June 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಉಡುಪಿ ಧರ್ಮಕ್ಷೇತ್ರಕ್ಕೆ ನೂತನ ಬಿಷಪ್ ಆಗಿ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ನೇಮಕ

ಉಡುಪಿ ಧರ್ಮಕ್ಷೇತ್ರದ ನೂತನ ಬಿಷಪ್ ಆಗಿ ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರನ್ನು ಪೋಪ್ ಲಿಯೋ XIV ನೇಮಕ ಮಾಡಿದ್ದಾರೆ. ಪ್ರಸ್ತುತ ಅವರು ಶಿರ್ವಾದ ಆರೋಗ್ಯ ಮಾತೆ ದೇವಾಲಯದ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ನೇಮಕಾತಿಯನ್ನು ಇಂದು ಜನವರಿ 31ರಂದು ಶನಿವಾರ ರೋಮ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ (ಭಾರತೀಯ ಕಾಲಮಾನ ಸಂಜೆ 4.30) ಅಧಿಕೃತವಾಗಿ ಪ್ರಕಟಿಸಲಾಗಿದ್ದು, ಅದೇ ವೇಳೆ ಉಡುಪಿ ಕಲ್ಯಾಣ್ ಪುರದ ಮಿಲಾಗ್ರಿಸ್ ಮಾತೆ ದೇವಾಲಯದಲ್ಲಿಯೂ ಘೋಷಿಸಲಾಯಿತು.

ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರು 1962 ಆಗಸ್ಟ್ 19ರಂದು ಉಡುಪಿ ಜಿಲ್ಲೆಯ ಉಚ್ಚಿಲ (ಯರ್ಮಾಳ್) ಗ್ರಾಮದಲ್ಲಿ ಲಾರೆನ್ಸ್ ಮತ್ತು ಸೆಸಿಲಿಯಾ ಡಿಸೋಜ ದಂಪತಿಗಳಿಗೆ ಜನಿಸಿದರು. ಆಳವಾದ ಕ್ರೈಸ್ತ ಧಾರ್ಮಿಕ ಹಿನ್ನೆಲೆಯ ಕುಟುಂಬದಲ್ಲಿ ಬೆಳೆದ ಅವರು ಎಂಟು ಮಂದಿ ಸಹೋದರ-ಸಹೋದರಿಯರ ಕುಟುಂಬದವರು. ಅವರಲ್ಲಿ ಹಿರಿಯ ಸಹೋದರಿಯರಾದ ವೆರೋನಿಕಾ ಡಿಸೋಜ ಹಾಗೂ ಕ್ರಿಸ್ಟಿನ್ ಡಿಸೋಜ ಅವರು ನಿಧನರಾಗಿದ್ದು, ಉಳಿದ ಸಹೋದರ-ಸಹೋದರಿಯರು ಪ್ರಾರ್ಥನೆಯ ಮೂಲಕ ಅವರಿಗೆ ಬೆಂಬಲವಾಗಿ ನಿಂತಿದ್ದಾರೆ.

ಅವರು 1969ರಿಂದ 1976ರವರೆಗೆ ಉಚ್ಚಿಲದ ಸರಸ್ವತಿ ಮಂದಿರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ 1976–1979ರಲ್ಲಿ ಯರ್ಮಾಳಿನ ಸರ್ಕಾರಿ ಮೀನುಗಾರಿಕೆ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಹಾಗೂ 1979–1981ರಲ್ಲಿ ಆದಮಾರದ ಪೂರ್ಣ ಪ್ರಜ್ಞಾ ಕಾಲೇಜಿನಲ್ಲಿ ಪೂರ್ವ ವಿಶ್ವವಿದ್ಯಾಲಯ ಶಿಕ್ಷಣ ಮುಗಿಸಿದರು.

ದೇವರ ಕರೆಯನ್ನು ಸ್ವೀಕರಿಸಿದ ಅವರು ಮಂಗಳೂರು ಸೈಂಟ್ ಜೋಸೆಫ್ ಅಂತರ-ಧರ್ಮಕ್ಷೇತ್ರ ಧರ್ಮಗುರು ತರಬೇತಿ ಕೇಂದ್ರದಲ್ಲಿ ತತ್ವಶಾಸ್ತ್ರ ಅಧ್ಯಯನದ ಜೊತೆಗೆ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದರು. ನಂತರ ರೋಮ್‌ನ ಫೊಂಟಿಫಿಕಲ್ ಅರ್ಬಾನಿಯಾನಾ ವಿಶ್ವವಿದ್ಯಾಲಯದಲ್ಲಿ ಧರ್ಮಶಾಸ್ತ್ರದಲ್ಲಿ ಪದವಿ (1986–1990) ಪಡೆದುಕೊಂಡರು. ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ., ಆಳಮನಶಾಸ್ತ್ರ ಹಾಗೂ ರೂಪಣೆಯಲ್ಲಿ ಡಿಪ್ಲೊಮಾ, ನಂತರ ಲಿಸೆನ್ಷಿಯೇಟ್ ಹಾಗೂ ಬೆಲ್ಜಿಯಂನ ಲೂವನ್ ಕ್ಯಾಥೋಲಿಕ್ ವಿಶ್ವವಿದ್ಯಾಲಯದಲ್ಲಿ ನೈತಿಕ ಧರ್ಮಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ.

