ಉಪ್ಪಿನಂಗಡಿಯಲ್ಲಿ ಯುಡಿಆರ್ ಪ್ರಕರಣ ಕೊಲೆ ಪ್ರಕರಣಕ್ಕೆ ತಿರುವು – ಮೂವರ ಬಂಧನ
ತೋಮಸ್ ಹಾಗೂ ಸಂಬಂಧಿಕರ ಬಂಧನ

ಉಪ್ಪಿನಂಗಡಿ: ದಿನಾಂಕ 09.02.2026 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಯುಡಿಆರ್ 07/2026, ಕಲಂ 194 (III)(IV) BNSS 2023 ಅಡಿ ದಾಖಲಾಗಿದ್ದ ಪ್ರಕರಣವು ಇದೀಗ ಕೊಲೆ ಪ್ರಕರಣವಾಗಿ ಮಾರ್ಪಟ್ಟಿದೆ. 73 ವರ್ಷ ಪ್ರಾಯದ ಕೆ.ಸಿ. ವರ್ಗೀಸ್ ಅವರು ತಲೆಗೆ ಉಂಟಾದ ಗಂಭೀರ ಹಲ್ಲೆ ಹಾಗೂ ದೇಹದ ಇತರ ಭಾಗಗಳಿಗೆ ಆಗಿರುವ ಗಾಯಗಳಿಂದ ಮೃತಪಟ್ಟಿರುವುದಾಗಿ ವೈದ್ಯಕೀಯ ವರದಿ ಸ್ಪಷ್ಟಪಡಿಸಿದ ಹಿನ್ನೆಲೆಯಲ್ಲಿ, ದಿನಾಂಕ 13.02.2026 ರಂದು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ: 21/2026 u/s 103(1) BNS-2023 ಅಡಿ ಕೊಲೆ ಪ್ರಕರಣವಾಗಿ ಮರುದಾಖಲಿಸಿ ತನಿಖೆ ಮುಂದುವರಿಸಲಾಗಿದೆ.


ಪೊಲೀಸ್ ತನಿಖೆಯ ಪ್ರಕಾರ, ಮೃತ ಕೆ.ಸಿ. ವರ್ಗೀಸ್ ಅವರು ತಮ್ಮ ಪತ್ನಿಗೆ ಹಲ್ಲೆ ನಡೆಸಿದ್ದು, ಆಕೆ ಮನೆಯಿಂದ ಸ್ವಲ್ಪ ದೂರ ಹೋಗಿ ಕುಳಿತಿದ್ದಳು. ಇದನ್ನು ಗಮನಿಸಿದ ಒಬ್ಬ ವ್ಯಕ್ತಿ ಆಕೆಯ ಮಗ ಕೆ.ವಿ. ತೋಮಸ್ ಅವರಿಗೆ ಮಾಹಿತಿ ನೀಡಿದ್ದಾನೆ. ಬಳಿಕ ತೋಮಸ್ ಅವರು ಪರಿಚಯದ ಆಟೋ ರಿಕ್ಷಾವನ್ನು ಕರೆಸಿ ತಾಯಿಯನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.
ಈ ನಡುವೆ ಆಕೆಯ ತಮ್ಮ ರಾಜು ಆಸ್ಪತ್ರೆಗೆ ಬಂದು ಘಟನೆ ತಿಳಿದು, ತಮ್ಮ ಚಾಕೊಚ್ಚನಿಗೆ ಕರೆ ಮಾಡಿ ವಿಷಯ ತಿಳಿಸಿ ತಕ್ಷಣ ಬರಲು ಹೇಳಿದ್ದಾನೆ. ನಂತರ ಚಾಕೊಚ್ಚ ಮತ್ತು ರಾಜು ಅವರು ಥಾಮಸ್ ಜೊತೆ ಚರ್ಚಿಸಿ, ಥಾಮಸ್ ಅವರನ್ನು ಸ್ವಲ್ಪ ದೂರ ಬಿಟ್ಟು ಮೃತ ವ್ಯಕ್ತಿಯ ಮನೆಗೆ ಒಳಗೆ ಹೋಗಿ ಕೆ.ಸಿ. ವರ್ಗೀಸ್ ಅವರಿಗೆ ಕಟ್ಟಿಗೆಯಿಂದ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಹಲ್ಲೆ ಬಳಿಕ ಹೊರಬಂದು ತೋಮಸ್ ಅವರಿಗೆ “ಅವರಿಗೆ ಸರಿಯಾಗಿ ಹೊಡೆದಿದ್ದೇವೆ, ಅವರನ್ನು ಆಂಬುಲೆನ್ಸ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಿ” ಎಂದು ಹೇಳಿ ಅಲ್ಲಿಂದ ತೆರಳಿದ್ದಾರೆ ಎಂದು ತಿಳಿದುಬಂದಿದೆ. ನಂತರ ಆಸ್ಪತ್ರೆಗೆ ಕರೆದೊಯ್ಯುವ ವೇಳೆ, ಥಾಮಸ್ ಅವರು ತಮ್ಮ ತಂದೆ ಮಂಚದಿಂದ ಕೆಳಗೆ ಬಿದ್ದು ಕಲ್ಲಿಗೆ ತಲೆ ತಾಗಿದ ಪರಿಣಾಮ ಮೃತಪಟ್ಟಿರಬಹುದು ಎಂದು ಪೊಲೀಸರಿಗೆ ತಿಳಿಸಿದ್ದಾಗಿ ವರದಿ ಹೇಳುತ್ತದೆ.


ಆದರೆ ಉಪ್ಪಿನಂಗಡಿ ಪೊಲೀಸರು ಕೂಲಂಕುಶ ತನಿಖೆ ನಡೆಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ. ಪ್ರಕರಣ ಸಂಬಂಧ ಕೆ.ವಿ. ತೋಮಸ್ @ ವಿಲ್ಸನ್ (39) ನೆಲ್ಯಾಡಿ, ಕಡಬ ತಾಲೂಕು, ಸಿ.ಟಿ. ರಾಜು @ ವರ್ಗೀಸ್ (59) ಅರಸಿನಮಕ್ಕಿ, ಬೆಳ್ತಂಗಡಿ ತಾಲೂಕು ಹಾಗೂ ಚಾಕೊಚ್ಚ (51) ನೆಲ್ಯಾಡಿ, ಕಡಬ ತಾಲೂಕು ಇವರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.




