ತ್ರಾಸಿ ರಾಜು ದೇವಾಡಿಗ ಅಗಲಿಕೆಯಿಂದ ಕಾಂಗ್ರೆಸ್ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟ – MLC ಮಂಜುನಾಥ ಭಂಡಾರಿ
ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಸಮಾಜಸೇವಕ ತ್ರಾಸಿ ರಾಜು ದೇವಾಡಿಗ ಅವರ ನಿಧನವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಲ್ಲದೆ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ MLC ಮಂಜುನಾಥ ಭಂಡಾರಿ ಅವರು ಕಂಬನಿ ಮಿಡಿದಿದ್ದಾರೆ. ತ್ರಾಸಿ ರಾಜು ದೇವಾಡಿಗ ಅವರು ಜನಸೇವೆ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳು ಅಗ್ರಗಣ್ಯವಾಗಿದ್ದು, ಪಕ್ಷ ಸಂಘಟನೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಆಸ್ಕರ್ ಫೆರ್ನಾಂಡಿಸ್ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಸಂದರ್ಭದಲ್ಲಿ ಅವರೊಂದಿಗೆ ಪಕ್ಷದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದ ನೆನಪುಗಳು ಇನ್ನೂ ಹಚ್ಚಹಸಿರಾಗಿವೆ ಎಂದು ಭಂಡಾರಿ ಅವರು ಸ್ಮರಿಸಿದರು.

ನಂತರದ ದಿನಗಳಲ್ಲಿ ತಮ್ಮ ಅತ್ಯಂತ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡಿದ್ದ ರಾಜು ದೇವಾಡಿಗ ಅವರು, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ತಾವು ಸ್ಪರ್ಧಿಸಿದ ಸಂದರ್ಭದಲ್ಲೂ ಬೈಂದೂರು ಕ್ಷೇತ್ರದಲ್ಲಿ ಪಕ್ಷದ ಬೆನ್ನೆಲುಬಾಗಿ ನಿಂತು ನಿರಂತರವಾಗಿ ದುಡಿದಿದ್ದರು ಎಂದು ಅವರು ಹೇಳಿದರು. ತಮ್ಮ ಪ್ರತಿಯೊಂದು ರಾಜಕೀಯ ಏಳಿಗೆಯಲ್ಲೂ ಯಾರಿಗೂ ಕಾಣದ ರೀತಿಯಲ್ಲಿ ಸಂಪೂರ್ಣ ಸಹಕಾರ ನೀಡಿದ್ದ ರಾಜು ದೇವಾಡಿಗ ಅವರ ಅಗಲಿಕೆ ಕಾಂಗ್ರೆಸ್ ಪಕ್ಷಕ್ಕೂ, ವಿಶೇಷವಾಗಿ ಬೈಂದೂರು ಹಾಗೂ ಸುತ್ತಮುತ್ತಲಿನ ಬಡಜನರ ಪಾಲಿಗೆ ಭರಿಸಲಾರದ ನೋವನ್ನುಂಟು ಮಾಡಿದೆ ಎಂದು ಮಂಜುನಾಥ ಭಂಡಾರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




