ಧರ್ಮಸ್ಥಳ ರತ್ನಾಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿಗೆ ಭವ್ಯ ಪಾದಾಭಿಷೇಕ
ಧರ್ಮಸ್ಥಳದ ರತ್ನಾಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿ ಸ್ವಾಮಿಯ ಮೂರ್ತಿಗೆ ಫೆಬ್ರವರಿ 3ರಂದು ಮಂಗಳವಾರ ಬೀಡಿನಿಂದ ರತ್ನಾಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ವೈಭವೋಪೇತ ಪಾದಾಭಿಷೇಕ ನೆರವೇರಿತು. ಕಾರ್ಕಳ ಜೈನ ಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹಾಗೂ ಕ್ಷಲ್ಲಂಕ ನಿರ್ವಾಣ ಸಾಗರ ಮಹಾರಾಜರು ಭಗವಾನ್ ಬಾಹುಬಲಿ ಸ್ವಾಮಿಗೆ ಪಾದಾಭಿಷೇಕ ನೆರವೇರಿಸಿದರು. ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾ ವರ್ಮಾ ಹಾಗೂ ಪೂರನ್ ವರ್ಮಾ ಅವರುಗಳೂ ಪಾದಾಭಿಷೇಕದಲ್ಲಿ ಭಾಗವಹಿಸಿದರು.

216 ಕಲಶಗಳಿಂದ ಜಲಾಭಿಷೇಕ ನೆರವೇರಿಸಿದ ಬಳಿಕ ಇಕ್ಷು ರಸ (ಕಬ್ಬಿನ ಹಾಲು), ಗಂಧ, ಚಂದನ, ಅರಶಿಣ, ಕಲ್ಕಚೂರ್ಣ ಸೇರಿದಂತೆ ವಿವಿಧ ಮಂಗಳ ದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು. ಬಾಹುಬಲಿ ಸೇವಾ ಸಮಿತಿಯ ಸದಸ್ಯರಿಂದ ಜಿನಭಕ್ತಿಗೀತೆಗಳ ಸುಶ್ರಾವ್ಯ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗು ನೀಡಿತು. ಪೂರ್ಣಕುಂಭದಿಂದ ಪಾದಾಭಿಷೇಕ, ಪುಷ್ಪವೃಷ್ಟಿ, ಮಹಾಮಂಗಳಾರತಿ ಹಾಗೂ ಶಾಂತಿಮಂತ್ರ ಪಠಣದೊಂದಿಗೆ ಸಮಾರಂಭ ಸಮಾಪನಗೊಂಡಿತು.


ಈ ಸಂದರ್ಭ ಮಂಗಲ ಪ್ರವಚನ ನೀಡಿದ ಕಾರ್ಕಳ ಜೈನ ಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ, ಇಂದಿನ ಮಕ್ಕಳಿಗೆ ಉತ್ತಮ ಧಾರ್ಮಿಕ ಹಾಗೂ ನೈತಿಕ ಸಂಸ್ಕಾರ ನೀಡುವುದು ಅಗತ್ಯ ಎಂದು ಹೇಳಿದರು. ಬಾಹುಬಲಿಯ ತ್ಯಾಗ ಮತ್ತು ಅಹಿಂಸೆಯ ಮೌಲ್ಯಗಳು ವಿಶ್ವಮಾನ್ಯವಾಗಿದ್ದು, ಜೈನಧರ್ಮದ ಮರ್ಮವನ್ನು ಅರಿತು ವೃತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಜೀವನ ನಡೆಸಬೇಕು ಎಂದರು.

ಕ್ಷಲ್ಲಂಕ ನಿರ್ವಾಣ ಸಾಗರ ಮಹಾರಾಜರು ಮಾತನಾಡಿ, ಸಮ್ಯಕ್ ದರ್ಶನ, ಸಮ್ಯಕ್ ಜ್ಞಾನ ಮತ್ತು ಸಮ್ಯಕ್ ಚಾರಿತ್ರ್ಯ ಎಂಬ ತ್ರಿರತ್ನಗಳ ಪಾಲನೆಯಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.




