ನಿಯಮ ಉಲ್ಲಂಘನೆ ಸಾಬೀತು – ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆ ಅನರ್ಹ
6 ವರ್ಷ ಚುನಾವಣೆಗೆ ನಿಷೇಧ

ಗ್ರಾಮ ಪಂಚಾಯತ್ ಆಡಳಿತದಲ್ಲಿ ಶುದ್ಧತೆಗೆ ಕಠಿಣ ಸಂದೇಶ

ನಿಯಮ ಬಾಹಿರವಾಗಿ ಸಹೋದರನಿಗೆ ಗ್ರಾಮ ಪಂಚಾಯತ್ ಕಾಮಗಾರಿಗಳ ಗುತ್ತಿಗೆ ನಿರ್ವಹಿಸಲು ಅವಕಾಶ ಕಲ್ಪಿಸಿದ ಆರೋಪ ಸಾಬೀತಾದ ಹಿನ್ನೆಲೆ, ಅಂಡಿಂಜೆ ಗ್ರಾಮ ಪಂಚಾಯತ್ ಸದಸ್ಯ ಜಗದೀಶ ಹೆಗ್ಡೆ ಅವರ ಸದಸ್ಯತ್ವವನ್ನು ರದ್ದುಗೊಳಿಸಿ, ಮುಂದಿನ ಆರು ವರ್ಷಗಳ ಕಾಲ ಯಾವುದೇ ಪಂಚಾಯತ್ ಚುನಾವಣೆಗೆ ಸ್ಪರ್ಧಿಸದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪೀಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ–1993ರ ವಿಧಿ 43(ಎ)(1)(v) ಅಡಿಯಲ್ಲಿ, ಅಂಡಿಂಜೆ ಗ್ರಾಮ ಪಂಚಾಯತ್ನ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ಜಗದೀಶ ಹೆಗ್ಡೆಯವರ ವಿರುದ್ಧ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ಸಂಬಂಧ ಗ್ರಾಮ ಪಂಚಾಯತ್ ಪೀಠಾಧಿಕಾರಿ ಶಿವಕುಮಾರ ಅವರು ದಿನಾಂಕ 05-01-2026 ರಂದು ಅಧಿಕೃತ ಆದೇಶ ಪ್ರಕಟಿಸಿದ್ದಾರೆ.
ಸ್ಥಳೀಯ ನಿವಾಸಿ ಹರೀಶ್ ಕುಮಾರ್ ಅವರು ಈ ಬಗ್ಗೆ ಪಂಚಾಯತ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ನಡೆದ ತನಿಖೆಯಲ್ಲಿ, ಜಗದೀಶ ಹೆಗ್ಡೆಯವರು ತಮ್ಮ ಕರ್ತವ್ಯವನ್ನು ಲಂಘಿಸಿ, ನಿಯಮ ಬಾಹಿರವಾಗಿ ಸಹೋದರನಿಗೆ ಕಾಮಗಾರಿ ಗುತ್ತಿಗೆ ನೀಡಲು ಅವಕಾಶ ಮಾಡಿಕೊಟ್ಟಿರುವುದು ಹಾಗೂ ಕಾಮಗಾರಿಗಳ ಬಿಲ್ ಪಾವತಿಗೆ ಸಹಕರಿಸಿರುವುದು ದೃಢಪಟ್ಟಿದೆ.

ಈ ಹಿನ್ನೆಲೆಯಲ್ಲಿ ಪಂಚಾಯತ್ ಸದಸ್ಯತ್ವ ರದ್ದುಪಡಿಸಿ ಚುನಾವಣೆಗೆ ಅನರ್ಹಗೊಳಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಈ ಆದೇಶವು ಗ್ರಾಮ ಪಂಚಾಯತ್ ಆಡಳಿತದಲ್ಲಿ ಜವಾಬ್ದಾರಿ, ಪಾರದರ್ಶಕತೆ ಮತ್ತು ಆಡಳಿತ ಪರಿಶುದ್ಧತೆ ಯನ್ನು ಬಲಪಡಿಸುವ ಮಹತ್ವದ ನಿರ್ಧಾರವಾಗಿ ಪರಿಗಣಿಸಲಾಗಿದೆ.