1990 ಮೇ 10ರಂದು ಮಂಗಳೂರು ಧರ್ಮಕ್ಷೇತ್ರಕ್ಕೆ ಧರ್ಮಗುರುಗಳಾಗಿ ಅಭಿಷಿಕ್ತರಾದ ಅವರು, ಕುಂದಾಪುರ ಹಾಗೂ ಕುಲಶೇಖರದ ದೇವಾಲಯಗಳಲ್ಲಿ ಸಹಾಯಕ ಧರ್ಮಗುರುಗಳಾಗಿ ಸೇವೆ ಸಲ್ಲಿಸಿದರು. ಬಳಿಕ ಮಂಗಳೂರಿನ ಸೈಂಟ್ ಜೋಸೆಫ್ ಧರ್ಮಗುರು ತರಬೇತಿ ಕೇಂದ್ರದಲ್ಲಿ ನೈತಿಕ ಧರ್ಮಶಾಸ್ತ್ರ ಪ್ರಾಧ್ಯಾಪಕರಾಗಿಯೂ ರೂಪಕಾರರಾಗಿಯೂ ಕಾರ್ಯನಿರ್ವಹಿಸಿದರು. ಪಾಂಗ್ಳಾ/ಶಂಕರಪುರದ ಸಂತ ಜಾನ್ ಎವಾಂಜೆಲಿಸ್ಟ್ ದೇವಾಲಯ (2010–2017) ಹಾಗೂ ಕಲ್ಯಾಣ್ ಪುರ–ಸಂತೆಕಟ್ಟೆಯ ಮೌಂಟ್ ರೋಸರಿ ದೇವಾಲಯದ ಧರ್ಮಗುರುಗಳಾಗಿ (2017–2022) ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. 2022ರಿಂದ ಶಿರ್ವಾದ ಆರೋಗ್ಯ ಮಾತೆ ದೇವಾಲಯದ ಧರ್ಮಗುರುಗಳಾಗಿ ಹಾಗೂ ಶಿಕ್ಷಣ ಸಂಸ್ಥೆಗಳ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇದರ ಜೊತೆಗೆ, ಉಡುಪಿ ಧರ್ಮಕ್ಷೇತ್ರದ ಧರ್ಮಗುರುಗಳ ಸಭೆಯ ಕಾರ್ಯದರ್ಶಿ, ಶಿರ್ವಾ ಡೀನರಿಯ ವಿಕಾರ್ ಫೋರೇನ್, ಧರ್ಮ ನ್ಯಾಯಾಲಯದ ವಕೀಲ ಹಾಗೂ ಸಲಹೆಗಾರರ ಕಾಲೇಜಿನ ಸದಸ್ಯರಾಗಿಯೂ ಅವರು ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಲೆಸ್ಲಿ ಕ್ಲಿಫರ್ಡ್ ಡಿಸೋಜ ಅವರ ನೇಮಕ ಉಡುಪಿ ಧರ್ಮಕ್ಷೇತ್ರದ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದ್ದು, ವಿಶ್ವಾಸಿಗಳಲ್ಲಿ ಸಂತಸ ಮತ್ತು ನಿರೀಕ್ಷೆಯನ್ನು ಮೂಡಿಸಿದೆ.

You may also like

News

ಕಂಬಳ ಕೋಣಗಳ ಮಾಲೀಕನಿಗೆ ಹಲ್ಲೆ, ಸುಲಿಗೆ ಯತ್ನ ಪ್ರಕರಣ – ಮೂವರು KCOCA ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು

ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ವಕೀಲರಾದ ಮಹೇಶ್ ಕಜೆ ಅವರು ಮಂಡಿಸಿದ ವಾದ ಕಂಬಳದಲ್ಲಿ ಗೆದ್ದ ಕೋಣಗಳ ಮಾಲೀಕನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ
News

ಮಂಗಳೂರಿನ ದೇರಳಕಟ್ಟೆಯ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿ ವೀಣಾ ಡೇಸಾ ಇನ್ನಿಲ್ಲ

ಮಂಗಳೂರಿನ ದೇರಳಕಟ್ಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ರಾಣಿಪುರದ 49 ವರ್ಷ ಪ್ರಾಯದ ವೀಣಾ ಡೇಸಾ ಅವರು ಜೂನ್ 7ರಂದು ಭಾನುವಾರ

You cannot copy content of this page