ಅಂಗನವಾಡಿ ಶಿಕ್ಷಕಿಯರಿಗೆ ವಿಕಲಚೇತನರ ಕುರಿತು ಅರಿವು ಕಾರ್ಯಕ್ರಮ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ – ಮಂಗಳೂರು ನಗರ ಪದವು ಇವರ ಆಶ್ರಯದಲ್ಲಿ ಶಕ್ತಿನಗರ ಅಂಗನವಾಡಿ ಕೇಂದ್ರದಲ್ಲಿ ವಿಕಲಚೇತನರ ಕುರಿತು ಅರಿವು ಕಾರ್ಯಕ್ರಮವನ್ನು ಆಯೋಜಿಸಲಾಯಿತು. ವೆರೋನಿಕಾ ವಿಹಾರ್ ಘಟಕ (ವಿಶೇಷ ಚೇತನ ಹಿರಿಯ ನಾಗರಿಕರ ಪುನರ್ವಸತಿ ನಿಲಯ) ಹಾಗೂ ಕಾರ್ಮೆಲ್ ಸೇವಾ ಟ್ರಸ್ಟ್, ಮಂಗಳೂರು ಇವರ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಿತು.


ಜನವರಿ 27ರಂದು ಮಂಗಳವಾರ ಶಕ್ತಿನಗರ ವಲಯದ 28 ಮಂದಿ ಹಾಗೂ ಜನವರಿ 28ರಂದು ಬುಧವಾರ ಕೊಟ್ಟಾರ ಚೌಕಿ ವಲಯದ 15 ಮಂದಿ ಅಂಗನವಾಡಿ ಶಿಕ್ಷಕಿಯರಿಗೆ ವಿಕಲಚೇತನರ ಕುರಿತು ಸಂಪನ್ಮೂಲ ವ್ಯಕ್ತಿ ಪ್ರಿಯಾ ಡಿಕ್ರುಜ್ ಅವರು ಅರಿವು ಮೂಡಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಿಂಧು ಅವರು ಎಲ್ಲರಿಗೂ ಸ್ವಾಗತಿಸಿದರು. ಕಾರ್ಮೆಲ್ ಸೇವಾ ಟ್ರಸ್ಟ್ನ ಪ್ರೊಜೆಕ್ಟ್ ಮ್ಯಾನೇಜರ್ ಹಾಗೂ ಸಂಯೋಜಕಿ ಸಿಸ್ಟರ್ ಫ್ರೀಡಾ ಅವರು ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದರು.

ಸಂಪನ್ಮೂಲ ವ್ಯಕ್ತಿಯಾದ ಪ್ರಿಯಾ ಡಿಕ್ರುಜ್ ಅವರು ಅಂಗವಿಕಲತೆಯ ಅರ್ಥ, ಅದರ ಲಕ್ಷಣಗಳು, ಕಾರಣಗಳು ಹಾಗೂ ಸರಕಾರದಿಂದ ಲಭ್ಯವಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ, ತಮ್ಮ ವಿಕಲಚೇತನ ಮಗುವಿನ ಲಾಲನೆ–ಪೋಷಣೆಯ ಅನುಭವಗಳನ್ನು ಹಂಚಿಕೊಂಡು, ಅಂಗವಿಕಲತೆಯನ್ನು ಹೇಗೆ ತಡೆಗಟ್ಟಬಹುದು ಎಂಬುದರ ಕುರಿತು ಜಾಗೃತಿ ಮೂಡಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಅಂಗನವಾಡಿ ಶಿಕ್ಷಕಿಯರು ವಂದಿಸಿದರು.




