ಜನವರಿ 17ರಂದು ಶಾಸಕ ಹರೀಶ್ ಪೂಂಜರಿಂದ ನಡೆದ ಸ್ವಾಗತ ಗೋಪುರ ಉದ್ಘಾಟನೆ ಅಧಿಕೃತವಲ್ಲ — ವ್ಯವಸ್ಥಾಪನ ಸಮಿತಿ ಸ್ಪಷ್ಟನೆ
ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಕೇಳ ಕಾಶಿಪಟ್ಣದಲ್ಲಿ ಜನವರಿ 17ರಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರು ಸ್ವಾಗತ (ರಾಜ) ಗೋಪುರವನ್ನು ಉದ್ಘಾಟಿಸಿದ್ದಾಗಿ ಹೇಳಲಾಗಿರುವ ಘಟನೆ ಅಧಿಕೃತವಲ್ಲ ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಬಾಲ್ಯ ಶಂಕರ್ ಭಟ್ ಸ್ಪಷ್ಟನೆ ನೀಡಿದ್ದಾರೆ.


ಜನವರಿ 17ರಂದು ಬಿಜೆಪಿ ಪ್ರಾಯೋಜಕತ್ವದಲ್ಲಿ “ಜೋಡಿ ಜೀಟಿಗೆ” ಎಂಬ ತುಳು ನಾಟಕದ ಕಾರ್ಯಕ್ರಮವನ್ನು ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದ್ದು, ಅದೇ ದಿನ ರಾತ್ರಿ ಸುಮಾರು 11.30ರ ವೇಳೆಗೆ ಶಾಸಕ ಹರೀಶ್ ಪೂಂಜರು ವ್ಯವಸ್ಥಾಪನ ಸಮಿತಿ ಹಾಗೂ ಊರ ಭಕ್ತಾಧಿಗಳಿಗೆ ಯಾವುದೇ ಪೂರ್ವ ಮಾಹಿತಿ ನೀಡದೆ ಸ್ವಾಗತ ಗೋಪುರವನ್ನು ಉದ್ಘಾಟಿಸಿರುವುದು ಅಧಿಕೃತ ಪ್ರಕ್ರಿಯೆಯಲ್ಲ ಎಂದು ಅವರು ಹೇಳಿದರು.



ದೇವಾಲಯದ ಇತಿಹಾಸವನ್ನು ವಿವರಿಸಿದ ಅವರು, 1995ರಲ್ಲಿ ಊರ ಹಾಗೂ ಪರವೂರ ಭಕ್ತಾಧಿಗಳ ಸಹಕಾರದಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ನವೀಕರಣ ನಡೆದಿದ್ದು, 2014ರಲ್ಲಿ ಪುನರ್ನವೀಕರಣ ಹಾಗೂ ಬ್ರಹ್ಮಕಲಶೋತ್ಸವ ನೆರವೇರಿದೆ ಎಂದು ತಿಳಿಸಿದರು. 2023ರ ಸಾಲಿನಲ್ಲಿ ಶಾಸಕ ನಿಧಿಯಿಂದ ರಾಜಗೋಪುರ ನಿರ್ಮಾಣಕ್ಕೆ 25 ಲಕ್ಷ ರೂಪಾಯಿ ಮಂಜೂರಾಗಿದ್ದರೂ, ಈ ಮೊತ್ತದಲ್ಲಿ ಸಂಪೂರ್ಣ ರಾಜಗೋಪುರ ನಿರ್ಮಾಣ ಸಾಧ್ಯವಿಲ್ಲವೆಂದು ಗುತ್ತಿಗೆದಾರರು ಕೆಲಸಕ್ಕೆ ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ಊರ ಭಕ್ತಾಧಿಗಳ ಸಹಕಾರದೊಂದಿಗೆ ಸ್ವಂತವಾಗಿ ರಾಜಗೋಪುರ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ ಎಂದು ಹೇಳಿದರು.

ಫೆಬ್ರವರಿ 21ರಂದು ನಡೆಯುವ ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲೇ ರಾಜಗೋಪುರವನ್ನು ಉದ್ಘಾಟಿಸುವುದು ವ್ಯವಸ್ಥಾಪನ ಸಮಿತಿ ಹಾಗೂ ಊರ ಭಕ್ತಾಧಿಗಳ ತೀರ್ಮಾನವಾಗಿತ್ತು. ಆದರೆ ಮುಂದಿನ ದಿನಗಳಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು, ಜನವರಿ 4ರಂದು ನಡೆದ ಸಭೆಯಲ್ಲಿ ಶಾಸಕ ಹರೀಶ್ ಪೂಂಜರ ನೇತೃತ್ವದಲ್ಲಿ ಜನವರಿ 25ರಂದು ರಾಜಗೋಪುರವನ್ನು ಅಧಿಕೃತವಾಗಿ ಉದ್ಘಾಟಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಅದರಂತೆ ಜನವರಿ 25ರಂದು ರಾಜಗೋಪುರದ ಅಧಿಕೃತ ಉದ್ಘಾಟನೆ ಹಾಗೂ ಲೋಕಾರ್ಪಣೆ ನಡೆದಿದೆ ಎಂದು ಸಮಿತಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ಜನವರಿ 17ರಂದು ನಡೆದ ಸ್ವಾಗತ ಗೋಪುರ ಉದ್ಘಾಟನೆಗೆ ಯಾವುದೇ ಅಧಿಕೃತ ಮಾನ್ಯತೆ ಇಲ್ಲ ಎಂದು ಪತ್ರಿಕಾಗೋಷ್ಠಿಯ ಮೂಲಕ ಸ್ಪಷ್ಟನೆ ನೀಡಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಕಾಶಿಪಟ್ಣ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ. ಸತೀಶ್ ಬಂಗೇರ, ಕೇಳ ಅರಮನೆ ವಿಕ್ರಮ್ ಕುಮಾರ್ ಜೈನ್, ಪೆರಾಡಿ ಬಂಡಸಾಲೆ ಸಂಜೀವ್ ಶೆಟ್ಟಿ, ದಲಿತ ಸಂಘರ್ಷ ಸಮಿತಿ ಸಂಚಾಲಕ ಕೃಷ್ಣಪ್ಪ, ಸಹ ಸಂಚಾಲಕರಾದ ರಾಜು ಹಾಗೂ ಸುಂದರ, ಕೇಳದ ಪೇಟೆಯ ಜಯಪ್ರಸಾದ್ ಜೈನ್, ಪ್ರವೀಣ್ ಪಿಂಟೋ ಮತ್ತು ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.




