ಪುತ್ತೂರಿನ ನೂತನ ನ್ಯಾಯಾಲಯ ಸಂಕೀರ್ಣದ ಚೊಚ್ಚಲ ತೀರ್ಪು
ಅಕ್ರಮ ಮದ್ಯ ಮಾರಾಟ ಪ್ರಕರಣದ ಆರೋಪಿ ದೋಷಮುಕ್ತ

ಪುತ್ತೂರಿನ ಪ್ರಖ್ಯಾತ ಹಾಗೂ ಪ್ರತಿಷ್ಠಿತ ನ್ಯಾಯವಾದಿ ಮಹೇಶ್ ಕಜೆ ಅವರು ಮಂಡಿಸಿದ ವಾದ

ಪುತ್ತೂರು ಬನ್ನೂರಿನ ಆನೆಮಜಲಿನಲ್ಲಿ ನೂತನವಾಗಿ ಲೋಕಾರ್ಪಣೆಗೊಂಡ ನ್ಯಾಯಾಲಯ ಸಂಕೀರ್ಣದಲ್ಲಿ ಪ್ರಥಮ ತೀರ್ಪು ಪ್ರಕಟವಾಗಿದ್ದು, ಅಕ್ರಮ ಮದ್ಯ ಮಾರಾಟದ ಆರೋಪ ಹೊತ್ತಿದ್ದ ವ್ಯಕ್ತಿಯೊಬ್ಬರು ದೋಷಮುಕ್ತರಾಗಿದ್ದಾರೆ.
ಪ್ರಕರಣದ ಹಿನ್ನೆಲೆ:
2022ರ ಜೂನ್ 1 ರಂದು ನೆಲ್ಯಾಡಿ ಶಿರಾಡಿ ಗ್ರಾಮದ ಕುದ್ರೋಳಿ ಎಂಬಲ್ಲಿ ಅಕ್ರಮವಾಗಿ ಮದ್ಯ ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಪೊಲೀಸರು ದಾಳಿ ನಡೆಸಿದ್ದರು. ಈ ಸಂಬಂಧ ಪದ್ಮನಾಭ ಎಂಬವರ ವಿರುದ್ಧ ಪ್ರಕರಣ ದಾಖಲಿಸಿ, ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ನ್ಯಾಯಾಲಯದ ತೀರ್ಪು:
ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಈ ಪ್ರಕರಣದ ವಿಚಾರಣೆ ಪುತ್ತೂರಿನ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಹಾಗೂ ಜೆಎಂಎಫ್ಸಿ ನ್ಯಾಯಾಲಯದಲ್ಲಿ ನಡೆಯಿತು. ಸಾಕ್ಷಿದಾರರ ವಿಚಾರಣೆಯ ವೇಳೆ ಆರೋಪದ ವಿರುದ್ಧ ಯಾವುದೇ ಬಲವಾದ ಪುರಾವೆಗಳು ಲಭ್ಯವಾಗದ ಕಾರಣ, ನ್ಯಾಯಾಧೀಶರಾದ ಶಿವಣ್ಣ ಅವರು ಆರೋಪಿ ಪದ್ಮನಾಭ ಅವರನ್ನು ದೋಷಮುಕ್ತಗೊಳಿಸಿ ಆದೇಶ ಹೊರಡಿಸಿದ್ದಾರೆ.


ವಾದಿಸಿದ ವಕೀಲರು :
ಆರೋಪಿ ಪರವಾಗಿ ಪುತ್ತೂರಿನ ಕಜೆ ಲಾ ಚೇಂಬರ್ಸ್ ಇದರ ಪ್ರಖ್ಯಾತ ಹಾಗೂ ಪ್ರತಿಷ್ಠಿತ ನ್ಯಾಯವಾದಿ ಮಹೇಶ್ ಕಜೆ ಅವರು ವಾದ ಮಂಡಿಸಿದ್ದರು.
ಐತಿಹಾಸಿಕ ಕ್ಷಣ:
ಇತ್ತೀಚೆಗಷ್ಟೇ ಉದ್ಘಾಟನೆಗೊಂಡ ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಕಲಾಪಗಳು ಆರಂಭಗೊಂಡ ಮೊದಲ ದಿನವೇ ಈ ತೀರ್ಪು ಹೊರಬಿದ್ದಿರುವುದು ವಿಶೇಷ. ಆನೆಮಜಲಿನಲ್ಲಿ ನ್ಯಾಯಾಂಗ ಕಾರ್ಯ ಚಟುವಟಿಕೆಗಳು ಶುರುವಾದ ಬಳಿಕ ದಾಖಲಾದ ಅಧಿಕೃತ ಮೊದಲ ತೀರ್ಪು ಇದಾಗಿದೆ.





