ಅಡ್ಯಾರ್ ಗ್ರಾಮ ಪಂಚಾಯತ್ ಮಾನವೀಯ ಕಾರ್ಯ
ಅಡ್ಯಾರ್ ನ ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಸಹಯೋಗದಲ್ಲಿ 25 ಉಚಿತ ಹೊಲಿಗೆ ಯಂತ್ರಗಳ ವಿತರಣೆ

ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಅಡ್ಯಾರ್ ಹಾಗೂ ಅಡ್ಯಾರ್ ಗ್ರಾಮ ಪಂಚಾಯತ್ ಸಹಯೋಗದಲ್ಲಿ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ 25 ಹೊಲಿಗೆ ಯಂತ್ರಗಳನ್ನು ವಿತರಿಸುವ ಕಾರ್ಯಕ್ರಮ ಇಂದು ಜನವರಿ 31ರಂದು ಶನಿವಾರ ಅಡ್ಯಾರ್ನ ಯಶಸ್ವಿ ಹಾಲ್ನಲ್ಲಿ ನಡೆಯಿತು.್
ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಲಾಯಿತು. ನಂತರ ಮಾತನಾಡಿದ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಅವರು, “ಭಾರತೀಯ ಸಂಸ್ಕೃತಿಯ ಮೂಲ ತಳಹದಿ ದಾನ ಧರ್ಮದಲ್ಲಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ, ಸಿಖ್ ಸೇರಿದಂತೆ ಎಲ್ಲ ಧರ್ಮಗಳಲ್ಲೂ ದಾನದ ಮಹತ್ವವನ್ನು ಒತ್ತಿ ಹೇಳಲಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಯೊಂದು ಗ್ರಾಮ ಪಂಚಾಯತ್ ಜೊತೆ ಕೈಜೋಡಿಸಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ” ಎಂದರು.


ಲ್ಯಾಂಡ್ ಫ್ಲೇವರ್ ಬೊಂಡ ಫ್ಯಾಕ್ಟರಿ ಮೆನೇಜರ್ ಜಗದೀಶ್ ಕಾಮತ್ ಮಾತನಾಡಿ, “ಗ್ರಾಮದ ಜನರಿಗೆ ನೇರವಾಗಿ ನೆರವಾಗುವಂತಹ ಯೋಜನೆಯನ್ನು ಮುನ್ನಡೆಸಿದ ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸಿಬ್ಬಂದಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಹೊಲಿಗೆ ಯಂತ್ರ ಕೇವಲ ಒಂದು ಯಂತ್ರವಲ್ಲ; ಇದು ಸ್ವ ಉದ್ಯೋಗಕ್ಕೆ ಸ್ಫೂರ್ತಿ ನೀಡುವ ಸಾಧನ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನೀವು ಸ್ವಾವಲಂಬಿಗಳಾಗಿ ಬೆಳೆಯಬೇಕು. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಅಭಿವೃದ್ಧಿಯಾಗಬೇಕು” ಎಂದು ಆಶಿಸಿದರು.


ಅಡ್ಯಾರ್ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಜಲೀಲ್ ಮಾತನಾಡಿ, “ಅಡ್ಯಾರ್ ಗ್ರಾಮದ ಮಹಿಳೆಯರು ಸ್ವಾವಲಂಬಿಗಳಾಗಿ, ಯಾರ ಮೇಲೂ ಅವಲಂಬಿತರಾಗದೆ ಬದುಕಬೇಕು ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ನಿಟ್ಟಿನಲ್ಲಿ ಲ್ಯಾಂಡ್ ಫ್ಲೇವರ್ ಸಂಸ್ಥೆಯನ್ನು ಸಂಪರ್ಕಿಸಿದಾಗ ಅವರು ತಕ್ಷಣ ಸ್ಪಂದಿಸಿದ್ದು ಸಂತೋಷದ ಸಂಗತಿ. ಈಗಾಗಲೇ ನಮ್ಮ ಊರಿನ 150ಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿರುವ ಈ ಸಂಸ್ಥೆ ಗ್ರಾಮಕ್ಕೆ ಮಾರ್ಗದರ್ಶಿಯಾಗಿದೆ. ಎಲ್ಲ ಕೆಲಸಗಳನ್ನು ಸರ್ಕಾರದಿಂದ ಮಾತ್ರ ನಿರೀಕ್ಷಿಸಲು ಸಾಧ್ಯವಿಲ್ಲ. ಸಮಾಜದ ಹಿತಕ್ಕಾಗಿ ಉದ್ಯಮಿಗಳು ಮುಂದೆ ಬಂದಾಗ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯ. ಇಂದು ವಿತರಿಸಲಾದ ಹೊಲಿಗೆ ಯಂತ್ರಗಳನ್ನು ಸರಿಯಾಗಿ ಬಳಸಿಕೊಂಡು ನಿಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಿ” ಎಂದು ಹೇಳಿದರು.

ವೇದಿಕೆಯಲ್ಲಿ ಲ್ಯಾಂಡ್ ಫ್ಲೇವರ್ ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಸತೀಶ್ ತಲ್ಗೂರು, ಮಿನರ್ವ ಸಂಸ್ಥೆಯ ನಿರ್ದೇಶಕ ವಿನೋದ್ ಡಿಸೋಜ, ಸತೀಶ್, ಜುಮಾ ಮಸೀದಿ ಅಧ್ಯಕ್ಷ ಅಸ್ಲಾಂ, ಬದ್ರಿಯಾ ಮದ್ರಸಾ ಅಧ್ಯಕ್ಷ ಅಬ್ಬಾಸ್, ಸೇವಾಂಜಲಿ ಟ್ರಸ್ಟ್ನ ಕೃಷ್ಣಕುಮಾರ್ ಪೂಂಜಾ, ಅಡ್ಯಾರ್ ಗ್ರಾಮ ಪಂಚಾಯತ್ನ ಜೋಹಾರ, ಪಿಡಿಓ ಅಸಫ್, ಸತೀಶ್, ಅಸ್ಲಾಂ ಸೇರಿದಂತೆ ಹಲವರು ಉಪಸ್ಥಿತರಿದ್ದರು.




