂದಾಗಿರುವುದು ಎಲ್ಲರ ಗಮನ ಸೆಳೆದಿದೆ. ಮದುವೆ ನಡೆಸುವ ಉದ್ದೇಶದಿಂದ ನ್ಯಾಯಾಲಯದ ಆದೇಶದ ಮೇರೆಗೆ ದಂಪತಿಗೆ 15 ದಿನಗಳ ಪೆರೋಲ್ ಮಂಜೂರಾಗಿದೆ. ಡೇಟಿಂಗ್ ಆ್ಯಪ್ ಮೂಲಕ ವ್ಯಕ್ತಿಯನ್ನು ಬಲೆಗೆ ಬೀಸಿ ಹತ್ಯೆ ಮಾಡಿ ಶವವನ್ನು ಸೂಟ್ಕೇಸ್ನಲ್ಲಿ ತುಂಬಿದ್ದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿರುವ ಪ್ರಿಯಾ ಸೇಠ್ (34) ಹಾಗೂ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಮತ್ತು ಮಗುವನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಹನುಮಾನ್ ಪ್ರಸಾದ್ (29) ಪರಸ್ಪರ ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದ್ದಾರೆ.

ಸಂಗನೇರ್ ಕಾರಾಗೃಹದಲ್ಲಿದ್ದ ಈ ಇಬ್ಬರು ಕೈದಿಗಳು ರಾಜಸ್ಥಾನದ ಕೈದಿಗಳ ಓಪನ್ ಏರ್ ಕ್ಯಾಂಪ್ (ಬಯಲು ಶಿಬಿರ) ವ್ಯವಸ್ಥೆಯಲ್ಲಿ ವಾಸಿಸುವ ವೇಳೆ ಪರಸ್ಪರ ನಿಕಟ ಸಂಬಂಧ ಬೆಳೆಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಜನವರಿ 7ರಂದು ರಾಜಸ್ಥಾನ ಹೈಕೋರ್ಟ್ ನಿರ್ದೇಶನದಂತೆ ಜಿಲ್ಲಾ ಪೆರೋಲ್ ಸಲಹಾ ಸಮಿತಿಯು ಇವರ ವಿವಾಹಕ್ಕೆ ಅನುಮತಿ ನೀಡಿದ್ದು, 15 ದಿನಗಳ ಪೆರೋಲ್ ನೀಡಲಾಗಿದೆ ಎಂದು ವಕೀಲ ವಿಶ್ರಮ್ ಪ್ರಜಾಪತ್ ತಿಳಿಸಿದ್ದಾರೆ. ಹನುಮಾನ್ ಪ್ರಸಾದ್ ಅವರ ಹುಟ್ಟೂರಾದ ಅಲ್ವಾರ್ ಜಿಲ್ಲೆಯ ಬರೋಡಾಮಿಯೋ ಗ್ರಾಮದಲ್ಲಿ ವಿವಾಹ ನಡೆಯಲಿದೆ.
ಪ್ರಿಯಾ ಸೇಠ್ಗೆ 2023ರಲ್ಲಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಹನುಮಾನ್ ಪ್ರಸಾದ್ಗೂ 2023ರಲ್ಲಿ ಹಲವರ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ನಡುವೆ ಪ್ರಿಯಾ ಸೇಠ್ಗೆ ಪೆರೋಲ್ ನೀಡಿರುವ ಕ್ರಮವನ್ನು ಪ್ರಶ್ನಿಸಿ, ಆಕೆಯ ಕೈಯಲ್ಲಿ ಹತ್ಯೆಗೊಳಗಾದ ಸಂತ್ರಸ್ತ ಕುಟುಂಬ ಹೈಕೋರ್ಟ್ ಮೊರೆ ಹೋಗುವುದಾಗಿ ತಿಳಿಸಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಜೈಲಿನ ಗೋಡೆಗಳ ನಡುವೆ ಮೊಳಕೆಯೊಡೆದ ಈ ಅಸಾಮಾನ್ಯ ಪ್ರೇಮ ಹಾಗೂ ವಿವಾಹ ನಿರ್ಧಾರ ಸಾರ್ವಜನಿಕ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಈ ಕುರಿತು ಅಧಿಕಾರಿಗಳು ಮಾತನಾಡಿ, ಜೈಲಿನಲ್ಲಿರುವ ಕಾನೂನು ಹಾಗೂ ನಿಯಮಗಳ ಅನುಸಾರವೇ ಕ್ರಮ ಕೈಗೊಳ್ಳಲಾಗಿದ್ದು, ಆರು ಸದಸ್ಯರ ಸಮಿತಿಯು ಪೆರೋಲ್ ಹಾಗೂ ಪುನರ್ವಸತಿ ಅರ್ಹತೆ ಕುರಿತು ಸಮಗ್ರ ಮೌಲ್ಯಮಾಪನ ನಡೆಸಿದೆ ಎಂದು ತಿಳಿಸಿದ್ದಾರೆ.




