7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಕೊಲ್ಲಂನಲ್ಲಿ ಕಂಕನಾಡಿ ನಗರ ಪೊಲೀಸ್ ಕಾರ್ಯಾಚರಣೆ

ಕಂಕನಾಡಿ ನಗರ ಪೊಲೀಸ್ ಠಾಣೆ ಅ.ಕ್ರ. 69/2019, ಐಪಿಸಿ ಸೆ. 409, 420, 507 ಹಾಗೂ 34ರಡಿ ದಾಖಲಾಗಿದ್ದ ಪ್ರಕರಣದಲ್ಲಿ ಕಳೆದ 7 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಾದ ನಂತರದಿಂದಲೇ ಆರೋಪಿಯು ನ್ಯಾಯಾಲಯದ ಪ್ರಕ್ರಿಯೆಗೆ ಸಹಕರಿಸದೆ ಪರಾರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು ದಸ್ತಗಿರಿ ವಾರಂಟ್ ಹೊರಡಿಸಿತ್ತು. ಆರೋಪಿಯು ದಸ್ತಗಿರಿಗೆ ಸಿಗದೆ ತಲೆಮರೆಸಿಕೊಂಡಿದ್ದರಿಂದ absconding charge sheet ಕೂಡ ದಾಖಲಿಸಲಾಗಿತ್ತು.

ಇಂದು ಮಾನ್ಯ ಸಹಾಯಕ ಪೊಲೀಸ್ ಆಯುಕ್ತರು, ದಕ್ಷಿಣ ಉಪವಿಭಾಗ ಹಾಗೂ ಮಾನ್ಯ ಪೊಲೀಸ್ ನಿರೀಕ್ಷಕರು, ಕಂಕನಾಡಿ ನಗರ ಪೊಲೀಸ್ ಠಾಣೆ ಇವರ ಮಾರ್ಗದರ್ಶನದಲ್ಲಿ, ಪೊಲೀಸ್ ಉಪ ನಿರೀಕ್ಷಕರು ಕಂಕನಾಡಿ ನಗರ ಠಾಣೆ ಇವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಗಳಾದ HC 944 ಬಾಲರಾಜ್ ಮತ್ತು PC 3046 ರವಿಕುಮಾರ್ ಅವರು ದಿನಾಂಕ 03-02-2026 ರಂದು ಕೇರಳ ರಾಜ್ಯದ ಕೊಲ್ಲಂ ನಗರದ ವಟ್ಟಕುಟ್ಟು ಲಲಿತ ಮಂದಿರಮ್ನಲ್ಲಿರುವ ಆರೋಪಿಯ ನಿವಾಸದಲ್ಲಿ ದಸ್ತಗಿರಿ ಮಾಡಿದ್ದಾರೆ. ಬಂಧಿತ ಆರೋಪಿಯನ್ನು ಕೇರಳದ ಕೊಲ್ಲಂನ, ವಟ್ಟಕುಟ್ಟು ಜಂಕ್ಷನ್ ಹತ್ತಿರದ ಲಲಿತ ಮಂದಿರ ನಿವಾಸಿ 66 ವರ್ಷ ಪ್ರಾಯದ ಜಯಚಂದ್ರ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದಾಗಿ ಪೊಲೀಸರು ತಿಳಿಸಿದ್ದಾರೆ.




